Thursday, April 8, 2010

ಈ ಕವನ ರಾತ್ರಿ ರಾಣಿಯರಿಗಾಗಿ

ಅವಳೂ ಮತ್ತು ಅವನೂ....

ಲಗು ಬಗನೆ ಮಾಡಿಟ್ಟ
ಪಲ್ಯ, ಗೊಜ್ಜು, ಹುಳಿ
ಒಗ್ಗರಿಸಲೂ ಮರೆತ ತಂಬಳಿ
ಪುರುಸೊತ್ತಿಲ್ಲದೆ ಗಿಳಿಗೂಟಕ್ಕೆ
ಹಾಗೆಯೇ ಸಿಕ್ಕಿಸಿದ ಸೀರೆ, ಪರಿಕಾರ, ಕೌಪು
ಸರಗೋಲು ಸರಿಸಲೂ ಮರೆತ ನೆನಪು..
'ಎನೆನ್ನುವನೋ ನನ್ನ ಮಗರಾಯ
ಇವತ್ತಿನ ಕೊನೆಯ ಗಿರಾಕಿ ಮುಗಿದರೆ ಸಾಕು'
ಎಂದು ಓಡಲು ತಯಾರಾದ ಕಾಲು
ಅವಳು ಮೈ ಕೊಡವಿ ಮೇಲೆದ್ದು
ನೆರಿಗೆ ಎಣಿಸಿ, ಸೆರಗ ಮುಸುಕೆಳೆದಳು...


ಹೊರಗಡೆ ಯಜಮಾನಪ್ಪನ ಜೋರು
ಬಿಚ್ಚಯ್ಯ ಇನ್ನೂ ಒಂದು ನೂರು
ನಡೆದಿತ್ತು ಚೌಕಾಸಿ
ಕದ ಮುಚ್ಚಿದ ಕೋಣೆಯೊಳಗೆ ಎಲ್ಲವೂ ಅಸಷ್ಟ.
ಏನೇನೋ ಮಸಲತ್ತು ನಡೆಸಿ
ಒಳಬಂದ ಅವನು
ಅವಳ ಇಂದಿನ ಕೊನೆಯ ಗಿರಾಕಿ.


ದಂಧೆಯ ಉಸೂಲೇ ಹಾಗೆ
ನಯ, ನಾಜೂಕು, ನಾಚಿಕೆ, ಹುಸಿ ಮುನಿಸು, ನಗು
ದಿನ ದಿನವೂ ನವ ವಧುವಿನ ಬಳುಕು
ವಯ್ಯಾರದ ಥಳಕು.
ಆದರೂ ಅವಳಿಗೆ ಒಳಗೊಳಗೆ
ಮಗನದೇ ಹಂಬಲ
ಹಸಿದುಬಂದವ ಉಂಡನೋ
ಇಲ್ಲಾ ಹಾಗೆಯೇ ಒರಗಿಬಿಟ್ಟನೋ..


ಒಳ
ಬಂದವನು ಹಾಗೆಯೇ ತಲೆಗೆ ಹೊದ್ದ
ಸೆರಗನ್ನೂ ಸರಿಸದೆ ಕೈ ಹಿಡಿದ ಮೆತ್ತಗೆ,
ಅವಳೂ ತಲೆ ಎತ್ತಲಿಲ್ಲ,
ಎಂದಿನಂತೆ ನಾಚಿ ನೀರಾದಳು..
ಮತ್ತೆ ಮತ್ತೆ
ಮೆಲ್ಲಗೆ ಅವನ ಕೈ ಅಮುಕಿದಳು,, ಅವಳಿಗೋ
ಮಗನದೇ ಚಿಂತೆ..
ವರ್ಷ ಇಪ್ಪತ್ತಾದರೂ ಮಗನಿಗಿದು
ತಿಳಿದಿಲ್ಲ, ಎಷ್ಟಾದರೂ ಹೈ ಗೈ ಎನ್ನದಂತೆ
ಸಾಕಿಲ್ಲವೆ ಇವಳು!!


ಅವನಿನ್ನೂ ಕೈ ಹಿಡಿದೇ ನಿಂತಿದ್ದ
ಮುಂದುವರಿಯದೆ,,
ತಾಳಲಾರದೆ ಅವಳೇ ಕೇಳಿದಳು
ತಲೆ ಎತ್ತದೆ,,
ಮೊದಲ ಬಾರಿಯೇ????
....
....
....

ಸಂಕೋಚವೇ????
ಅವನೆಂದ
ಹಾಗೇನಿಲ್ಲ,
ನಡೆಯಮ್ಮ ಹೋಗೋಣ ಮನೆಗೆ...

ದನಿ ಕೇಳಿ
ಕತ್ತಲಾದಂತೆನಿಸಿ
ಆಸರೆಗೆ ಅವನಿಗಾಗಿ ತಡಕಾಡಿದಳು..


ಚಿಕ್ಕ ಮಾತು:
ಈಗ್ಗೆ ಮೂರು ವರ್ಷದ ಹಿಂದೆ ನಾನು IFMR ಲ್ಲಿ ಫೀಲ್ಡ್ ಇನ್ವೆಸ್ಟಿಗೇಟರ್ ಅಗಿದ್ದಾಗಲೂ ISEC (Institute for Social & Economic Change) ವಸತಿ ನಿಲಯದಲ್ಲಿ ನನ್ನ ಸೀನಿಯರ್ (ಆಕೆ ನನಗೆ ಅಕ್ಕನಿಗಿಂತಲೂ ಒಂದು ಕೈ ಮಿಗಿಲು) ಜೊತೆ ಇದ್ದೆ. ಭಾನುವಾರ ಅಥವಾ ಹಬ್ಬ ಹರಿದಿನದ ರಜಾ ದಿನಗಳಲ್ಲಿ ನಾನು ಕನ್ನಡ-ಹಿಂದಿ ಟ್ರಾನ್ಸ್ಲೇಟರ್ ಆಗಿ research students ಜೊತೆ ಅಗಾಗ ಹೋಗುವುದಿತ್ತು. ಅಂದೂ ಹೋಗಿದ್ದೆ, ರಾಜರಾಜೇಶ್ವರಿ ನಗರದ ಸಮೀಪ ಇರುವ ನಾಯಂಡ ಹಳ್ಳಿಗೆ.. AIDS ತಗಲಿದ ವೇಶ್ಯೆಯರ ಜೊತೆ ಮಾತು ಕತೆಗೆ. ಇದೊಂದು ಥರದ ಬೇರೆಯದೇ ರೀತಿಯ ಅನುಭವ ಕೊಟ್ಟಿತ್ತು ನನಗೆ.

28-30 ಮಹಿಳೆಯರಿರುವ ಸಂಘ ಅದು. ಚಿಕ್ಕ ರೂಮನ್ನು ಬಾಡಿಗೆಗೆ ಹಿಡಿದವರು ಸಂಘದ ಅಧೀಕೃತ ಸಭೆಗೆ ಅಲ್ಲಿಯೇ ವಾರಕ್ಕೆ ಮೂರು ದಿನ ಸೇರುತ್ತಿದ್ದರು. ಆಚೀಚೆಯವರಿಗೆ, ಖುದ್ದು ರೂಮನ್ನು ಬಾಡಿಗೆಗೆ ಕೊಟ್ಟ ಮಾಲೀಕನಿಗೂ ಇವರು AIDS ತಗಲಿದ ವೇಶ್ಯೆಯರೆಂದು ಗೊತ್ತಿಲ್ಲ. ನಮ್ಮನ್ನು ಅವರ ನಾಯಕಿ(ಸಂಘದ ಅಧ್ಯಕ್ಷೆ) ಬಹಳ ಆದರದಿಂದ ಬರಮಾಡಿಕೊಂಡರು. ಒಬ್ಬೊಬ್ಬರನ್ನಾಗಿ ಒಳ ಕರೆದು ಮಾತನಾಡಿಸುವುದು ಮತ್ತು ಮೊದಲೇ ತಯಾರಿಸಿದ ಒಂದಿಷ್ಟು ಪ್ರಶ್ನೆಗಳನ್ನು ಅವರಿಗೆ ಕೇಳುವುದು ನಮ್ಮ ಅಂದಿನ ಕೆಲಸ.

ಪ್ರತಿಯೊಂದು ಪ್ರಶ್ನೆಯೂ ಅತೀ ವೈಯಕ್ತಿಕವಾದ್ದು ಮತ್ತು ಮುಜುಗರ ತರಿಸುವಂಥದ್ದು. ಆದರೂ ಯಾರೊಬ್ಬರೂ ನಮ್ಮನ್ನು ಬೈಯದೆ, ತರಾಟೆಗೆ ತಗೊಳ್ಳದೆ ಬಹಳ ಸಹಕರಿಸಿದ್ದರು, ಅವರೆಲ್ಲರ ಕಣ್ಣೀರು ನಮ್ಮ ಹೆಗಲನ್ನೆಲ್ಲಾ ತೋಯಿಸಿತ್ತು. ಒಬ್ಬೊಬ್ಬರೂ ಅದೆಷ್ಟು ನೋವನುಂಡವರು...!! ಅವರಲ್ಲಿ ಕೆಲವರು ನಮ್ಮೆಲ್ಲರಂತೆ ಕುಟುಂಬಸ್ಥರು. ಗಂಡ ಹೆಂಡತಿ ಮಕ್ಕಳು...ಎಲ್ಲರೊಂದಿಗೆ ಸಾಮಾನ್ಯರಂತೆ ಬದುಕುವುದು, ಗಿರಾಕಿ ಬಂದಾಗ ಮಾತ್ರ ಶುದ್ಧ ವೇಶ್ಯಯರಾಗುವರು. ಅತ್ಯಾಶ್ಚರ್ಯವೆಂದರೆ ಅವರಲ್ಲಿನ ಎಷ್ಟೋ ಮಹಿಳೆಯರ ಮನೆಯವರಿಗೆ ಅವರು ವೇಶ್ಯೆ ಎಂಬುದೇ ಗೊತ್ತಿಲ್ಲ.., ಅವರೊಂದಿಗೆ ನಡೆದ ಮಾತು ಕತೆ ಹೇಳುವುದು ಬೇಕಷ್ಟಿದೆ.. ಅವೆಲ್ಲ ಇಲ್ಲಿ ಅಪ್ರಸ್ತುತ. ಒಟ್ಟಿನಲ್ಲಿ ಅಂದು ನಮ್ಮೊಂದಿಗೆ ಪ್ರೀತಿಯಿಂದ ಬೆರೆತು, ಅವರ ದುಃಖಕ್ಕೆ ನಮ್ಮ ಹೆಗಲನ್ನು ಆಸರೆಯಾಗಿ ಬಳಸಿ ಆತ್ಮೀಯತೆ ಮೆರೆದ, ಅವರ ತಟ್ಟೆಯ ಅನ್ನವನ್ನು ಕೈ ತುತ್ತೆಂದು ನಮಗೆ ಉಣ್ಣಿಸಿದ ಆ ಎಲ್ಲ ವೆಶ್ಯಾ ಮಣಿಗಳಿಗಾಗಿ ಈ ಕವನ...



60 comments:

Anonymous said...

ಮನೆಗೂ ಗೊತ್ತಿಲ್ಲದಂತೆ ವೇಶ್ಯೆಯಾಗಿ ಏನೋ ಸಾಧಿಸಿದಂತೆ ಹೇಳುತ್ತಿದ್ದೀರಲ್ಲ, ಅದರ ಬದಲು ನಗರಗಳಲ್ಲಿ ಇಷ್ಟೆಲ್ಲಾ ಅವಕಾಶಗಳಿರುವಾಗ ಮರ್ಯಾದೆಯಾಗಿ ದುಡಿಯಲು ಅವರಿಗೆ ಏನಡ್ಡಿ?

Anonymous said...

ಏನೋ ಸಮಾಜಸೇವೆ, ದೇಶಸೇವೆಗೆ ಮಾಡಿದವರಿಗೆ ಗೌರವ ಕಾಣಿಕೆ ಎನ್ನುವ ಹಾಗೆ ಅವರಿಗೆ ಕವನ ಬರೆದು ಸಮರ್ಪಿಸುವುದು ಬೇರೆ!! ಛೇ.

೭೫ ಜನ ಯೋಧರು ಸತ್ತಿದ್ದಾರೆ ನಿನ್ನೆ. ಅವರಿಗೆ ಕವನ ಬರೆದು ಅರ್ಪಿಸಿ. ಒಂದು ಅರ್ಥವಿರುತ್ತದೆ.

ಸಾಗರದಾಚೆಯ ಇಂಚರ said...

