Showing posts with label ಸಾಗರಿಯ ಕವನಗಳು. Show all posts
Showing posts with label ಸಾಗರಿಯ ಕವನಗಳು. Show all posts

Friday, July 9, 2010

ಸಾಗರಿಯ ಕವನಗಳು

ಕಾಮ(ದ) ದಾಹ..

ಕಾಡಿನ ಸಂದು ಗೊಂದುಗಳಲ್ಲಿ
ಮಿಣ್ಣನವಿತು ಕುಳಿತ
ಕಾಮ
ಮೋಜೆನಿಸಿ
ಕಪ್ಪೆಯಂತೆ ಜಿಗಿದು
ಆಗಸಕ್ಕೇರಿ ಸ್ವರ್ಗ ಸೇರಿತು.

ಕಣ್ಣಿಟ್ಟಲ್ಲೆಲ್ಲಾ ಸಿಂಗಾರ ಬಂಗಾರ
ವರ್ಷವಿಡೀ ವಸಂತ, ಎಂದೂ
ಮಾಸದ ವಸಂತ
ಚೆಲ್ಲಾಡುವ ಹರೆಯ
ಢೊಲು, ಸಂಗೀತ, ಕುಣಿತ
ಸ್ವರ್ಗದವರೆಲ್ಲಾ ಮೀಯುವುದು
ಮದಿರೆಯಲ್ಲೇ ಎಂದು
ಎಂದೋ ಕೇಳಿದ್ದು
ಇಂದು ಕಂಡಂತಾಗಿತ್ತು..,

ಜೀವನ ಪರ್ಯಂತ
ಇಲ್ಲೇ ಇದ್ದು ಬಿಡಬೇಕೆಂದುಕೊಂಡ
ಮರುದಿನವೇ
ಕಾಮ
ಅಲ್ಲಿಯವರ ತೃಪ್ತ ಕಂಗಳ ಕಂಡು
ಕಂಗೆಟ್ಟು ಬರುಡಾಗಿ
ತನ್ನಿರುವಿಗಿಲ್ಯಾವ ಬೆಲೆಯಿಲ್ಲ
ಕಾಮ ಪ್ರೇಮದಲ್ಲಿವರು
ಸಂತುಷ್ಟರೆಂದರಿತು
ದಾರಿ ಕಾಣದಂತಾಗಿ
ಭೂಮಿಗುದುರಿತು..

ಕಂಡಿದ್ದೆನಿಲ್ಲಿ..
ಪ್ರತಿಯೊಬ್ಬರೂ
ದಾಹದಲ್ಲುರಿಯುತ್ತಿರುವ
ಒಂದೊಂದು ಚಿತೆಗಳು,,
ತೀರದ ಕಾಮ
-ದ ಕಡಲಲ್ಲಿ ಮುಳುಗಿದ
ಪ್ರತಿ ದೇಹವೂ ತಣಿಸಲಾರದ
ತುಡಿತದಿಂದ ತಪಿಸುತ್ತಿತ್ತು.

ಕಾಪುರುಷರ ಲೋಕದಲ್ಲಿ
ಕಾಮಕ್ಕೆಲ್ಲಿದೆ ಬಿಡುವು
ದಣಿದಷ್ಟೂ ಖುಶಿ ಕೊಡುವ
ಆಟವಲ್ಲವೇ ಇದು!!

ಹೊಟ್ಟೆಯ ಹಸಿವು, ಕಾಮ-ಮೋಹ
ಎಂದು ತೀರಿದ್ದಿದೆ,
ಪಡೆದಷ್ಟೂ ಬೇಕೆನಿಸಿ ಸುಖಿಸಿ
ಮತ್ತೆ ಹುಡುಕುವ ಚಪಲರ ದಂಡು ಕಂಡು
ಕಾಡು-ಮೇಡು, ಸ್ವರ್ಗದಲ್ಲೆಲ್ಲೂ ಇರದ
ದಾಹದ
ರೌರವವ ನೋಡಿ
ಹಿರಿಮೆಗೊಂಡು
ಕಾಮ,,,
"ಸ್ವರ್ಗಕ್ಕೆ
ಮತ್ತೊಮ್ಮೆ ಕಿಚ್ಚು ಹಚ್ಚೆಂದಿತು.."

Wednesday, June 23, 2010

ನೆರೆ-ಹೊರೆ(ಸ್ವಲ್ಪ ಜಾಸ್ತಿಯೇ ಹೊರೆ!!)