ಸಾಗರಿ,
ಸುಮ್ಮನೆ ಬೇಕೆಂದೇ ಯಾರೂ ವೇಶ್ಯೆ ಆಗುವುದಿಲ್ಲ,
ಕೆಲವು ಸಮಸ್ಯೆಗಳು, ತೀರದ ಕಷ್ಟ ಅವರನ್ನು ಅಂತ ಹೇಯ ಕ್ರತ್ಯಕ್ಕೆ ಮುನ್ನೂಡುತ್ತದೆ.
ನಿಮ್ಮ ಲೇಖನಕ್ಕೆ ಕಾಮೆಂಟಿಸಿದ ಆ ''Anonymous '' ಮಹಾಶಯರಿಗೆ ಬಹುಶ ಬದುಕಿನ ಬಗೆಗೆ
ಹೆಚ್ಚು ಗೊತ್ತಿಲ್ಲ ಎನಿಸುತ್ತದೆ,
ಅವರಿಗೆ ನೀವು ದುಡಿಯಲು ಕೆಲಸ ಕೊಡಿ, ಅವರೆಂದೂ ವೇಶ್ಯೆ ಆಗುವುದಿಲ್ಲ
ಆ ಕೆಲಸ ಅವರು ಇಷ್ಟ ಪಟ್ಟು ಮಾಡುವುದಲ್ಲ, ಹೊಟ್ಟೆಗಾಗಿ ಮಾಡುವುದು
ಅವರಿಗೂ ಒಂದು ಬದುಕಿದೆ ಎಂಬುದು ನಾವು ಅರ್ಥ ಮಾಡಿಕೊಳ್ಳಬೇಕು.
ಅದು ಬಿಟ್ಟು, ದುಡಿಯಲು ಏನು ಅಡ್ಡಿ ಎಂಬ ಉಡಾಫೆಯ ಮಾತುಗಳು ಹೇಳುವುದು ಸುಲಭ,
ಆದರೆ ಅವರಿಗೆ ಬದುಕಲು ದಾರಿ ಮಾಡಿಕೊಡಲು ನಮ್ಮಿಂದ ಆದೀತೆ?
ನಿಮ್ಮ ಕವನ ಒಂದು ದಿಟ್ಟ ಹೆಜ್ಜೆ,
ನೊಂದವರ ಬಾಳಿಗೆ ಹೆಗಲು ಕೊಡುವ ನಿಮ್ಮ ಗುಣ ಬಲು ದೊಡ್ಡದು

sunaath said...

ಸಾಗರಿ,
ನಿಮ್ಮ ಕವನದ ಕೊನೆಯ ಸಾಲುಗಳು ನನಗೆ ಚಾಟಿ ಏಟು ಕೊಟ್ಟಂತೆ ಭಾಸವಾಯಿತು. ತುಂಬ ಒಳ್ಳೆಯ ಕವನ. ಅದಕ್ಕಿಂತ ಮುಖ್ಯವಾಗಿ, ನೊಂದವರಿಗಾಗಿ ಮರುಗುವ ಮನೋಭಾವನೆ, ಅವರನ್ನು ಅರ್ಥ ಮಾಡಿಕೊಳ್ಳುವ ಹೃದಯ ಈ ಕವನದಲ್ಲಿದೆ.

Subrahmanya said...

ಕವನದಲ್ಲಿ ಒಂದು ವಿಭಿನ್ನತೆಯನ್ನು ತೆರೆದಿದ್ದೀರಿ. ಇಂತಹ ಕವನಗಳೂ ಬೇಕಿದೆ. ವೇಶ್ಯೆಯರನ್ನು ಸೃಷ್ಟಿಸಿರುವುದೇ ಈ ಸಮಾಜ !. ಅವರಿಗೊಂದು ಉತ್ತಮ ಅದುಕು ಕಟ್ಟಿಕೊಡಲು ಸಾಧ್ಯವಾದರೆ, ಒಳ್ಳೆಯದೇ ಅಲ್ಲವೇ ? ಕವನದ ಆಶಯ ಒಳ್ಳೆಯದೆ.

ದಿನಕರ ಮೊಗೇರ said...

tumbaa olleya kavana.... koneya saalugalu teeraa galibili maadidavu........... "Anonymous' mahaashayaru avaradondu blog open maadi, avara kavana bareyali....... veshyeyaro manushyare.... avarigoo manasside............. uttama kavanakke dhanyavaada.....

naanoo ondu kathe bareyalu prayatna maadiddene.......... bandu odi, anisike heLi....

ಸಾಗರಿ.. said...

anonymous ಅವರೇ,(ಇಷ್ಟುದ್ದ ಕಾಮೆಂಟನ್ನು ದಯವಿಟ್ಟು ಎಲ್ಲರೂ ಓದಲೇಬೇಕಾಗಿ ವಿನಂತಿ ಇದೆ)
ಲಂಚ ಕೊಡುವವರಿರುವವರೆಗೂ ಲಂಚ ತಗೊಳ್ಳೋರು ಇದ್ದೇ ಇರ್ತಾರೆ... In the same way ಕಾಮುಕ ಗಿರಾಕಿಗಳಿರುವವರೆಗೂ ಪಾಪದ ಗಣಿಕೆಯರೂ ಇದ್ದೇ ಇರ್ತಾರೆ!! ಗಿರಾಕಿಗಳೇ ಇಲ್ಲದಂತಾದರೆ ಗಣಿಕೆಯರು ನೊಣ ಹೊಡೆದು ಬೇಸರವಾಗಿ, ಹೊಟ್ಟೆಗೆ ಹಿಟ್ಟಿಲ್ಲದೆ ಬೇರೆ ವೃತ್ತಿ ಹಿಡಿಯಬಹುದೋ ಏನೋ???!!!!
ವ್ಹಾ, ಔರ್ ಏಕ್ ಮಸ್ತ್ ಐಡಿಯಾ, ಜೋ ಬದಲ್ ದೆ ದುನಿಯಾ, ಸಾಧ್ಯ ಅಂತೀರಾ?
ಸೈನಿಕರ ಬಗ್ಗೆಯೂ ಬರೆಯಬೇಕಿದೆ ನನಗೆ ಆದಷ್ಟು ಬೇಗ ಬರೆಯುತ್ತೇನೆ.ಆದರೆ ವೇಶ್ಯೆಯರೂ ನಮಗೆ ರಕ್ಷಣೆ ನೀಡುವ ಒಂದು ಅಂಗವಾಗಿದ್ದಾರೆ ಎಂದರೆ ನಂಬುತ್ತೀರಾ ನೀವು? ನಮ್ಮದೇ ಒಂದು ಸರ್ವೇ ಪ್ರಕಾರ ಹಳ್ಳಿ, ನಗರ-ಶಹರಗಳಲ್ಲಿರುವ ವೇಶ್ಯೆಯರು ನಮ್ಮ ಜನಸಂಖ್ಯೆಯ ೬-೭% ರಷ್ಟು.ಇವರೇ ಇಲ್ಲದಿದ್ದರೆ ನಮ್ಮ-ನಿಮ್ಮ ಮನೆಯ ಹೆಣ್ಣು ಮಕ್ಕಳ ಮಾನ ಕುತ್ತಿಗೆಯ ಮೇಲೆ ತೂಗುವ ಕತ್ತಿಯಂತಾಗುತ್ತಿತ್ತು.ಎಂದರೆ ಅತ್ಯಾಚಾರದ ಪ್ರಕರಣಗಳು ಇನ್ನೂ ಹೆಚ್ಚಾಗುತ್ತಿತ್ತು ಎಂಬುದನ್ನೂ ಅಧ್ಯಯನ ತಿಳಿಸುತ್ತದೆ.
ಆಸ್ಸಾಮ್ ನಂತಹ ಗುಡ್ಡ ಗಾಡು ಪ್ರದೇಶಗಳಲ್ಲಿ ಟ್ರೇನಿಂಗ್ ನಿರತ ನಮ್ಮದೇ ಸೈನಿಕರು ಎಷ್ಟೋ ಅಮಾಯಕ ಹೆಣ್ಣು ಮಕ್ಕಳ ಮೇಲೆ ಗ್ಯಾಂಗ್ ರೇಪ್ ಮಾಡುತ್ತಿರುವುದು ಗೊತ್ತಾ ನಿಮಗೆ? star plus ನ ಸಚ್ ಕಾ ಸಾಮ್ನಾ ದಲ್ಲಿ sixer siddu ಬಾರಿ ನೋಡಿದ್ದೀರಾ? ಒಬ್ಬ ದೊಡ್ಡ ನೇವಿ ಆಫೀಸರ್ ತಾನು ತನ್ನ ಗೆಳೆಯನ girlfriend ಜೊತೆ ದೈಹಿಕ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಹೆಂಡತಿಯರನ್ನು ಬದಲಾಯಿಸಿಕೊಂಡು ಮಜ ಮಾಡುವ high class family ಇರೋದು ಗೊತ್ತಾ? ಬಾಲಿವುಡ್ ನ ಎಷ್ಟೋ ನಟರು ತಮ್ಮ co-actors/ co-actor's mother/ co-actor's friends/ co-actor's aunty etc etc ಇಂಥವರೋದಿಗೆ ದೈಹಿಕ ಸಂಬಂಧ ಇರಿಸಿಕೊಂಡಿದ್ದರ ನಿಖರ ಸುದ್ದಿ ಗೊತ್ತಾ? ಇವರನ್ನೆಲ್ಲಾ ಆರಾಧಿಸುವ ನಾವು ನಾಚಿಕೆಗೆಟ್ಟವರು. ಇವೆಲ್ಲಾ high level prostitutions. ನಾನು ಸೈನಿಕರನ್ನೂ ದೂರುತ್ತಿಲ್ಲ ಬದಲಾಗಿ ಸಮಾಜದಲ್ಲಿ ಮನುಷ್ಯರ ಮುಖವಾಡ ಹೊತ್ತ ರಾಕ್ಷಸರಿಂದಲೇ ಅಮಾಯಕರು ವೇಶ್ಯೆಯರಾಗುತ್ತಿದ್ದದ್ದು. ನಾನು ನನ್ನ ಕವನವನ್ನು, ಅವರ ಮೇಲಿನ ಪ್ರೀತಿಯನ್ನು ಕಾಲೇಜಿನಲ್ಲಿ ಮಜಾ ಉಡಾಯಿಸಲು ದುಡ್ಡು ಸಾಲದೆ call girls ಆಗಿ ದೊಡ್ಡ ದೊಡ್ಡ icon ಗಳಿಗೆ ಸೆರಗೊಡ್ಡುವವರಿಗೆ(ಇವರು ಸೆರಗಲ್ಲ, ದುಪಟ್ಟವನ್ನೋ jeans ಅನ್ನೋ ಒಡ್ಡುವ standard ಲಲನೆಯರು) ಸಮರ್ಪಿಸಿಲ್ಲವಲ್ಲಾ!!
ಒಹ್ಹ್ಹೊ!! ಶ್ರೀಮಂತರಾಗಲು ವೇಶ್ಯೆಯರಾದರು ಅಂತೀರಾ?? ಕಾಮಾಟಿಪುರದಲ್ಲಿ(infact all over India ದಲ್ಲಿ) ಯಾವ ವೇಶ್ಯೆಯರ ಬಂಗಲೆಯೂ ಇಲ್ಲ.ಹಸಿವೆಯಿಂದ ಕಂಗೆಟ್ಟ ಕಂಗಳಷ್ಟೇ ಇವೆ ಅಲ್ಲಿ.
ಈಗಲೂ ತಿಂಗಳಿಗೆ ಒಮ್ಮೆ ನಾನು 2 ದಿನ ನಿರಂತರ ಉಪವಾಸ ಮಾಡುತ್ತೇನೆ. ಅಹನ್(ನನ್ನ ಮಗ) ಬರುವ ಮೊದಲು 2 ದಿನದ ಉಪವಾಸ ತೀರಾ ತ್ರಾಸು ಎನ್ನಿಸುತ್ತಿರಲಿಲ್ಲ. ಈಗ ಕೀ ಬೋರ್ಡಿನ A ಯನ್ನು ಒಮ್ಮೆ ಒತ್ತಿದರೆ M ಅಂತ ಮತ್ತೊಮ್ಮೆ ಒತ್ತಿದರೆ x ,d, l ಅಂತೆಲ್ಲಾ ಪ್ರಿಂಟಾದರೆ ಹೇಗಿರಬಹುದು ಪರಿಸ್ಥಿತಿ? ಮಕ್ಕಳೊಂದಿಗಿನ ಏಗಾಟ ಹೀಗೇ.. ಇನ್ನು ಹಸಿದ ಮಕ್ಕಳು ಸುತ್ತಲಿರುವಾಗ ಆ ತಾಯಿಯ ಸ್ಥಿತಿ ಏನಾಗಿರಬೇಡ? ಈಗ ನನಗೆ ಹಸಿದು ಒಂದು ದಿನ ಕಳೆಯುವಾಗ ಜಗತ್ತಿನ ಎಲ್ಲಾ ಹಸಿದ ಕಂಗಳು ನನ್ನ ಗೇಲಿ ಮಾಡಿ ನಕ್ಕಂತೆ ಭಾಸವಾಗುತ್ತದೆ.
anonymous ಅವರೇನೀವು ಮೇಲ್(male) ವರ್ಗಕ್ಕೆ ಸೇರಿದ್ದರೆ ಒಬ್ಬ ವೇಶ್ಯೆಯ ಮಗಳು ನಿಜದ ವೇಶ್ಯೆಯಾಗುವುದಕ್ಕೇ ಮೊದಲು ಆಕೆಯನ್ನು ನೀವು ವಿವಾಹವಾದರೆ ಮತ್ತೊಬ್ಬ ಅಮಾಯಕಳು ಬಲಿಯಾಗುವುದನ್ನು ತಪ್ಪಿಸಬಹುದು. ಆದರ್ಶದ ಅವತಾರವೇ ಆದಂತಿರುವ ನಿಮಗಿದು ಸಾಧ್ಯವೇ? No. ಅದಕ್ಕಾಗಿಯೇ ಒಬ್ಬ ವೇಶ್ಯೆಯ ಮಗಳೂ ವೇಶ್ಯೆಯಾಗುತ್ತಿರುವುದು. she has no other way.. ಅಥವಾ ನಾವೇ ಅವರಿಗಿರುವ ಎಲ್ಲಾ ಬಾಗಿಲನ್ನೂ ಮುಚ್ಚಿಬಿಟ್ಟಿದ್ದೇವೆ. ಹೋಗ್ಲಿ ಬಿಡಿ ಒಬ್ಬ ವೇಶ್ಯೆಯನ್ನು atleast ಮನೆ ಕೆಲಸಕ್ಕಾದರೂ ಇಟ್ಕೊಳ್ಳಿ, ಗೌರವದಿಂದ ಒಬ್ಬ ವೇಶ್ಯೆ ಬಾಳುವಂತಾಗಲಿ..ಆಗಲ್ಲ ಅಲ್ವ??.. ಹೀಗಾದರೆ ಪಾಪ ಆಕೆ ಬೇರೇನು ಕೆಲಸ ಮಾಡಿಯಾಳು?? Once again she has no other way to come out from the bloody hell. ಈ ಎಲ್ಲಾ ಐಡಿಯಾ ಹಾಳಾಗಿ ಹೋಗ್ಲಿ ಬಿಡಿ, ವೇಶ್ಯೆಯರ ಮಕ್ಕಳನ್ನು ನಾವು ದತ್ತು ತಗೊಂಡು ವಿದ್ಯೆ ಕೊಡಿಸಿದರೆ ಮತ್ತೊಬ್ಬ ವೇಶ್ಯಯ ಮಗಳು ವೇಶ್ಯೆಯಾಗುವುದು ತಪ್ಪಬಹುದು? ಸಾಧ್ಯ ಅಂತೀರಾ?
ಜೀವ, ಮನಸ್ಸು, ಹೃದಯವೇ ಇರದ ಕಲ್ಲು, ಮಣ್ಣು, ಆಗಸ, ಸೂರ್ಯ, ಚಂದ್ರ ಕವನಗಳಾಗಬಹುದು, ಸತ್ತ ವೀರಪ್ಪನ್ ಪುಸ್ತಕವಾಗಬಹುದು, ಕಾಮುಕ ಕಾವಿಯ ದೊರೆ ಸ್ತೋತ್ರವಾಗಬಹುದು,,, ಉಸಿರಾಡುವ ಶವವೇ ಆದ ವೇಶ್ಯೆ ಯಾಕೆ ಕವನ ಆಗಬಾರದು? ಮೇಲ್ದರ್ಜೆಯವರದೇ ಭಾವನೆಗಳು ಕವನವಾಗಬೇಕೆಂಬ ಠೇಕೆದಾರಿ ಇದೆಯೇ? ಇದೇ ವೇಳೆ ಎಲ್ಲೋ ಒಂದು ಕಡೆ ಮೇಲ್ದರ್ಜೆಯವನದೇ ಪಾಪದ ಪಿಂಡ ವೇಶ್ಯೆಯ ಹೊಟ್ಟೆಯಲ್ಲಿ ಮತ್ತೊಬ್ಬ ವೇಶ್ಯೆಯಾಗಲು ಬೆಳೆಯುತ್ತಿರಬಹುದು.
ಇದಕ್ಕೆಲ್ಲಾ ಜವಾಬ್ದಾರಿ ನಾವೇ ತಾನೇ???
ಹೋಗ್ಲಿ ಅವರು ಕದ್ದು ಮುಚ್ಚಿ ಏನೇನೋ ಮಾಡಬಾರದ್ದು ಮಾಡ್ತಾರೆ ಅದಕ್ಕೇ ಅವರನ್ನು ಬಹಿರಂಗಪಡಿಸಲು ಹೆದರ್ತಾರೆ,, ನಾವು-ನೀವೆಲ್ಲ ಸಂಭಾವಿತರು ಆದ್ರೂ anonymous ಎಂಬ ಜಾಲಿಯ ಮರದ ನೆರಳು ನಿಮಗೇಕೆ?? ನಾವೇ ನಮ್ಮ ಹೆಸರನ್ನು ಮುಚ್ಚಿಡುತ್ತಿರುವಾಗ ವೇಶ್ಯೆ ಮತ್ತೇನು ಮಾಡಿಯಾಳು,, ಪಾಪ.
ಆದರೂ ನನ್ನ ಕವನವನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ನನ್ನ ಮಾತು ನಿಮ್ಮನ್ನು ಚುಚ್ಚಿದ್ದರೆ ಕ್ಷಮೆಯಿರಲಿ.

ಸಾಗರಿ.. said...

ಸಮಯಾಭಾವದಿಂದಾಗಿ ಬಾಕಿ ಪ್ರತಿಕ್ರೀಯೆಗಳಿಗೆ ಸದ್ಯದಲ್ಲೇ ಧನ್ಯವಾದಗಳೊಂದಿಗೆ ಪುನಃ ಬರುವೆ

ಸಾಗರಿ.. said...

ಗುರು ಅವರೇ,
ಕವನವನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಬಹಳ ಧನ್ಯವಾದಗಳು. ಸಾಮಾನ್ಯವಾಗಿ ವೇಶ್ಯೆಯರು ಬಡತನದಿಂದ ಬೆಂದವರೇ ಆಗಿದ್ದಾರೆ. ವೇಶ್ಯೆಯ ಮಕ್ಕಳು ಕೆಲಸ ಅಂತ ಹೋದರೂ ಕೆಲಸ ಕೊಟ್ಟ ಮಾಲೀಕನೇ ಹಿತ್ತಲು ಚಾವಿಯನ್ನೂ ಅವಳ ಕೈಗೆ ಇಡುತ್ತಾನೆ. ಎಷ್ಟೆಂದರೂ ವೇಶ್ಯೆಯ ಮಗಳಲ್ಲವೇ, ಇವೆಲ್ಲಾ ಅವರಿಗೆ ಸಾಮಾನ್ಯ ಎಂಬುದು ಅವರ ಅಭಿಮತ. ಬಿದ್ದವರನ್ನು ಮೇಲೆತ್ತುವ ಜನ ನಾವಲ್ಲದಿರುವುದೇ ಇದಕ್ಕೆಲ್ಲ ಕಾರಣ ಎನ್ನಬಹುದೇನೋ. M.A ಓದಿದರೂ ನಾನು ಆಗ ಕೆಲಸಕ್ಕೆ ಎಷ್ಟೊಂದು ಪರದಾಡಿದ್ದೆ, ಪಾಪ ಇನ್ನು ಅವರ ಸ್ಥಿತಿ ಹೇಗಾಗಿರಬೇಡ!!

ಸಾಗರಿ.. said...

ಕಾಕಾ,
ಕವನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ಕವನದ ending ಬಗ್ಗೆ ತುಂಬಾ ಯೋಚಿಸಿದೆ, ಅವಳ ಮಗನನ್ನೇ ಗಿರಾಕಿ ಆಗಿ ಕಳಿಸುವಾ ಅನ್ನುವ ಆಲೋಚನೆಯೂ ಇತ್ತು. ಆದ್ರೆ ತನ್ನನ್ನೇ ತೇಯ್ದು ಮಗನನ್ನ ಹೈ ಗೈ ಎನ್ನದಂತೆ ವಿದ್ಯಾಭ್ಯಾಸ ಕೊಟ್ಟು ಬೆಳೆಸಿದವಳಿಗೆ ಅಂತಹ ನೋವು ಬೇಡ ಎನ್ನಿಸಿ ತಾಯಿಯ ಬಗ್ಗೆ ತಿಳಿದ ಮೇಲೂ ಆಕೆಯನ್ನು ಅಕ್ಕರೆಯಿಂದ ಕರೆದೊಯ್ದು ತನ್ನ ಕರ್ತವ್ಯ ಮೆರೆವ ಮಗನೇ ಇರಲಿ ಆಕೆಗೆ ಎನ್ನಿಸಿತು. ಅದಕ್ಕೇ ಹಾಗೆ ಕವನವನ್ನು ಮುಗಿಸಬೇಕಾಯ್ತು. ಇನ್ನು ಮುಂದೆ ತಾಯಿಯ ಬದಲು ತಾಯಿಗಾಗಿ ಒಳ್ಳೆಯ ರೀತಿಯಿಂದ ಆ ಮಗ ದುಡಿಯಬಹುದು ಬಹುಶಃ.

ಸಾಗರಿ.. said...

ಶಂಭು ಲಿಂಗ ಅವರೇ,
ಕವನವನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಸಾಮಾಜಿಕ ಪಿಡುಗು ಎಂದೇ ಹೆಳಬಹುದಾದ ವೇಶ್ಯಾವೃತ್ತಿ ಕೊನೆಗೊಳ್ಳೋದು ಅಸಾಧ್ಯವೇ ಸರಿ, ಕಾಮುಕರು ಸಾಚಾ ಆಗ್ತಾರೆ ಅಂತ ನನಗೆ ಅನ್ನಿಸಲ್ಲ. ಅಂದು ಬಂದ ಮಹಿಳೆಯರೆಲ್ಲ AIDS ಬಾಧಿತರು, ಆದ್ರೂ ಅವರನ್ನು ವೇಶ್ಯೆಯಾಗಿಯೇ ಇರುವಂತೆ ಬಲವಂತ ಮಾಡುವ ಜನರೇ ಹೆಚ್ಚಂತೆ, ತಮಗೆ ಹಬ್ಬಬಹುದಾದ ರೋಗದ ಭೀತಿಯೂ ಅವರಿಗೆ ಇರೊಲ್ವಂತೆ. ಆ ಕ್ಷಣದ ಕಾಮುಕತೆ ಹೇಗಿರಬಹುದು. ಒಳ್ಳೆಯ ಶಿಕ್ಷಣದೊಂದಿಗೆ ಇಂದ್ರಿಯ ನಿಗ್ರಹದ ಪಾಠವೂ ಅವಶ್ಯವಿದೆ ಎನ್ನಿಸುತ್ತದೆ.

ಸಾಗರಿ.. said...

ದಿನಕರ್ ಅವರೇ,
ತಮಗೆ ನನ್ನ ಬ್ಲಾಗಿಗೆ ಸ್ವಾಗತ. ಕವನವನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಅವಳಿಗೆ ಅವಳ ನಿಜ ಚಹರೆ ತಿಳಿದೂ ಅಷ್ಟೇ ಶಾಂತವಾಗಿ ಮನೆಗೆ ಕರೆದುದೊಯ್ಯುವ ಮಗನೇ ಸರಿಯಾದ ಕೊಡುಗೆ ಎನ್ನಿಸಿತು ನನಗೆ. ಅವಳು ಯಾರಿಗೂ ಮೋಸ ಮಾಡಿಲ್ಲ, ತನಗೇ ಬರೆ ಎಳೆದುಕೊಂಡಳು. ಯಾರ ಜೀವವನ್ನೂ ತೆಗೆದಿಲ್ಲ, ತಾನೆ ಕರಗಿ ಹೋದಳು ಶಯ್ಯೆಯಲ್ಲಿ. ಎಂದಾದರೂ ಒಮ್ಮೆ ಖಂಡಿತ ಅವರೊಂದಿಗಿನ ಮಾತು ಕತೆ ಬ್ಲಾಗಲ್ಲಿ ಬರೆಯುವೆ. ನಾನು ನಿಮ್ಮ ಬ್ಲಾಗನ್ನೂ ಓದುತ್ತಿದ್ದೇನೆ, ಆಗಾಗ ಕಾಮೆಂಟ್ ಕೂಡ ಹಾಕಿದ್ದೇನೆ. ಕವನಗಳನ್ನು ಓದಿದ್ದೇನೆ, ಕತೆಯನ್ನೂ ಓದುವೆ.