ನೆರಮನೆ


ನೆರಮನೆಯ
ಕಾಂಪೌಂಡು
ನಮ್ಮ ಮನೆಯ ಕಸದ ತೊಟ್ಟಿ,
ಯಾರೂ
ಕಣ್ಣಿಗೆ ಬೀಳದಿದ್ದಾಗ
ಉದುರಿದ ಒಣ ಎಲೆ, ಹಕ್ಕಿ ಪಿಷ್ಟಿ,
ಕಿಗ್ಗು ತೆಗೆದ ಹತ್ತಿ ಉಂಡೆ
ಚಾಕಲೇಟು ಸಿಪ್ಪೆ, ತರಕಾರಿ ಸೊಪ್ಪೆ
ಎಲ್ಲವನ್ನೂ
ಕಣ್ಣುಮುಚ್ಚಿ ಎಸೆಯಬಹುದಾದ
ಸುರಕ್ಷಿತ ಜಾಗ..

ನೆರಮನೆ,,
ನನ್ನವಳ ಕೋಪಗೃಹ
-ಅಡಿಗೆ ಮನೆಗೆ ಕಾಲಿಡದ ಹಠ ಹೂಡಿ
ಬಿಮ್ಮನೆ ಬಾಗಿಲೆರಸಿ
ಸುಲಭವಾಗಿ ನುಸುಳಿಕೊಳ್ಳಲು ಸಿಗುವ
ಅಡಗು ತಾಣ
ಒಂದೇ ಮಾತಲ್ಲಿಡುವುದಾದರೆ
ನೆರಮನೆಯಲ್ಲಿ ನನ್ನವಳ
ಉಪವಾಸ ಸತ್ಯಾಗ್ರಹ,,
ವ್ಯತ್ಯಾಸವಿಷ್ಟೇ
ಉಪವಾಸ ನನಗೆ
ಸತ್ಯಾಗ್ರಹಅವಳಿಗೆ.

ನೆರಮನೆ,,
ಹರಟೆ ಹೊಡೆಯಲು ಹವಣಿಸಿ
ಹಸಿದ
ಅತೃಪ್ತ ಆತ್ಮಗಳಿಗೆ
ದಿವ್ಯ ಸನ್ನಿಧಿ.
ತೂತಾಗದ ಕಿವಿ, ಒಡೆಯದ ಬಾಯಿ
ಹೊಂದಿರುವವರ
ಅತ್ಯದ್ಭುತ ಲೋಕ..

ಹ್ಹೆ,,ಹ್ಹೀ ನಮ್ಮದೂ ಅದೇ ಕುಟುಂಬ..
?
?
ನಮ್ಮನೆಯೂ ಇಲ್ಲೊಬ್ಬರ
ನೆರಮನೆಯೇ ಸರಿ..!

ವಿಗ್ರಹವಾಕ್ಯ ಬಿಡಿಸಿ ಸಮಾಸ ಹೆಸರಿಸಿದರೆ
ನೆರ(ರೆ)ಮನೆ= ಈಗಲೋ ಆಗಲೋ ಮುಳುಗಿಸುವ(ಮುಳುಗಿಸಲು ಹೊಂಚಿರುವ) ನೆರೆಯಲ್ಲಿರುವ ಮನೆ
ಷಷ್ಟಿ ತತ್ಪುರುಷ ಸಮಾಸ.

(ವ್ಯಾಕರಣಕಾರರ ಕ್ಷಮೆಕೋರಿ.)

Thursday, April 8, 2010

ಈ ಕವನ ರಾತ್ರಿ ರಾಣಿಯರಿಗಾಗಿ

ಅವಳೂ ಮತ್ತು ಅವನೂ....