V.R.BHAT said...

ನಿಮ್ಮ ಕವನವೇನೋ ಚೆನ್ನಾಗಿದೆ,ಆದ್ರೆ ಅದು ಕವನವಾಗೇ ಇರಲಿ. ವಾಸ್ತವದಲ್ಲಿ ವೇಶ್ಯೆಯರು ಆ ವೃತ್ತಿಗೆ ಇಳಿಯುವ ಬದಲು ಬೇರೆ ವೃತ್ತಿಯಲ್ಲಿ ತೊಡಗಲು ಹಲವಾರು ದಾರಿಗಳಿವೆ ಇಂದು, ಇದು ಹಳೆಯ ಕಾಲವಲ್ಲ. ಹೈಟೆಕ್ ಭಿಕ್ಷುಕರು, ಹೈಟೆಕ್ ವೆಶ್ಯೆಯರೂ ಇದ್ದಾರಾಗಿ ತಿಳಿದುಬರುತ್ತದೆ. ಉಪಜೀವಿತಕ್ಕಾಗಿ ಹಲವು ಮಾರ್ಗಗಳಿವೆ, ಕಣ್ಣೇ ಕಾಣದವರೂ ಕೂಡ ಗಣಕಯಂತ್ರದಲ್ಲಿ ಕೆಲಸಮಾಡುತ್ತಾರೆ, ಹಾಡುತ್ತಾರೆ, ಹೀಗಿರುವಾಗ ಬದುಕಿನಲ್ಲಿ ಏನೇ ಅನಿವಾರ್ಯತೆ ಬಂದರೂ ಒಮ್ಮೆ ಬಂದ ಅನಿವಾರ್ಯತೆ ಕಳೆದ ಮೇಲಾದರೂ ಅವರು ಬದಲಾಗಿ ಬೇರೆ ವೃತ್ತಿ ಹಿಡಿದರೆ ತುಂಬಾ ಒಳ್ಳೆಯದು,ಬೀಡಿ ಕಟ್ಟುವುದು, ಊದಬತ್ತಿ ಹೊಸೆಯುವುದು, ಹಪ್ಪಳ ಮಾಡಿಕೊಡುವುದು, ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುವುದು, ಒಂದೇ ಎರಡೇ? ವೃತ್ತಿಯೇ ಇಲ್ಲ ಎನ್ನುವವರಿಗೆ ದಿನವೂ ಕಣ್ಣೀರೇ. ಹೀಗೆ ಬೇರೆ ವೃತ್ತಿ -ಅದು ಅವರಿಗೆ ಬೇಕಾಗಿಲ್ಲ, ಹೀಗಾಗಿ ಯೌವ್ವನದ ಕಸುವು ಕಳೆಯುವವರೆಗೆ ಅವರು ಶಯ್ಯೆಯಲ್ಲಿ ಕರಗಿ ಹೋಗುತ್ತಾರೆ, ಇಲ್ಲಾಂದರೆ ಅಷ್ಟಿದ್ದರೆ ಅಂತಹ ವೃತ್ತಿಗೆ ತಳ್ಳುವ ಕುಟುಂಬಿಕರನ್ನು ಬಿಟ್ಟು ಆಚೆ ಬಂದು ಏನಾದರೂ ಸಾಧಿಸಬಹುದು. ಬಲವಂತವಾಗಿ ಕಾಮಾಟಿಪುರದಲ್ಲಿ ಮಾರಲ್ಪಟ್ಟ ಹುಡುಗಿಗೂ ಮಿಕ್ಕುಳಿದ ಹೆಂಗಸರಿಗೂ ಅಜಗಜಾಂತರವಿದೆ, ನಾನು ಎಲ್ಲವನ್ನೂ ಒಪ್ಪುವುದಿಲ್ಲ.

ಸಾಗರಿ.. said...

ಕಾಮಾಟಿ ಪುರದಲ್ಲಿದ್ದವರು ಮಾತ್ರ ಮಾರಲ್ಪಟ್ಟವ್ರೇ?? ಇನ್ನುಳಿದವರೆಲ್ಲಾ ತಮ್ಮ ಆಸೆ, ಕನಸು ಆಕಾಂಕ್ಷೆಗಳನ್ನು ತುಳಿದು ಇಷ್ಟಪಟ್ಟು ಈ ಮಾರ್ಗಕ್ಕಿಳಿದವರೇ?? ಮನೆಯಲ್ಲಿ ಕ್ಯಾನ್ಸರ್ ಆದ ಗಂಡ, ಕಣ್ಣು ಕಾಣದ ಅತ್ತೆ, ಹಸಿದ ನಾಲ್ಕು ಮಕ್ಕಳಿರುವ ಹೆಂಗಸು. ದಿನಾ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಅವರಿವರ ಮುಸುರೆ ತಿಕ್ಕಿ ಬದುಕುತ್ತಾಳಂತೆ, ಅವಳ ಸಂಬಳ ಬಟ್ಟೆಗಲ್ಲ ಹೊಟ್ಟೆಗೂ ಸಾಲಲ್ಲ. ನಿಮ್ಮ ಮನೆ ಕೆಲಸದಾಕೆಗೆ ೫-೧೦ ಸಾವಿರ ಸಂಬಳ ಕೊಡುತ್ತಿದ್ದೀರೇನು ಮತ್ತೆ?? ನಮ್ಮ ಮನೆಯ ಕೆಲಸದಾಕೆಗೆ ನಾನು ೪೦೦ ರೂಪಾಯಿ ಕೊಡುತ್ತಿದ್ದೇನೆ. ಆಕೆ ೭ ಮನೆಗಳಲ್ಲಿ ಕೆಲಸ ಮಾಡ್ತಿದ್ದಾಳೆ, ಅವಳ ಗಂಡ ಕೂಡ ದುಡೀತಾನೆ. ಆದರೂ ಆಗಾಗ ಅಕ್ಕಾ ಸಾಲ ಬೇಕು ಎನ್ನೋದು ಆಕೆಯ ರಾಗ. ಇನ್ನು ರೋಗಿಗಳು ಹಸಿದವ್ರೇ ತುಂಬಿದ ಮನೆಗಳ ಗತಿ, ಹೋಗ್ಲಿ ನೀವು ಬೆಡುವವರಿಗೆ ಎಷ್ಟು ದುಡ್ಡು ಹಾಕ್ತೀರಾ? ಗಟ್ಟಿ ಇದ್ದವರಿಗೆ ನಾನಂತೂ ಭಿಕ್ಷೆ ಹಾಕಲ್ಲ. ಸೊಟ್ಟಗಿದ್ದವರಿಗೆ ೨ ರೂಪಾಯಿ ಹಾಕ್ತೇನೆ. ಇಡೀ ದಿನ ಬೇಡಿದರೂ ಎಷ್ಟು ದುಡ್ಡು ಸೇರಬಹುದು? ಬತ್ತಿ ಹೊಸೆವವರೂ side business ಅಂತ ದಂಧೆ ಬಹಳಷ್ಟು ಮಂದಿ ಮಾಡ್ತಾರೆ ಅದು ಗೊತ್ತಾ? ಭಟ್ರೆ, ಕಾರಂತರು ಮೈ ಮನಗಳ ಸುಳಿಯಲ್ಲಿ ಬರೆಯೋವಾಗ ೧೫ ದಿನ ವೇಶ್ಯೆಯರ ಬೀದಿಯಲ್ಲಿ ಅಲೆದು ತಿಳಿದು ಬರೆದರಂತೆ, ನೀವೂ ಸಮಾಜವನ್ನು ನೋಡಿ, ನಾನು anonymous ಅವರಿಗೆ ಕೆಲವೊಂದು ಪ್ರಶ್ನೆ ಕೇಳಿದ್ದೇನೆ, ಕೊನೆಯ ಒಂದು ಸಹಲಹೆಯನ್ನಾದ್ರೂ ದುಡ್ಡಿದ್ದವರು ಪಾಲಿಸಬಾರದು, ದತ್ತು ಅಂತ ಮನೆಗೆ ತಂದಿಟ್ಟುಕೊಳ್ಳುವುದಲ್ಲ, atleast ಅವ್ರ ವಿದ್ಯೆಗೆ ದುಡ್ಡು ಕೊಡಬಹುದೇನೋ!!
ನಾನು ಯಾರನ್ನೂ ವೇಶ್ಯೆಯಾಗಿ ಅದು ಸುಲಭದ ಮತ್ತು ದುಡ್ಡು ಮಾಡುವ ದಾರಿ ಅಂತ ತೋರಿಸಿಕೊಡುತ್ತಿಲ್ಲ. ಬದಲಿಗೆ ಜೀವನದಲ್ಲಿ ಪರಿವಾರಕ್ಕಾಗಿ ಎಲ್ಲವನ್ನೂ ಕಳೆದುಕೊಂಡ ವೇಶ್ಯೆಯರಿಗೆ ಒಂದು ಪುಟ್ಟ ಕವನ ಕೊಟ್ಟಿದ್ದೇನೆ. ಕವನ ಅರ್ಪಿಸಿದರೂ ತಪ್ಪೆನ್ನುವರು ಅವರಿಗಾಗಿ ಒಂದು ಕೆಲಸಕೊಡಲು ಮುಂದೆ ಹೇಗೆ ಬಂದಾರು??
ಕವನ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

ಸಾಗರಿ.. said...

ಭಟ್ರೆ,
ಹಿಂದಿನ ಉತ್ತರ ನಿಮಗಾಗಿಯೇ, ಹೆಸರು ಹೇಳಲು ಮರೆತೆ. ಒಂದು ಪ್ರಶ್ನೆ ಕೇಳೋಕೂ ಮರೆತೆ,, ನಿಮ್ಮ ಮನೆಯಲ್ಲಿ, ನಿಮ್ಮ ಮಕ್ಕಳಿಗೋ/ತಾಯಿಗೋ/ಪತ್ನಿಗೋ ಕೆಟ್ಟ ರೋಗ ಬಂದು ಹಣದ ಅಭಾವ ಸಿಕ್ಕಾಪಟ್ಟೆ ಆಯ್ತು ಅಂದ್ರೆ ಅವ್ರನ್ನ ಬಿಟ್ಟು ಓಡಿ ಸಂನ್ಯಾಸ ಸೇರುವ ಆಲೋಚನೆ ನಿಮಗಿಲ್ಲವಷ್ಟೇ?? (touchwood ಅಂತಹ ಸ್ಥಿತಿ ಯಾರಿಗೂ ಬೇಡ.) ಪಾಪ ಆ ಹೆಂಗಸು ಮಕ್ಕಳನ್ನು ಬಿಟ್ಟು ಹೊರಬರಬೇಕು(ಮಕ್ಕಳೋ, ಹೆತ್ತವರೋ ಯಾರನ್ನೇ ಅಗಲಿ) ಅಂತ ಹೇಗೆ ಆರಾಮಾಗಿ ಹೇಳಿಬಿಟ್ರಿ.

Dr.D.T.Krishna Murthy. said...

ಸಾಗರಿಯವರೇ ,ನಿಮ್ಮ ಬ್ಲಾಗಿಗೆ ಮೊದಲ ಬಾರಿ ಬರುತ್ತಿದ್ದೇನೆ.ನಿಜಕ್ಕೂಮನಸ್ಸು ಭಾರವಾಯಿತು.ಕವನ ಓದಿ ಆ ತಾಯಿಗಾಗಿ ಮನಸ್ಸು ಮಿಡಿಯಿತು.ನಾನು ಇಪ್ಪತ್ತು ವರ್ಷಗಳ ಹಿಂದೆ ಬರೆದ 'ಕ್ಯಾಬರೆ ನರ್ತಕಿಯರು 'ಎಂಬ ಕವನದ ಕೊನೆಯ ಸಾಲುಗಳು ನೆನಪಿಗೆ ಬಂತು .
ಆ ಸಾಲುಗಳು ಹೀಗಿವೆ ;ಯಾವ ವಿಧಿಯು ಅವರನಿಲ್ಲಿ ಎಳೆದು ತಂದಿತೋ ?ಮೈಯ್ಯ ತೋರಿ ದುಡಿಯುವಾಸೆ ಏಕೆ ಬಂದಿತೋ?ಬಡತನವೋ
ಸಾಲವೋ ?ಸೋರಿಹೋದ ಶೀಲವೋ?ಹೆತ್ತವರ ಜಾಡ್ಯವೋ ?ಇಲ್ಲ ಬರೀ ಮೌಡ್ಯವೋ?ಏಕೋ ಏನೋ ಅವರ ಮುಖದಿ ದೈನ್ಯ ಕಂಡೆನು !
ಅಕ್ಕ ತಂಗಿ ನೆನಪು ಬರಲು, ಹೊರಗೆ ನಡೆದೆನು.!ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ,ಅವರಿಗೆ ಸಾಂತ್ವನ ಹೇಳುವಂತಹ ಮನಸ್ಸು
ಬೇಕು.ಸಮಾಜದ ಕಣ್ಣು ತೆರಸುವ ಕವಿತೆ ಬರೆದಿದ್ದಕ್ಕೆ ಧನ್ಯವಾದಗಳು .ನನ್ನ ಬ್ಲಾಗಿಗೆ ಬನ್ನಿ .

ಸೀತಾರಾಮ. ಕೆ. / SITARAM.K said...

ಹೆಣ್ಣು ಮಕ್ಕಳು ಮರ್ಯಾದಿಯಾಗಿ ದುಡಿಯುವಲ್ಲೂ ಕಾಮುಕರ ಕಣ್ಣುಗಳು ಸುತ್ತಿ ಸಿಕ್ಕರೆ ತಿನ್ನುವೆನೆ೦ಬ ವೃತ್ತಿ ಲೈಗಿ೦ಕ ಕಿರುಕುಳವೂ ನಿತ್ಯದ್ದಾಗಿದೆ. ಅವುಗಳ ಕೆಲವೇ ಕೆಲವು ಹೊರ ಬ೦ದ ಉದಾಹರಣೆಗಳು, ನ್ಯಯಾಲಯದಲ್ಲಿ ಅವರಿಗೆ ಸಿಕ್ಕ ನ್ಯಾಯಗಳಾಗಲಿ ನಮ್ಮ ಕಣ್ಣ ಮು೦ದೆ ಇವೆ. ಇ೦ತಹದರಲ್ಲಿ ಸಾಮಾಜಿಕ ಕಳಕಳಿಯ ಕವನ ಪ್ರಸ್ತುತ ಮತ್ತದರ ಕೊನೆಯ ಸಾಲಿನ ಆಶಯದ ಹರವು ಅಪಾರ. ಇ೦ತಹುದರಲ್ಲಿ ಆ ಆಶಯಗಳ ಪೂರಕವಾಗಿ ಸ್ಪ೦ದನೆ ಅವಶ್ಯ.
ಸಾಗರೀಯವರೇ ಇ೦ತಹುದರಲ್ಲಿ ತಮ್ಮ ಪ್ರತಿಕ್ರಿಯೆ-ಮರುಪ್ರತಿಕ್ರಿಯೆ ಕವನಕ್ಕಿ೦ತಾ ಹರಿತವಾಗಿದೆ!! ಮತ್ತು ಅವಶ್ಯವೂ ಆಗಿದೆ.
ತಮ್ಮ ಕಳಕಳಿಗೆ ವ೦ದನೆ. ಈ ನಿಟ್ಟಿನಲ್ಲಿ ನಾವೆಲ್ಲಾ ಸ೦ಕಲ್ಪಿಸಿ ಸ್ವಾಸ್ತ್ಯ ಸಮಾಜವನ್ನು ಕಟ್ಟಬೇಕಾಗಿದೆ.

ಮನಸಿನ ಮಾತುಗಳು said...
This comment has been removed by the author.
ಮನಸಿನ ಮಾತುಗಳು said...

Kavana chennagide....
aaadare oodi besaravaaayitu... :(
entha viparyaasa allwa?...

ಸಾಗರಿ.. said...

ಕೃಷ್ಣಮೂರ್ತಿಯವರೇ,
ನನ್ನ ಬ್ಲಾಗಿಗೆ ತಮಗೆ ಸ್ವಾಗತ, ದಾರಿ ತಪ್ಪಿದವರನ್ನು ದೂಷಿಸುತ್ತ ಕುಳಿತರೆ ಸರಿ ದಾರಿ ಅವರಿಗೆ ಕಾಣುವುದಾದರೂ ಹೇಗೆ? ದಾರಿ ಸರಿಯೋ ತಪ್ಪೋ ಎಂಬುದನ್ನು ತಿಳಿದವರೂ ವೇಶ್ಯಾವೃತ್ತಿ ನಡೆಸುವುದಕ್ಕೆ ಅವರನ್ನು ಕಿತ್ತು ತಿನ್ನುವ ಬಡತನ ಮತ್ತು ಅಜ್ಞಾನವೇ ಕಾರಣ ಎನ್ನಬಹುದೇನೋ. ಅವರನ್ನು ಬದಲಿಸಲು ಮೊದಲು ನಮ್ಮ ದೂಷಣೆಯ ವ್ಯವಹಾರವನ್ನು ಬದಲಿಸಿಕೊಳ್ಳಬೇಕು ಎಂಬುದು ನನ್ನ ಅಭಿಮತ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರಿ.. said...

ಸೀತಾರಾಮ್ ಸರ್,
ನಾನು ಅಷ್ಟು ತೀಕ್ಷ್ಣವಾಗಿ ಪ್ರತಿಕ್ರೀಯಿಸಬಾರದಿತ್ತೇನೋ ಎನ್ನಿಸುತ್ತಿದೆ, ನನಗೆ ವಿ.ಅರ್.ಭಟ್ಟರನ್ನಾಗಲಿ, anonymous ಅವರನ್ನಾಗಲಿ ದೂಷಿಸುವ ಅಥವ ನೋಯಿಸುವ ಉದ್ದೇಶವಿರಲಿಲ್ಲ. ಒಂದು ಕಾಲದಲ್ಲಿ ವೇಶ್ಯೆಯರ ಬಗ್ಗೆ ನನ್ನದು ಅಂತಹದ್ದೇ ಅಭಿಪ್ರಾಯ ಇತ್ತು. ಗಟ್ಟಿ ಇದ್ದವರಿಗೆ ದುಡಿದು ತಿನ್ನಲೇನು ರೋಗ ಅಂತ. ಆದರೆ ವೇಶ್ಯೆಯರನ್ನು ಅಷ್ಟು ಸಮೀಪದಿಂದ ನೋಡಿ ಮಾತನಾಡಿಸಿದ ಮೇಲೆ ನನ್ನ ಭಾವನೆ ಬದಲಾಗಿದೆ.
ತಮ್ಮ ಪ್ರತಿಕ್ರೀಯೆಗೆ ಧನ್ಯವಾದಗಳು.

ಸಾಗರಿ.. said...

ದಿವ್ಯಾ ಅವರೇ,
ಇದು ವಿಪರ್ಯಾಸದ ಸಣ್ಣ ಉದಾಹರಣೆ ಅಷ್ಟೇ, ಇಂತಹ ಎಷ್ಟೋ ವಿಪರ್ಯಾಸದ ಸಂಗತಿ ಅಂಥವರ ಬದುಕಲ್ಲಿ ನಿತ್ಯ ನಡೆಯುತ್ತಲೇ ಇರುತ್ತದೆ. ನಮ್ಮಂತಹ ವಿದ್ಯಾವಂತರು ಅಂಥವರನ್ನು ಎತ್ತಿ ತಿದ್ದಬೇಕಿದೆ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ. ಒಂಥರ ವಿಚಿತ್ರ ಸಂಕಟವಾಯಿತು ಕವನ ಹಾಗೂ ಟಿಪ್ಪಣಿ ನೋಡಿ. ಅಂಥ ಮಗರಾಯ ಸಿಕ್ಕರೆ ಬಾಳು ಮುಂದಾದರೂ ಸ್ವರ್ಗವಾಗಬಹುದು ಇಂಥ ಅಭಾಗಿನಿಯರದ್ದು. ಆದರೆ ಅದು ಬಹು ಕಷ್ಟವೇ ಸರಿ.

ನಿಮ್ಮ ಕಾಳಜಿ, ಸಹಾನುಭೂತಿಯನ್ನು ಕಂಡು ತುಂಬಾ ಮೆಚ್ಚುಗೆಯಾಯಿತು. ಇಂತಹವರನ್ನು ಸದಾ ದೂರವಿಡುವ, ನಿಕೃಷ್ಟವಾಗಿ ನೋಡುವ ನಮ್ಮ ಸಮಾಜ, ಅವರು ಈ ರೀತಿಯಾಗುವುದಕ್ಕೆ ಕಾರಣವೇನೆಂದು ನೋಡಲು ಹೋಗುವುದೇ ಇಲ್ಲ! :( ಸಮಸ್ಯೆಯನ್ನು ತೊಲಗಿಸಬೇಕೇ ವಿನಃ ಆ ಸಮಸ್ಯೆಗೆ ಒಳಗಾಗಿದವರನ್ನೇ ಅಲ್ಲ. ವೇಶ್ಯೆಯರನ್ನೆಲ್ಲಾ ಸಾಯಿಸಬೇಕು ಇಲ್ಲಾ ಹೊರಹಾಕಬೇಕು ಎನ್ನುವವರಿಗೆ ಒಂದು ಸಣ್ಣ ಪ್ರಶ್ನೆ. ತಮಗೆ ಜ್ವರ ಬಂದರೆ ನಿಮ್ಮನ್ನು ನೀವು ಸಾಯಿಸಿಕೊಳ್ಳುತ್ತೀರೋ ಇಲ್ಲಾ ಜ್ವರಕ್ಕೆ ಕಾರಣವಾಗಿರುವ ವೈರಸ್ ಅನ್ನು ಸಾಯಿಸುತ್ತೀರೋ?! ನೀವಂದಂತೆ ಕೆಲವರು ಕೇವಲ ದುಡ್ಡಿಗೋಸ್ಕೋರ, ಆಮೀಷಕ್ಕೋಸ್ಕರ ಹೈಟೆಕ್ ಜೀವನಕ್ಕೋಸ್ಕರ ಈ ವೃತ್ತಿಗೆ ಇಳಿಯುತ್ತಾರೆ. ಆದರೆ ಹೆಚ್ಚಿನವರು ಅಲ್ಲ. ಅದರಲ್ಲೂ ಸಾಮಾನ್ಯ ಮಹಿಳೆಗೆ ಎಂದೂ ಈ ಒಂದು ಕೆಟ್ಟ ವೃತ್ತಿ ವೇದ್ಯವಾಗದು!

V.R.BHAT said...

ಸಾಗರಿಯವರೇ ಹಾಗೂ ಪ್ರೋತ್ಸಾಹಿಸಿದ ಅನೇಕ ಓದುಗ ಮಿತ್ರರೇ, ನಿಮ್ಮೆಲ್ಲರನ್ನು ಉದ್ದೇಶಿಸಿ ಎರಡು ಮಾತು, ಬುದ್ಧನ ಎದುರಿಗೆ ಸತ್ತು ಮಗುವನ್ನು ತಂದಿಟ್ಟು ಬದುಕಿಸುವಂತೆ ಗೋಳಿಟ್ಟಾಗ ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತಂದುಕೊಟ್ಟರೆ ಮಗುವನ್ನು ಬದುಕಿಸುತ್ತೇನೆ ಎಂದು ಬುದ್ಧ ಹೇಳಿದನಂತೆ, ಅದೇ ರೀತಿ ಕಷ್ಟವಿಲ್ಲದ, ರೋಗ ಮುಕ್ತ ಮನೆ ಎಂಬುದು ಇದ್ದರೆ ಅದು ಕನಸು, ಪ್ರತೀ ಮನೆಯಲ್ಲಿ ಇಂದು ಬೊಗಸೆ ಬೊಗಸೆ ಮಾತ್ರೆ ತಿನ್ನುತ್ತಾರೆ, ಎಲ್ಲಾ ಗಲ್ಲಿಗಲ್ಲಿಗಳಲ್ಲಿ ಒಂದೋ ಎರಡೋ ಔಷಧ ಅಂಗಡಿಗಳಿವೆ.ಹೀಗಾಗಿ ಬಹುತೇಕ ಜನ ಸುಖದಿಂದ್ದಾರೆ ಎಂಬ ವಾದ ಸುಳ್ಳು.