ಲಗು ಬಗನೆ ಮಾಡಿಟ್ಟ
ಪಲ್ಯ, ಗೊಜ್ಜು, ಹುಳಿ
ಒಗ್ಗರಿಸಲೂ ಮರೆತ ತಂಬಳಿ
ಪುರುಸೊತ್ತಿಲ್ಲದೆ ಗಿಳಿಗೂಟಕ್ಕೆ
ಹಾಗೆಯೇ ಸಿಕ್ಕಿಸಿದ ಸೀರೆ, ಪರಿಕಾರ, ಕೌಪು
ಸರಗೋಲು ಸರಿಸಲೂ ಮರೆತ ನೆನಪು..
'ಎನೆನ್ನುವನೋ ನನ್ನ ಮಗರಾಯ
ಇವತ್ತಿನ ಕೊನೆಯ ಗಿರಾಕಿ ಮುಗಿದರೆ ಸಾಕು'
ಎಂದು ಓಡಲು ತಯಾರಾದ ಕಾಲು
ಅವಳು ಮೈ ಕೊಡವಿ ಮೇಲೆದ್ದು
ನೆರಿಗೆ ಎಣಿಸಿ, ಸೆರಗ ಮುಸುಕೆಳೆದಳು...


ಹೊರಗಡೆ ಯಜಮಾನಪ್ಪನ ಜೋರು
ಬಿಚ್ಚಯ್ಯ ಇನ್ನೂ ಒಂದು ನೂರು
ನಡೆದಿತ್ತು ಚೌಕಾಸಿ
ಕದ ಮುಚ್ಚಿದ ಕೋಣೆಯೊಳಗೆ ಎಲ್ಲವೂ ಅಸಷ್ಟ.
ಏನೇನೋ ಮಸಲತ್ತು ನಡೆಸಿ
ಒಳಬಂದ ಅವನು
ಅವಳ ಇಂದಿನ ಕೊನೆಯ ಗಿರಾಕಿ.


ದಂಧೆಯ ಉಸೂಲೇ ಹಾಗೆ
ನಯ, ನಾಜೂಕು, ನಾಚಿಕೆ, ಹುಸಿ ಮುನಿಸು, ನಗು
ದಿನ ದಿನವೂ ನವ ವಧುವಿನ ಬಳುಕು
ವಯ್ಯಾರದ ಥಳಕು.
ಆದರೂ ಅವಳಿಗೆ ಒಳಗೊಳಗೆ
ಮಗನದೇ ಹಂಬಲ
ಹಸಿದುಬಂದವ ಉಂಡನೋ
ಇಲ್ಲಾ ಹಾಗೆಯೇ ಒರಗಿಬಿಟ್ಟನೋ..


ಒಳ
ಬಂದವನು ಹಾಗೆಯೇ ತಲೆಗೆ ಹೊದ್ದ
ಸೆರಗನ್ನೂ ಸರಿಸದೆ ಕೈ ಹಿಡಿದ ಮೆತ್ತಗೆ,
ಅವಳೂ ತಲೆ ಎತ್ತಲಿಲ್ಲ,
ಎಂದಿನಂತೆ ನಾಚಿ ನೀರಾದಳು..
ಮತ್ತೆ ಮತ್ತೆ
ಮೆಲ್ಲಗೆ ಅವನ ಕೈ ಅಮುಕಿದಳು,, ಅವಳಿಗೋ
ಮಗನದೇ ಚಿಂತೆ..
ವರ್ಷ ಇಪ್ಪತ್ತಾದರೂ ಮಗನಿಗಿದು
ತಿಳಿದಿಲ್ಲ, ಎಷ್ಟಾದರೂ ಹೈ ಗೈ ಎನ್ನದಂತೆ
ಸಾಕಿಲ್ಲವೆ ಇವಳು!!


ಅವನಿನ್ನೂ ಕೈ ಹಿಡಿದೇ ನಿಂತಿದ್ದ
ಮುಂದುವರಿಯದೆ,,
ತಾಳಲಾರದೆ ಅವಳೇ ಕೇಳಿದಳು
ತಲೆ ಎತ್ತದೆ,,
ಮೊದಲ ಬಾರಿಯೇ????
....
....
....

ಸಂಕೋಚವೇ????
ಅವನೆಂದ
ಹಾಗೇನಿಲ್ಲ,
ನಡೆಯಮ್ಮ ಹೋಗೋಣ ಮನೆಗೆ...

ದನಿ ಕೇಳಿ
ಕತ್ತಲಾದಂತೆನಿಸಿ
ಆಸರೆಗೆ ಅವನಿಗಾಗಿ ತಡಕಾಡಿದಳು..


ಚಿಕ್ಕ ಮಾತು:
ಈಗ್ಗೆ ಮೂರು ವರ್ಷದ ಹಿಂದೆ ನಾನು IFMR ಲ್ಲಿ ಫೀಲ್ಡ್ ಇನ್ವೆಸ್ಟಿಗೇಟರ್ ಅಗಿದ್ದಾಗಲೂ ISEC (Institute for Social & Economic Change) ವಸತಿ ನಿಲಯದಲ್ಲಿ ನನ್ನ ಸೀನಿಯರ್ (ಆಕೆ ನನಗೆ ಅಕ್ಕನಿಗಿಂತಲೂ ಒಂದು ಕೈ ಮಿಗಿಲು) ಜೊತೆ ಇದ್ದೆ. ಭಾನುವಾರ ಅಥವಾ ಹಬ್ಬ ಹರಿದಿನದ ರಜಾ ದಿನಗಳಲ್ಲಿ ನಾನು ಕನ್ನಡ-ಹಿಂದಿ ಟ್ರಾನ್ಸ್ಲೇಟರ್ ಆಗಿ research students ಜೊತೆ ಅಗಾಗ ಹೋಗುವುದಿತ್ತು. ಅಂದೂ ಹೋಗಿದ್ದೆ, ರಾಜರಾಜೇಶ್ವರಿ ನಗರದ ಸಮೀಪ ಇರುವ ನಾಯಂಡ ಹಳ್ಳಿಗೆ.. AIDS ತಗಲಿದ ವೇಶ್ಯೆಯರ ಜೊತೆ ಮಾತು ಕತೆಗೆ. ಇದೊಂದು ಥರದ ಬೇರೆಯದೇ ರೀತಿಯ ಅನುಭವ ಕೊಟ್ಟಿತ್ತು ನನಗೆ.

28-30 ಮಹಿಳೆಯರಿರುವ ಸಂಘ ಅದು. ಚಿಕ್ಕ ರೂಮನ್ನು ಬಾಡಿಗೆಗೆ ಹಿಡಿದವರು ಸಂಘದ ಅಧೀಕೃತ ಸಭೆಗೆ ಅಲ್ಲಿಯೇ ವಾರಕ್ಕೆ ಮೂರು ದಿನ ಸೇರುತ್ತಿದ್ದರು. ಆಚೀಚೆಯವರಿಗೆ, ಖುದ್ದು ರೂಮನ್ನು ಬಾಡಿಗೆಗೆ ಕೊಟ್ಟ ಮಾಲೀಕನಿಗೂ ಇವರು AIDS ತಗಲಿದ ವೇಶ್ಯೆಯರೆಂದು ಗೊತ್ತಿಲ್ಲ. ನಮ್ಮನ್ನು ಅವರ ನಾಯಕಿ(ಸಂಘದ ಅಧ್ಯಕ್ಷೆ) ಬಹಳ ಆದರದಿಂದ ಬರಮಾಡಿಕೊಂಡರು. ಒಬ್ಬೊಬ್ಬರನ್ನಾಗಿ ಒಳ ಕರೆದು ಮಾತನಾಡಿಸುವುದು ಮತ್ತು ಮೊದಲೇ ತಯಾರಿಸಿದ ಒಂದಿಷ್ಟು ಪ್ರಶ್ನೆಗಳನ್ನು ಅವರಿಗೆ ಕೇಳುವುದು ನಮ್ಮ ಅಂದಿನ ಕೆಲಸ.