ಇನ್ನು ಪ್ರತಿ ವ್ಯಕ್ತಿ ತನ್ನ ಕಷ್ಟವನ್ನು ಹೇಳಿಕೊಳ್ಳಲು ಹಲವಾರು ಮಾರ್ಗಗಳಿವೆ, ಹಲವಾರು ಮಾಧ್ಯಮಗಳಿವೆ, ಹಲವಾರು ಸರಕಾರೇತರ ಸಂಸ್ಥೆಗಳಿವೆ, ಈ ಕಾಲ ಹಿಂದಿನಕಾಲದ ಹಾಗೇ ಕಾರ್ಗತ್ತಲ ಕಾಲವಲ್ಲ, ನಮ್ಮ ಜನ ಶ್ರೀಮಂತರಲ್ಲದಿದ್ದರೂ ಉದಾರಿಗಳು,ಹೃದಯವಂತರು. ಮೊನ್ನೆ ಉತ್ತರಕರ್ನಾಟಕದ ಜನತೆ ಮಳೆಯಿಂದ ತತ್ತರಿಸಿದಾಗ ಬರೇ ಬೆಂಗಳೂರಿಂದಲೇ ಕೋಟಿಗಟ್ಟಲೆ ಸಹಾಯ ಮಾಡಿದರು, ತನು-ಮನ-ಧನ ಸಹಾಯಕ್ಕೆ ಉದಾಹರಣೆ ಇನ್ನೂ ಬೇಕೇ ? ಬಡತನದಲ್ಲಿ ನೋಯುವ, ಬೇಯುವ ಬಸವಳಿಯುವ, ಎಳವೆಯಲ್ಲೇ ತಲೆಬಿಸಿಯಿಂದ ಮುದುಕಾಗುವ ಹಲವು ಹತ್ತು ವ್ಯಕ್ತಿಗಳಿದ್ದಾರೆ. ಅದಕ್ಕೆಲ್ಲ ಪರಿಹಾರ ಕೇವಲ ವೇಶ್ಯಾವಾಟಿಕೆಯಲ್ಲ, ಒಂದೊಮ್ಮೆ ವೇಶ್ಯಾವಾಟಿಕೆ ಮಾಡಿದರೂ ಎಲ್ಲಿಯತನಕ ಅದು ಮುಂದುವರಿಯಲು ಸಾಧ್ಯ ಅಥವಾ ಅದರಿಂದ ಬರುವ ಹಣದಿಂದ ನೀವೇ ಹೇಳಿದ ಕ್ಯಾನ್ಸರ್ ಪೀಡಿತ ಗಂಡ, ಕಣ್ಣು ಕಾಣದ ಮುಡುಕು ಅತ್ತೆ, ಸಣ್ಣ ಸಣ್ಣ ಹಲವು ಮಕ್ಕಳು--ಇಲ್ಲಿ ಬಡತನಕ್ಕೆ ನೂರೆಂಟು ಮಕ್ಕಳೇಕೆ, ಇವತ್ತಿಗೆ ಅಜಮಾಸು ೪೦ವರ್ಷಗಳಾದವು ಕುಟುಂಬ ಯೋಜನೆ ಬಂದು,ಇವತ್ತಿನ ಯಾವ ಕಸ-ಮುಸುರೆ ತೊಳೆಯುವವಳಿಗೂ ಬರ್ತ ಕಂಟ್ರೋಲ್ ಅಂದ್ರೆ ಏನೂಂತ ಗೊತ್ತು, ಅಂದಮೇಲೆ ಮಕ್ಕಳು ಎಷ್ಟು ಬೇಕು,ಎಷ್ಟಾದರೆ ಸಾಕಲು ಸಾಧ್ಯ ಎಂಬ ವಿಚಾರ ಅವರಿಗಿರಲಿಲ್ಲವೇ? ಬೆಂಕಿಗೆ ಮಕ್ಕಳೂ ಒಂದೇ ದೊಡ್ಡವರೂ ಒಂದೇ, ಗೊತ್ತಿದ್ದರೂ ಒಂದೇ, ಗೊತ್ತಿರದಿದ್ದರೂ ಒಂದೇ, ಬೆಂಕಿಯ ಬಗ್ಗೆ ತಿಳಿದುಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಅಲ್ಲವೇ. ಹೀಗಾಗಿ ಪ್ರಜ್ಞಾವಂತ ಜನಾಂಗ ವೇಶ್ಯಾವಾಟಿಕೆಗೆ ಪ್ರೋತ್ಸಾಹ ನೀಡಬಾರದು, ಅವರನ್ನು ಅಲ್ಲಿಂದ ಆಚೆತರಲು ಪ್ರಯತ್ನಿಸಬೇಕು. ವೆಶ್ಯೇಯರನ್ನೇ ಹೊರದಬ್ಬಿ ಅಟ್ಟಿ ಅಂತ ನಾನು ಹೇಳಿಲ್ಲ, ಅವರನ್ನು ಪರ್ಯಾಯ ಕೆಲಸದಲ್ಲಿ ತೊಡಗಿಸಿ, ಇದಕ್ಕೆ ತಮ್ಮಂಥವರು ಅನೇಕರು ಸೇರಿಕೊಂಡು ಶ್ರೀಶಕ್ತಿ ಸಂಘಗಳ ಮೂಲಕ ಕೆಲಸ ಮಾಡಬಹುದಲ್ಲ ? ಯಾಕೆಂದರೆ ನಾವು ಕೊಡುವ ಪುಡಿಗಾಸು ಎಷ್ಟುದಿನ ಅವರಿಗೆ ಸಾಕು ಅಲ್ಲವೇ ಸಾಗರಿಯವರೇ ?

ಇನ್ನು ನೀವು ನನ್ನ ವೈಯಕ್ತಿಕದ ಬಗ್ಗೆ ಬರೆದಿರಿ, ಜೀವನದಲ್ಲಿ ಎಳೆಯ ವಯಸ್ಸಿಗೆ ಯಾವುದನ್ನು ಅನುಭವಿಸಬಾರದೋ ಅಂತಹ ಕಷ್ಟ ನಾನು ಅನುಭವಿಸಿದ್ದೇನೆ, ನನ್ನ ಅನುಭವ ಕಥನವೇ ಬೇರೆ, ನಾನು ಪರಿಸ್ಥಿತಿಯ ಕೈಗೊಂಬೆಯಾಗಲಿಲ್ಲ, ದೃಢವಾಗಿ ಅಚಲವಾಗಿ ನಾನು ನಂಬಿದ ಶಕ್ತಿಯನ್ನು ಧ್ಯಾನಿಸುತ್ತ [ ಸನ್ಯಾಸಿಯಾಗಿ ಓಡಿ ಹೋಗಲಿಲ್ಲ, ಸಂಸಾರಿ ಸದಚಾರದಿಂದಿದ್ದೂ ಸನ್ಯಾಸಿಯ ಥರ ಬದುಕಬಹುದು ಎಂಬುದಕ್ಕೆ ನಿಮಗೆ ಇತ್ತೀಚಿನ ಪ್ರಮುಖ ಉದಾಹರಣೆ ಡಾ| ವಿಷ್ಣುವರ್ಧನ್, ಹಲವಾರು ವಿಶೇಷ ವೈದ್ಯರು ಕೈಚೆಲ್ಲಿ ಕಣ್ಣು ಮಿಟುಕಿಸುತ್ತ ಕುಳಿತ ಒಂದು ಸಂದರ್ಭವನ್ನು ನನ್ನ ಮನೋ ದಾರ್ಷ್ಟ್ಯತೆಯಿಂದ ಸಹಿಸಿಕೊಂಡು ಭಾರತೀಯ ಮೂಲದ ಆಯುರ್ವೇದವನ್ನು ಅನುಸರಿಸಿ ಬಂದ ಪರಿಸ್ಥಿತಿಯನ್ನು ಗೆದ್ದಿದ್ದೇನೆ ಎಂದೂ ನಿಮಗೆ ತಿಳಿಸಲು ಹರುಷಪಡುತ್ತೇನೆ ! ಹಾಗಾಗಿಯೇ ನನ್ನ ಕಥನ-ಕವನಗಳಲ್ಲಿ ಅನುಭವ ಜನ್ಯ ವಸ್ತು ವಿಷಯಗಳೇ ಇರುತ್ತವೆ.

ಹೀಗಾಗಿ ನೀವು ಬರೆದ ಕವನ ಕವನವೇ ಆಗಿರಲಿ ಎಂದು ಬೂಟಾಟಿಕೆಗೆ ಹೇಳಿಲ್ಲ, ಬದಲಾಗಿ ಸಮಾಜ ಮುಂದೆ ಅಂತಹ ವೇಶ್ಯಾವೃತ್ತಿ ಆದಷ್ಟೂ ನಿವಾರಣೆಯಾಗುವಂತೆ ಮಾಡಬೇಕೆಂಬುದೇ ನನ್ನ ಅನಿಸಿಕೆ. ನೀವೇ ಹೇಳಿದಿರಿ ಸೊಟ್ಟ ಭಿಕ್ಷುಕ ಕಂಡರೆ ರೂಪಾಯಿ ಹಾಕುತ್ತೇನೆ, ಅಂಥವರಿಗೆ ಪರ್ಯಾಯವನ್ನು ಸರ್ಕಾರ,ಸಂಘ ಸಂಸ್ಥೆಗಳು ಹುಡುಕುತ್ತಿವೆ, ಭಿಕ್ಷಾಟನೆ ಹೋಗಬೇಕೆಂದು ಕಡ್ಡಾಯ ಕಾನೂನು ಕೂಡ ಬಂತು, ಒಮ್ಮೆ ಇಲ್ಲಿ ಕೇಳಿ- ಕೆಲ ಸೊಟ್ಟ ಭಿಕ್ಷುಕರು ಗಳಿಸಿದಷ್ಟು ನಮ್ಮ ಸಾದಾ ಸೀದಾ ನೌಕರರು ಗಳಿಸುತ್ತಿಲ್ಲ! ಅವರಲ್ಲಿರುವ ಬ್ಯಾಂಕ್ ಬ್ಯಾಲೆನ್ಸ್ ನಮ್ಮ ಮಧ್ಯಮ ವರ್ಗದ ಅನೇಕರಲ್ಲಿಲ್ಲ ! ನನ್ನ ನಿಲುವಿಗೆ ನಾನು ಬದ್ಧ, ಇಷ್ಟು ಸಾಕು ಅನಿಸುತ್ತದೆ, ಇನ್ನೂ ನಿಮಗೆ ಉತ್ತರ ಬೇಕೆಂದರೆ ಹೇಳಿ ದೂರವಾಣಿಯಲ್ಲೇ ನಿಮಗೆ ಸವಿವರವಾಗಿ ಹೇಳುತ್ತೇನೆ.

ನಾಗರಾಜ್ .ಕೆ (NRK) said...

ಓದಿದೆ, ಮತ್ತೊಮ್ಮೆ ಓದಿದೆ
ಕೊನೆಯ ಸಾಲುಗಳತ್ತ ಬರುತ್ತಿದ್ದಂತೆಯೇ ಅದೇನೋ ಸಂಕಟ

ಸಾಗರಿ.. said...

ತೇಜಸ್ವಿನಿ ಅವರೇ,
ಕವನವನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಮಾತು ಅಕ್ಷರಶಹ ನಿಜ. ನಮ್ಮ ದೇಶದಲ್ಲಿ ಕೆಲವು ಮೂಲಭೂತ ಸಮಸ್ಯೆಗಳನ್ನು ನಿವಾರಿಸುವವರೆಗೂ ಬಾಕಿ ಸಮಸ್ಯೆಗಳು ಸಮಸ್ಯೆಗಳಾಗಿಯೇ ಇರುತ್ತದೆ ಮತ್ತು ಅಲ್ಲಿಯವರೆಗೂ ಆರೋಗ್ಯಯುತ ಸಮಾಜ ಕಟ್ಟುವುದು ದುಸ್ತರವೇ ಸರಿ. ವೇಶ್ಯೆಯರಲ್ಲಿ ಹೆಚ್ಚು ಕಡಿಮೆ(high level call girls ಬಿಟ್ಟು) ಅವಿದ್ಯಾವಂತರು, ಬಡವರು, ಅಜ್ಞಾನಿಗಳು. ಎಷ್ಟೋ ದೇವದಾಸಿಯರಿಗೆ ಅವರ ವೃತ್ತಿ ತಪ್ಪು ಎಂಬಷ್ಟು ಜ್ಞಾನವೂ ಇಲ್ಲ, ವಂಶಪಾರಂಪರ್ಯ ವೃತ್ತಿ ಎಂದುಕೊಂಡು ನಡೆಸುತ್ತಿದ್ದಾರೆ. ಸಮಸ್ಯೆ ಬಂದಾಗ ಅವಿದ್ಯಾವಂತರಿಂದ ನಮ್ಮಂತಹ ಸುಶಿಕ್ಷಿತರ ನಡವಳಿಕೆ ನಿರೀಕ್ಷಿಸಿದರೆ ಹೇಗೆ ಸಮಸ್ಯೆಗೆ ಪರಿಹಾರ ದೊರಕೀತು?? ಅವರಿಗೆ ಅವರೇನು ಮಾಡುತ್ತಿದ್ದಾರೆ ಎಂಬುದರ ಅರಿವು ಮೂಡಿಸಬೇಕು, ವಿದ್ಯೆ ಕೊಡಬೇಕು. .

ಸಾಗರಿ.. said...

ವಿ.ಅರ್.ಭಟ್ಟ ಅವರೇ,
ನೀವು ಹೇಳಿದಂತೆ ನಮ್ಮ ಘನ ಸರ್ಕಾರ ಹಾಗೂ ಅನೇಕ ಸ್ವಯಮ್ ಸೇವಕ ಸಂಘ ಹಾಗೂ ಅನೇಕ ಖಾಸಗೀ ಸಂಸ್ಥೆಗಳು ಅನಾಥ ಮಕ್ಕಳಿಗೆ, ವೃದ್ಧರಿಗೆ, ಬಾಲ ಕಾರ್ಮಿಕರಿಗೆ, ಅಂಗ ವಿಕಲರಿಗೆ, ಬುದ್ಧಿ ಮಾಂದ್ಯರಿಗೆ, ಬಡವರಿಗೆ, ನಿರುದ್ಯೋಗಿಗಳಿಗೆ, ಅಶಿಕ್ಷಿತರಿಗೆ, ಮಹಿಳೆಯರಿಗೆ, ಭಿಕ್ಷುಕರಿಗೆ ಹಾಗೂ ವೇಶ್ಯೆಯರಿಗೆ ಬಹಳಷ್ಟು ಕಾರ್ಯಕ್ರಮಗಳನ್ನು ರೂಪಿಸಿದೆ. ಅವರ ಏಳ್ಗೆಗಾಗಿ ಶ್ರಮಿಸುತ್ತಿದೆ. ಆದರೂ ನಮ್ಮ ದೇಶದಲ್ಲಿ ಬಡತನ, ಅನಕ್ಷರತೆ, ಬಾಲ ಕಾರ್ಮಿಕರು, ನಿರುದ್ಯೋಗ ಹೀಗೆ ಬಹಳಷ್ಟು ಸಾಮಾಜಿಕ ಪಿಡುಗುಗಳು ಜೀವಂತವಾಗಿಯೇ ಇವೆ ಅಲ್ಲದೆ ಅದ್ರಿಂದ ಸಮಾಜಕ್ಕೆ ಬಹಳಷ್ಟು ಹಾನಿ ಕೂಡ ಸಂಭವಿಸುತ್ತಿದೆ. ಹಾಗೆಂದು ಬೇಕಾದಷ್ಟು ಸಹಾಯ ನೀಡಿದರೂ ಬಡವರಾಗಿದ್ದೀರಿ ಎಂದು ಬಡವರನ್ನು, ಊಟ ಬಟ್ಟೆ ಕೊಟ್ಟು ಪುಕ್ಕಟೆ ವಿದ್ಯೆ ಕೊಟ್ಟರೂ ಇನ್ನೂ ಇರುವ ಅಶಿಕ್ಷಿತರನ್ನು, ವೇಶ್ಯೆಯರಿಗಾಗಿ ಅನೇಕ ಮಹಿಳಾ ರಕ್ಷಣಾ ವೇದಿಕೆ ಇದೆಯಾದರೂ ಇನ್ನೂ ಜ್ವಲಂತ ಸಮಸ್ಯೆಯಾಗಿರುವ ವೇಶ್ಯೆಯರನ್ನು ದೂರುತ್ತಾ ಕುಳಿತರೆ ಸಮಸ್ಯೆಗೆ ಪರಿಹಾರ ದೊರಕೀತೇ?? AIDS ರೋಗಿಗಳನ್ನು(ಅವರು ವೆಶ್ಯೆಯೇ ಆಗಿರಲಿ, ವೇಶ್ಯೆಯರ ಸಂಘದಿಂದಲೇ ರೋಗದಾನ ಪಡೆದ ಮಹಾನ್ ನಾಗರೀಕರೇ ಆಗಿರಲಿ) ಸರ್ಕಾರವೂ ಪ್ರೀತಿಯಿಂದಲೇ ಕಾಣುತ್ತದೆ, ಅದು ಅವರೇ ಮಾಡಿಕೊಂಡ ಹಣೆಬರಹ ಎಂದು ದೂರುತ್ತಾ ಕೂಡುವುದಿಲ್ಲ, ಯಾಕೆಂದರೆ ದೂರುವುದರಿಂದ ಎಂತಹ ಪ್ರಯೋಜನವೂ ಇಲ್ಲ.

ಉದಾಹರಣೆಗೆ ನನಗೇ ಎಂಥದ್ದೋ ತೊಂದರೆ ಅತಿಯಾಗಿ ಬಂತೆಂದ್ರೆ ನನಗೆ ಸಹಾಯಕ್ಕಾಗಿ ಬರುವ ಗಟ್ಟಿ ಜನರಿದ್ದಾರೆ ಅಥವಾ ನನ್ನ ಬಳಿ ಅಡವಿಟ್ಟು ಹಣ ಪಡೆಯಲು ಸ್ವಲ್ಪ ಜಮೀನಿದೆ ಜೊತೆಗೆ ಸ್ವಲ್ಪ ಚಿನ್ನವೂ ಇದೆ. ಬಡವರಿಗೆ ಸಾಲ ಕೊಡಲು bank ಸುಲಭಕ್ಕೆ ಮುಂದೆ ಬರಲ್ಲ, ಬಂದರೂ ಅಡವಿಡಲು guarantee ಇರುವ ವಸ್ತು ಬಡವನಿಗೆಲ್ಲಿ?? ವಿದ್ಯಾವಂತರು ಕಷ್ಟಬಂದರೆ ಅದನ್ನು ಹೇಗೆ ಎದುರಿಸುತ್ತಾರೋ ಅದು ಅವಿದ್ಯಾವಂತರಿಗೆ ಮತ್ತು ಕೆಳ ಮಟ್ಟದವರು ಎಂದು ಗುರುತಿಸಲ್ಪಡುವ ಜನರಿಗೆ ಹಾಗೆ ಎದುರಿಸಲು ಬರಲ್ಲ.., ಬಂದಿದ್ದರೆ ಸಾಲ ಅಂತ ಎಷ್ಟೋ ರೈತರು ಸಾಯ್ತಾ ಇರ್ಲಿಲ್ಲ(ಕೆಲವರು ಯಾವ್ದೇ ಕಾರಣಕ್ಕೆ ಸತ್ತರೂ ಸಾಲಕ್ಕ್ಕೆ ಹೆದರಿ ಎಂದು ಬೊಗಳೆ ಬಿಟ್ಟವರೂ ಇದ್ದಾರಂತೆ) ಅಥವಾ ಸಮಸ್ಯೆಯನ್ನು ಮತ್ತು ಅದರ ಪರಿಹಾರವನ್ನು ನೋಡುವ ದೃಷ್ಟಿಕೋನ ನಮ್ಮಂತೆ ಇರಲ್ಲ. ಇದಕ್ಕೆಲ್ಲ ಕಾರಣ ಅಜ್ಞಾನ.

ನನ್ನ ಮೈಮೇಲೆ ಒಂದು ಗಾಯವಾಗಿ ಕೆಲವು ಔಷಧಗಳಿಗೂ ಕಡಿಮೆ ಆಗದಿದ್ದರೆ ಅದು ಗಾಯದ ತಪ್ಪಲ್ಲ ಬದಲಿಗೆ ನನ್ನ ಉಪಚಾರದಲ್ಲೇ ಏನೋ ಕೊರತೆಯಿದೆ ಮತ್ತು ಸರಿಯಾದ ಚಿಕಿತ್ಸೆಯ ಅಗತ್ಯವಿದೆ ಎಂದಾಯ್ತು. ಅಂತೆಯೇ ಎಷ್ಟೆ ಸಹಾಯ ಈಗಿನ ದಿನಮಾನದಲ್ಲಿ ಲಭ್ಯವಿದ್ದರೂ ವೇಶ್ಯೆಯರಾಗುತ್ತಲೇ ಇದ್ದಾರೆಂದರೆ ಜಾಗೃತಿ ಮೂಡಿಸುವಲ್ಲಿ/ಯೋಜನೆಯಲ್ಲಿ/ ಯೋಜನೆಯ implementation ಲ್ಲಿ/ಯೋಜನೆಯ ಲಾಭ ಪಡೆವಲ್ಲಿ ಅಶಕ್ತರಾಗಿದ್ದೇವೆ ಎಂದಾಯ್ತು.(ನಮ್ಮ ಜನಸಂಖ್ಯೆಗೆ ಹೋಲಿಸಿದರೆ ಯೊಜನೆ ಹಾಗು ಅದಕ್ಕೆ ಮೀಸಲಿಟ್ಟ ಹಣ ಬಹಳ ಕಡಿಮೆಯೇ) ಕೆಲವರಿಗೆ ತಮಗಾಗಿ ಏನೇನು ಯೋಜನೆ ಇವೆ ಎಂದೇ ಗೊತ್ತಿರಲ್ಲ.so ಸಮಸ್ಯೆಗೆ ಮೂಲ ಇದು ಎನ್ನಬಹುದೇನೋ ಅನ್ನಿಸುತ್ತದೆ.

ಮತ್ತೆ ಜನಸಂಖ್ಯೆಯೂ ಈ ರೀತಿ ಏರುತ್ತಲೇ ಇರುವುದು ಕೆಲವು ಮೂಢನಂಬಿಕೆ, ಅಜ್ಞಾನದಿಂದಲೇ ಆಗಿದೆ. ನಮಗೆ ಉತ್ತಮ ಫಲಿತಾಂಶ ಬೆಕಿದ್ದರೆ ಯೋಜನೆ ಸಾವಿರ ಇದೆ ಎಂದು ದೂರುತ್ತಲಿದ್ದರೆ ಸಾಧ್ಯವಿಲ್ಲ, ನಾವು ಮಾಡಬೇಕಾದ್ದ್ದು ಇನ್ನೂ ಬಹಳಷ್ಟಿದೆ ಅಂತ ತಿಳಿಯಬಹುದೇನೋ ಎನ್ನಿಸುತ್ತದೆ.

"ಕಷ್ಟ ಮನುಷ್ಯನಿಗಲ್ಲದೆ ಮರಕ್ಕೆ ಬಂದೀತೆ(micro view), ಪಿಡುಗು ಸಮಾಜಕ್ಕಲ್ಲದೆ ಕಾಡಿಗೆ ಬಂದೀತೆ(macro view)"
ನಾನೂ ನಿಮ್ಮಂತೆ ಭಟ್ಟರೆ, ನಮ್ಮ ಜಾತಿಯಲ್ಲಿ(ಜಾತಿ ಬಗ್ಗೆ ಬರೆದೆನೆಂದು ಜಾತ್ಯಾತೀತ ಮತದವರು ಬೈಯದಿರಿ) ಎಂತಹ ಕಷ್ಟ ಬಂದರೂ ಇಂತಹ ವೃತ್ತಿಗೆ ಇಳಿದದ್ದನ್ನು ನಾನಿನ್ನೂ ಕಂಡಿಲ್ಲ, ಅವರಿಗಿರುವ ಜ್ಞಾನ, ಆ ವೃತ್ತಿ ಏನೆಂದು ಎಲ್ಲವರಿಗೂ ಗೊತ್ತಿರುವುದರಿಂದಲೇ ಅಲ್ಲವೇ? ಆದರೆ ನಮ್ಮ ಜಾತಿಯವ್ರೇ ಬುದ್ಧಿವಂತರು ಹಲವರು ವೇಶ್ಯೆಯರ ಬಳಿ ಹೋಗುತ್ತಾರೆಂದು ಬಹಳಷ್ಟು ಮಂದಿಗೆ ಗೊತ್ತಿದ್ದಿದ್ದೇ! ಬುದ್ಧಿವಂತ ಬ್ರಾಹ್ಮಣರೇ ಹೀಗೆಂದಾದ್ಮೇಲೆ ಕೆಳವರ್ಗದವರು ಮಾಡುವುದು ತಪ್ಪು ಎನ್ನುವ ನೈತಿಕ ಅಧಿಕಾರ ಒಮ್ಮೊಮ್ಮೆ ನಮಗೆ ಇಲ್ಲವೇನೋ ಎಂದೂ ಅನ್ನಿಸಿದ್ದಿದೆ.