ಪ್ರತಿಯೊಂದು ಪ್ರಶ್ನೆಯೂ ಅತೀ ವೈಯಕ್ತಿಕವಾದ್ದು ಮತ್ತು ಮುಜುಗರ ತರಿಸುವಂಥದ್ದು. ಆದರೂ ಯಾರೊಬ್ಬರೂ ನಮ್ಮನ್ನು ಬೈಯದೆ, ತರಾಟೆಗೆ ತಗೊಳ್ಳದೆ ಬಹಳ ಸಹಕರಿಸಿದ್ದರು, ಅವರೆಲ್ಲರ ಕಣ್ಣೀರು ನಮ್ಮ ಹೆಗಲನ್ನೆಲ್ಲಾ ತೋಯಿಸಿತ್ತು. ಒಬ್ಬೊಬ್ಬರೂ ಅದೆಷ್ಟು ನೋವನುಂಡವರು...!! ಅವರಲ್ಲಿ ಕೆಲವರು ನಮ್ಮೆಲ್ಲರಂತೆ ಕುಟುಂಬಸ್ಥರು. ಗಂಡ ಹೆಂಡತಿ ಮಕ್ಕಳು...ಎಲ್ಲರೊಂದಿಗೆ ಸಾಮಾನ್ಯರಂತೆ ಬದುಕುವುದು, ಗಿರಾಕಿ ಬಂದಾಗ ಮಾತ್ರ ಶುದ್ಧ ವೇಶ್ಯಯರಾಗುವರು. ಅತ್ಯಾಶ್ಚರ್ಯವೆಂದರೆ ಅವರಲ್ಲಿನ ಎಷ್ಟೋ ಮಹಿಳೆಯರ ಮನೆಯವರಿಗೆ ಅವರು ವೇಶ್ಯೆ ಎಂಬುದೇ ಗೊತ್ತಿಲ್ಲ.., ಅವರೊಂದಿಗೆ ನಡೆದ ಮಾತು ಕತೆ ಹೇಳುವುದು ಬೇಕಷ್ಟಿದೆ.. ಅವೆಲ್ಲ ಇಲ್ಲಿ ಅಪ್ರಸ್ತುತ. ಒಟ್ಟಿನಲ್ಲಿ ಅಂದು ನಮ್ಮೊಂದಿಗೆ ಪ್ರೀತಿಯಿಂದ ಬೆರೆತು, ಅವರ ದುಃಖಕ್ಕೆ ನಮ್ಮ ಹೆಗಲನ್ನು ಆಸರೆಯಾಗಿ ಬಳಸಿ ಆತ್ಮೀಯತೆ ಮೆರೆದ, ಅವರ ತಟ್ಟೆಯ ಅನ್ನವನ್ನು ಕೈ ತುತ್ತೆಂದು ನಮಗೆ ಉಣ್ಣಿಸಿದ ಆ ಎಲ್ಲ ವೆಶ್ಯಾ ಮಣಿಗಳಿಗಾಗಿ ಈ ಕವನ...



Tuesday, March 23, 2010

believe in democracy :-) :-) :-)

ನಿನ್ನ ಮರ್ಜಿಗೆ ನಾನು ಊಹುಂ ಎನಲಾರೆ..



ಆರೇಳು ಫೋಟೆತ್ತರದ ಭಡ ದೇಹ
ಗಂಜಿಯ ನೆಳದಂತೆ
ಗಟಾರದಲ್ಲಿ
ಭಿಡೆ ಬಿಟ್ಟು
ಕೂಳು, ಕಸ, ಕಫ ಒಂದೂ ನೋಡದೆ
ನೆಕ್ಕಿ ಮುಕ್ಕಿ ಮೆಲುಕುವ,,
ಮನುಷ್ಯರಂತೆ ನಟಿಸಿ ನುಲಿಯುವ
ಧಣಿಗಳ
ಎಂದೂ ಹೊರಡದ ದನಿಗಳು ನಾವು..

ಜೀ ಹುಜೂರ್ ಎಂದು
ನಾವೇ ತೊಡಿಸಿದ ಹುಜೂರಿಕೆಯ ಪಟ್ಟ
ಬಾಗಿದರೆ ಬಿದ್ದೀತೆಂದು
ಭದ್ರವಾಗಿ ಅತ್ತಿತ್ತ ಕಾಣದಷ್ಟೂ
ಅಲ್ಲಾಡದೆ ನಡೆದು,
ರಾಜಕೀಯದ ರೇಂಪಲ್ಲಿ(ramp) ಥಕದಿಮಿಸುವ
ಖಾದಿಯೊಳಗಣ
ಬೆತ್ತಲು ದೇಹ ಕೊಬ್ಬಿದ್ದು
ಕಂಡೀತು ಹೇಗೆ,,,
ಇರುವ ಎರಡೇ ಕಣ್ಣಿಗೆ
ಯಾರ ತಾತನ ಗಂಟೆಂಬ ಔದಾಸ್ಯದ
ಪೊರೆ ಬಂದ ಮೇಲೆ..!!

ಬೀಡಿ ಕೊಂಡ ಮುದುಕಪ್ಪನಿಗೆ
ಬತ್ತಿ ಹೊಸೆದ ಹಳೇ ಮುದುಕಿಗೆ
ಟ್ಯಾಕ್ಸು, ರೆವೆನ್ಯೂ, ಎಕ್ಸ್ಪೆಂಡೀಚರ್ರು ಎಲ್ಲಾ
ಬ್ರಹ್ಮನ ಕಗ್ಗಂಟು,
ಇವೆಲ್ಲಾ ಭೋಗಸ್ಸೆಂದು
ಸರ್ಕಾರಕ್ಕೊಂದಿಷ್ಟು ಗೊಣಗಿ
ಮುರುಟಿ ಮಲಗುವ
ಮಹಾಪೌರನ
ಪಾಯಿಖಾನೆಯಷ್ಟೇ ಖಾಸು ಎನಿಸಿದ
ರಟ್ಟಾದ ಗುಟ್ಟು ಇದು.

ಪ್ರಜಾಪ್ರಭುತ್ವ::::
ಜನರು ಜನರಿಂದ ಜನರಿಗಾಗಿ
ಮಾಡುವ ಧೋಕಾ,,
ಮಾಯಾಲೋಕ..


ರಾಜಕಾರಣಿ, ಕಾರಿಣಿಯರ
ಮಾತಿನರಮನೆಗಳ ಸಾಲಲ್ಲಿ
ನನ್ನದೆಂಬ ಒಂದು ಗುಡಿಸಲೂ ಇಲ್ಲ
ಎಲ್ಲವೂ ಪ್ರಜೆಗಳನ್ನು ಪ್ರಭುವಾಗಿಸಿದವರ ಲೀಲೆ
ಜೊತೆಗೆ
ಹೆಸರಿಗಷ್ಟೇ ಪ್ರಜೆಯೇ ಪ್ರಭುವೆಂಬ
ಪಟ್ಟ ಹಣೆಯ ಮೇಲೆ..!!
ನಾನು ಧನ್ಯ..
ನೀನೂ ಧನ್ಯ..
ನಾವೆಲ್ಲರೂ ಕೃತಜ್ಞರೇ ನಿಮಗೆ..

ಅಹುದಹುದು..
ಮೂರು ಮಂಗಗಳ ಪೈಕಿಯಲ್ಲೇ
ನಮ್ಮಗಳ ಆಯ್ಕೆ,,
ನಾನು ಕಣ್ಣು ಕಾಣದ ಮಂಗ
ಇವ ಕಿವಿ ಕೇಳದ ಮಂಗ
ನಿಮ್ಮ ನಿಮ್ಮ ಆಯ್ಕೆ ನಿಮಗೇ ಬಿಟ್ಟಿದ್ದು..
ಸ್ವತಂತ್ರ್ಯ ಭಾರತದಲ್ಲಿ ಇಷ್ಟಾದರೂ
ಸ್ವಾತಂತ್ರ್ಯವಿರದಿದ್ದರೆ ಹೇಗೆ..??

ಓಹೋ,,,
ಇದಕ್ಕೂ ಬೇಸರವೇ ನನ್ನೊಡೆಯಾ?????
ಹೋಗಲಿಬಿಡು
ಬೇಕಾದರೆ ನೀನೇ
ವಿಂಗಡಿಸಿ ಪಂಗಡಿಸಿಬಿಡು ನಮ್ಮ
ನಿನ್ನ ಮರ್ಜಿಗೆ ನಾನು ಊಹುಂ ಎನಲಾರೆ..
(infact ನಾವ್ಯಾರೂ ಊಹುಂ ಎನಲಾರೆವು)

Wednesday, March 17, 2010

ಮರೆತ ನೆನಪುಗಳ ಮೇಲೊಂದು ಕವನ

ನೆನಪುಗಳೇ ನೀವೇಕೆ ಹೀಗೆ???

ನೆನಪುಗಳೇ,
ಈ ಬದುಕಿಗೆ
ಹಳೆಯ ನೆನಪುಗಳ ಮತ್ತದೇ ಮುನ್ನುಡಿ
ಬರೆಯದಿರಿ!!

ಬಿದ್ದ ಹೂವಿಗೆ
ಗಿಡವೆಂದೂ ಭೂತ,
ಗತಿಸಿದ್ದು
ತಿದ್ದಲಾಗದ ಬರಹ ಮಾತ್ರ.

ಪೂರ್ವ ಉತ್ತರವೋ, ಆಗ್ನೇಯ ಈಶಾನ್ಯವೋ
ಮನದ ಯಾವುದೋ ದಿಕ್ಕಿನಲ್ಲಿ
ಜಿರಲೆ ಕುಂಟೆ,
ಒಂದಿಷ್ಟು ಬಿಂಜಲುಗಳ ನಡುವೆ ಹೂತ
ದ್ರೌಪದಿಯ ಸೀರೆಯಂತೆ
ಸೆಳೆದಷ್ಟೂ ರೂಪುಗೊಳ್ಳುವ
ನೆನಪಿನ ಸರ
-ಮಾಲೆಗಳೇ
ಹೊತ್ತುಗೊತ್ತಿಲ್ಲದೆ
ನನ್ನಾವರಿಸಿ ಮಜ ನೋಡುವುದ
ಬಿಟ್ಟುಬಿಡಿ.

ನೆನಪುಗಳ ಪುಟಗಳನ್ನೆಲ್ಲ
ಹಳೆ ಪುಸ್ತಕದಂತೆ
ರದ್ದಿಗೆ ಕೊಟ್ಟು
ಹಗುರಾಗಿ ಹಾಯಾಗೋಣವೆಂದರೆ
ರದ್ದಿಯಾತನೂ ತೂಗಿದ
ಪುಟಗಟ್ಟಲೆ ಇರುವ ನೆನಪಿನ
ಪುಸ್ತಕವ..!!
ತೂಗಿ ತೂಗಿ ದಣಿವಾಗಿ
'ಬೇಡಮ್ಮ ನಿಮ್ಮ
ರದ್ದಿ,
ಕೊಡುವಷ್ಟು ಕಾಸಿಲ್ಲ,
ಪುಗಸಟ್ಟೆ ಕೊಟ್ಟೇನೆಂದರೂ
ಹೊತ್ತೊಯ್ಯಲು
ಬೆನ್ನಲ್ಲಿ ಕಸುವಿಲ್ಲ'
ಎಂದ.

ಮಂಕಾದೆ ಅವನ ಕೊಂಕಿಗೆ
ಮತ್ತೆ
ಹೊಂಚ ತೊಡಗಿದೆ
ನೆನಪುಗಳನ್ನೆಲ್ಲಾ ಹರಿದು ಹಂಚಿಬಿಡಲು..

ಒಮ್ಮೆಯಂತೂ
ದಿನ, ವಾರ, ತಿಂಗಳು ಕಳೆದು ವರ್ಷವೇ
ಕೂತೆ
ನೆನಪುಗಳ ಸುಟ್ಟಿಬಿಡಲು.
ಸುಟ್ಟೂ ಸುಟ್ಟು ಶಾಖಕೆ
ನಾ ಕರಕಲಾದೆ
ಮಶಿ ಇಂಗಾಳದಂತೆ.
ಆದರೂ ನಿಟ್ಟುಸಿರಿಟ್ಟಿದ್ದೆ ಪಾರಾದೆನೆಂದು,,,,

ನಿನ್ನೆ
ರಾತ್ರಿ ರಾಣಿಯ
ಸವಿಗಂಪ ತಾಳಲಾರದೆ
ಕಿಟಕಿಯಲ್ಲಿ ಇಣುಕಿದರೆ
ನೆನಪುಗಳ
ಬೂದಿಯಲ್ಲಿ
ಬೆಳದೊಂದು ಹೂವಿನ ಗಿಡ
ಘಮ ಘಮಿಸುವ ಹೂವ
ಹೊತ್ತು
ಸತ್ತ ನೆನಪುಗಳಿಗೆ
ಜೀವ ತುಂಬಿ
ಈ ಬದುಕಿಗೆ
ಹಳೆಯ ನೆನಪುಗಳ ಮತ್ತದೇ ಮುನ್ನುಡಿ
ಬರೆಯುತ್ತಿತ್ತು...


((((ತೇಜಸ್ವಿನಿಯವರೇ,
ನನ್ನ ನಿಜವಾದ ಹೆಸರು ಸಾಗರಿಯೂ ಅಲ್ಲ, ಚಿನ್ಮಯಿಯೂ ಅಲ್ಲ. ಸಾಗರಿಯ ಮೇಲೆ ಬಿದ್ದ ಚಿನ್ಮಯಿಯ ಸ್ವಗತಗಳ ಛಾಯೆಯೇ ನಾನು. ನನ್ನ ವಿವರವನ್ನು ಹೀಗೆ ಗೌಪ್ಯವಾಗಿ ಇಟ್ಟಿದ್ದಕ್ಕೆ ಕ್ಷಮಿಸಿ, ಆದರೂ ಕೆಲವು ಕಡೆ ನನ್ನ ಊರು, ಭಾಷೆ, ಹೆಸರಿನ ಹಿಂಟುಗಳನ್ನು ಇಟ್ಟಿದ್ದೇನೆ.
ಹುಟ್ಟೂರಿಗೆ ಅಚಾನಕ್ಕಗಿ ತೆರಳಿದ ಕಾರಣದಿಂದಾಗಿ ತಮ್ಮೆಲ್ಲರಿಗೂ ಸ್ವಲ್ಪ ತಡವಾಗಿ ಯುಗಾದಿಯ ಶುಭಾಷಯಗಳನ್ನು ಕೋರುತ್ತೇನೆ..(ಯುಗಾದಿಯನ್ನು ಉಗಾದಿ ಅಂತ ಕರ್ಯೋದ್ಯಾಕೆ?? ಗೊತ್ತಿದ್ದವರು ತಿಳಿಸಿ.) ))))


Wednesday, February 24, 2010

ಒಂದು ಭೂಮಿಗೀತೆ









ಅವಳು ಭೂಮಿ...


















ಆಗಸವು ಮೈನೆರೆಯದಿರೆ
ಬಂಜೆ ಎಂದರು ಅವಳ
ಬಿಸಿಯ ಬೇಗೆಯಲಿ
ಮಿಂದವಳ ಗಾಯಕ್ಕೆ ಉಪ್ಪನೆರಚುತಿಹರು.

ಕೊಳ್ಳಿ ಇಟ್ಟರು ಎದೆಗೆ
ಹೊತ್ತಿತದೋ ಕರುಳ ಕೂಸು,
ಕಂಗೆಟ್ಟ ಹೆಂಗಡಲು
ಬಾಯ್ತೆರೆದ ಬೊಬ್ಬೆಗೆ
ಹುರುಪೆದ್ದ ಸಿಪ್ಪೆಯೇ ಕನಿಕರಿಸಿತು.

ಅರ್ಚಕನ ಅಮಲಿಗೆ
ಬಲಿಯಾದ ಭಗವಂತ
ಇನ್ನೆಲ್ಲಿ ಭಕ್ತಿಗೆ-ಭಾವಕ್ಕೆ ಬೆಲೆ?
ಅವರಿವರ ಆಸೆಗೆ
ಸುಡುತಿಹ ಜೀವವನು
ತೆತ್ತ ಅವಳ ಆಹುತಿಗೆ ಸೆಲೆ?

ಯಾರ ಬೆನ್ನು ಬಿಟ್ಟಿದೆ
ಅವರವರ ಪಾಪ,,,
ಅನುಭವಿಸದಿರೆ ಕೂಡಿಟ್ಟ ಕರ್ಮವನು
ಜಗಕೆ ತೃಪ್ತಿಯಿಲ್ಲ..
ಇಂದಲ್ಲ ಬರುವೆ ನಾಳೆ
ಎಂದ ಆತಂಕವನು ಮರೆತು
ಮೈಮರೆತ ಮನುಜಗಿನ್ನು ಸುಖವಿಲ್ಲ.

ಬಾಯ್ತೆರೆದು ಒಮ್ಮೆಲೇ
ಸಮಸ್ತವನೂ ನುಂಗುವ ಯೋಚನೆ
ಹಾಯ್ದಿರಲೂಬಹುದು ಅವಳ ಕಣ್ಣಂಚಿಗೆ,
ಬದುಕಿದ್ದು ಸಾಕು ನಡೆ ಗರ್ಭಕೆನಲು
ಸೀತಾ-ರಾಮರಿಲ್ಲೆಲ್ಲಿ,, ಇರುವವರೆಲ್ಲರೂ ರಾವಣರೇ
ಎನ್ನಿಸಿದ್ದಿರಬಹುದು ಆಕೆಗೆ.

ಮೈ ಜಾರಿದ ಶಿಶುವಿಗಳುತ್ತ ಕೂತವಳಲ್ಲ,
ನಾಳೆ ತನ್ನದೇ ಎಂದವಳು ಮರೆತಂತಿಲ್ಲ.
ಹಾರುತಿಹ ಉಸಿರನ್ನು ಹಿಡಿದಿಟ್ಟು ಅಂಗೈಲಿ
ಸತ್ಯನರ್ತನಕವಳು ಕಾ...ಯು...ತಿ...ಹ...ಳು.......