ನಮ್ಮಿಬ್ಬರ ಅಷ್ಟೇ ಅಲ್ಲ ನಮ್ಮೆಲ್ಲರ ಕಳಕಳಿಯೂ ಒಂದೇ ವೇಶ್ಯಾವೃತ್ತಿ ನಿವಾರಣೆ ಆಗಬೇಕೆಂದು. ನಾವ್ಯಾರೂ ವೇಶ್ಯೆಯರಾಗಿ ಎಂದು ಯಾರನ್ನೂ ಪ್ರೋತ್ಸಾಹಿಸುತ್ತಿಲ್ಲ, ವೇಶ್ಯೆಯಾದವರಿಗೆ ಕೊಂಚ ಪ್ರೀತಿಯ ಮಾತು, ಸಾಂತ್ವನ, ಅವರ ನೋವಿಗೆ ಹೆಗಲಾಗಲು ಇದೊಂದು ಪ್ರಯತ್ನವಷ್ಟೇ!!

ಸಾಗರಿ.. said...

NRK ಅವರಿಗೆ
ನನ್ನ ಬ್ಲಾಗಿಗೆ ಸ್ವಾಗತ. ಕವನ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ.

Unknown said...

ಸಾಗರಿ ಯವರೆ,ನಿಮ್ಮ ಕವನ "ಈ ಕವನ ರಾತ್ರಿ ರಾಣಿಯರಿಗಾಗಿ" ಓದಿದೆ,ಇಂಡಿಯಾದಲ್ಲಿ ಮೊದಲನೇ ಬಾರಿಗೆ ಲೈಂಗಿಕ ಕಾರ್ಯಕರ್ತೆಯೊಬ್ಬಳು ತನ್ನ ಆತ್ಮಕಥೆಯನ್ನು ತಾನೇ ಬರೆದುಕೊಂಡ ಮೊದಲ ಆತ್ಮಕಥನ ನೆನಪಾಯಿತು,ಇದು ನಳಿನಿ ಜಮೀಲಾ ಎನ್ನುವ ಲೈಂಗಿಕ ಕಾರ್ಯಕರ್ತೆ ಬರೆದದ್ದು,ಅಲ್ಲ,ಬರೆದುಕೊಂಡದ್ದು,ಅದರ ಕನ್ನಡಾನುವಾದ ಲೈಂಗಿಕ ಕಾರ್ಯಕರ್ತೆಯೊಬ್ಬಳ ಆತ್ಮಕಥನ,ಇದರಲ್ಲಿ ಒಂದು ಪ್ರಶ್ನೆ ಬರ್ತದೆ,ಅಂಗಡಿಯಲ್ಲಿ ಸಾಮಾನು ಮಾರಾಟಕ್ಕಿದೆ ಅಂದ್ರೆ ಗ್ರಾಹಕರು ಇರ್ತಾರೆ,ತಕ್ಕ ಮೌಲ್ಯ ಇರ್ತದೆ,ಅದಕ್ಕೆ ಗೌರವಪೂರ್ವಕ ಮರ್ಯಾದೆ ಇರ್ತದೆ,ಅದೇ ಒಬ್ಬ ಹೆಣ್ನು ತನ್ನ ದೇಹವನ್ನ ಮಾರಾಟಕ್ಕಿಟ್ಟಾಗ ಹೆಣ್ಣನ್ನು ಮಾತ್ರವೇ ದೂಷಿಸಿ,ಗಂಡನ್ನು ಅದೇ ಗೌರವದಿಂದ ನಡೆಸಿಕೊಳ್ಳಲಾಗ್ತದೆ,ಇದು ಎಷ್ಟರ ಮಟ್ಟಿಗೆ ಸರಿ? ಬಹಳ ಆಳವಾದ ಪ್ರಶ್ನೆ ಇದು,,,ಇರಲಿ ಬಿಡಿ ,, ಒಂದು ವಾಸ್ತವ ಕಟು ಸತ್ಯವನ್ನು ಕವನದ ಮೂಲಕ ಬಿಡಿಸಿಟ್ಟಿದ್ದೀರಿ,,ಆದರೆ ಈ ಅನಾನಿಮಸ್ (ಅನಾಮಿಕ) ವ್ಯಕ್ತಿಗೆ ನೀವು ಅಷ್ಟೊಂದು ದೀರ್ಘ ವಿವರಣೆ ನೀಡ ಬೇಕಿರಲಿಲ್ಲ ಅನ್ಸುತ್ತೆ,ಪೂರ್ವಾಗ್ರಹ ಪೀಡಿತ ವ್ಯಕ್ತಿಗಳಿಗೆ ಇಂತಹ ದೀರ್ಘ ಉತ್ತರಗಳು ಚಾಟಿ ಏಟನ್ನು ನೀಡುವಂತಿದ್ದರೂ, ಎಲ್ಲೋ ಒಂದು ಕಡೆ ಅವರಿಗೆ ಪ್ರಾಮುಖ್ಯತೆ ಕೊಡುತ್ತಿರುವಂತೆಯೂ ಭಾಸವಾಗ್ತದೆ,ಹಾಗಾಗಿ ಇಂದ ಪ್ರತಿಕ್ರಿಯೆಗಳನ್ನು ನಿರ್ಲಕ್ಷಿಸುವುದು ಒಳಿತೇನೋ......
---ಮ.ನಾ.ಕೃಷ್ಣಮೂರ್ತಿ
manaakrish@gmail.com

Ittigecement said...

ಸಾಗರಿ...

ಓದಿಯಾದ ಮೇಲೆ ಸುಮ್ಮನೆ ಕುಳಿತು ಬಿಟ್ಟೆ...
ಒಂಥರಾ ಸಂಕಟವಾಯಿತು...

ಬೇಡದಿದ್ದರೂ...
ಬೇಡವೆಂದರೂ...
ಅಂಥಹದ್ದೊಂದು ಬದುಕು ನಮ್ಮ ಸಮಾಜದಲ್ಲಿದೆ...

ಕಾಮುಕ ಮನಗಳಿರುವಾಗ ವೇಶ್ಯಾ ಸಮಸ್ಯೆ ಇದ್ದೇ ಇರುತ್ತದೆ...

ಬಹಳ ಸಮರ್ಥವಾಗಿ
ಕಡಿಮೆ ಶಬ್ಧಗಳಿಂದ..
ನಮ್ಮ ಮನದಾಳದಲ್ಲಿ ಉಳಿಯುವಂತೆ ಬರೆದಿದ್ದೀರಿ...

ನೀವು ಬರೆದ ಅತ್ಯುತ್ತಮಗಳಲ್ಲಿ ಇದೂ ಒಂದು....

ಅಭಿನಂದನೆಗಳು...

ಶ್ರೀನಿಧಿ.ಡಿ.ಎಸ್ said...

tumba chennagide. bahala dinagaLa nantara, olle kavana odide.

ಸಿಂಧು sindhu said...

ಪ್ರಿಯ ಸಾಗರಿ,

ಅಪ್ರಿಯ ವಾಸ್ತವವನ್ನ ಮನಕಲಕುವ ರೀತಿಯಲ್ಲಿ ತೆರೆದಿಟ್ಟಿದ್ದೀರಿ.
ಈ ದಂಧೆಯ ಉಸೂಲು ಮತ್ತು ಉರುಳಿ, ದಂಧೆಗಿಳಿದವರ ವಸ್ತುಸ್ಥಿತಿ ಮತ್ತು ಹಂಬಲ, ಎಷ್ಟು ತಡಕಾಡಿದರೂ ಸಿಗದೆ ಉಳಿವ ಆಸರೆಗಳ ಅಭಿವ್ಯಕ್ತಿ ತುಂಬ ಭಿನ್ನವಾಗಿ ಖಡಕ್ಕಾಗಿ ಇದೆ.

ನಿಮ್ಮ ಅಕ್ಷರದ ಅರ್ಪಣೆಯಲ್ಲಿ ನನ್ನ ಓದಿನ ಕಾಣಿಕೆಯೂ ಸೇರಲಿ. ಅವರ ಯಾತನೆಗಳನ್ನು ಕಡಿಮೆಗೊಳಿಸುವ ಇನ್ನೂ ನೂರು ಹಾದಿಯು ತೆರೆದುಕೊಳ್ಲಲಿ ಅಂತ ಆಶಿಸುತ್ತೇನೆ.

ನಿಮ್ಮ ಯಾವುದೇ ಸಾಮಾಜಿಕ ಕಾರ್ಯಕ್ರಮವಿದ್ದರೆ ದಯವಿಟ್ಟು ತಿಳಿಸಿ. (sindhusagar@gmail.com) ನನ್ನ ಮಿತಿಯಲ್ಲಿ ಮತ್ತು ಮಿತಿಯನ್ನು ಮೀರುವಂತಹದ್ದು ಏನನ್ನಾದರೂ ಸಪೋರ್ಟ್ ಮಾಡಲಾಗುವುದಾ ಅಂತ.

ಇನ್ನು ನೆಗಟಿವ್ ಪ್ರತಿಕ್ರಿಯೆಗಳ ಬಗ್ಗೆ ಮ.ನಾ.ಕೃಷ್ಣಮೂರ್ತಿಯವರ ಸಲಹೆಯೇ ಸೂಕ್ತ.

-ಪ್ರೀತಿಯಿಂದ
ಸಿಂಧು

Anonymous said...

ಸಾಗರಿ,

ನಿಮ್ಮ ಉತ್ತರಕ್ಕೆ ಧನ್ಯವಾದಗಳು. ಮೊದಲನೆಯದಾಗಿ ನಾನು ಸೈನಿಕರ ಬಗ್ಗೆ ಉದಾಹರಿಸಿದ ಮಾತ್ರಕ್ಕೆ ನೀವು ವೇಶ್ಯೆ ಮತ್ತು ಸೈನಿಕರ ಹೋಲಿಕೆಗೆ ಇಳಿದುಬಿಟ್ಟಿರಿ. ಇದು ನಾಚಿಕೆಗೇಡಿನ ವಿಷಯ. ಯಾರೋ ಅತ್ಯಾಚಾರ ಮಾಡಿದ್ದು universal ಅಲ್ಲ. ನಾನು ಮಡಿದ ಯೋಧರ ಉದಾಹರಿಸಿದ್ದು ಸಮಾಜದಲ್ಲಿ ಯಾವ ವಿಷಯವನ್ನು ಹೈಲೈಟ್ ಮಾಡಬೇಕಾದ ಅಗತ್ಯವಿದೆ ಎಂಬುದರ ಬಗ್ಗೆ ಹೊರತು ಅಲ್ಲಿ ಹೋಲಿಕೆ ಸಲ್ಲ.

ಇನ್ನು ಆ ಬಾಲಿವುಡ್ ಉದಾಹರಣೆಗಳನ್ನೆಲ್ಲಾ ಅದನ್ನು ಆರಾಧಿಸುವವರಿಗೆ ಕೊಡಿ. ನಮಗಲ್ಲ. ಸಚ್ ಕಾ ಸಾಮ್ನಾ ಎಂಬ ಕಾರ್ಯಕ್ರಮ ಭಾರತ ಸರ್ಕಾರದಿಂದ ನೆಡೆದ ಅಧಿಕೃತ ಕಾರ್ಯಕ್ರಮವೆಂಬಂತೆ ಅದನ್ನು ದೇಶದ ಜನರೆಲ್ಲಾ ನೋಡಿ ತೀರ್ಮಾನ ಕೊಡಬೇಕೆಂದು ನೀವು ಹೇಳುತ್ತಿರುವುದು ನೋಡಿದರೆ ನಿಮ್ಮ ಅರಿವಿನ ಮಿತಿಯ ಬಗ್ಗೆ ವ್ಯಥೆಯಾಗುತ್ತದೆ. ಅಂತಹ ಥರ್ಡ್ ರೇಟೆಡ್ ಪ್ರಿ ಪ್ಲಾನ್ಡ್ ಕಾರ್ಯಕ್ರಮಗಳನ್ನು ಬದಿಗಿಡಿ. ಅವರ್ಯಾರೋ extramarital affairs ಇಟ್ಟುಕೊಂಡಿದ್ದ ಮಾತ್ರಕ್ಕೆ ಅದು ವೇಶ್ಯಾಗಾರಿಕೆಗೆ ಸಮರ್ಥನೆ ಹೇಗಾದೀತು? ಬರೀ ಮೇಲ್ದರ್ಜೆಯವರ ಭಾವನೆಗಳು ಮಾತ್ರ ಕಾಣಬೇಕಾ ಎಂದು ಕೇಳುವ ನೀವು, ಅದೇ socalled hifi society ಜನರ ಉದಾಹರಣೆ ಯಾಕೆ ಕೊಡುತ್ತೀರಿ? ವೇಶ್ಯೆಯೆಂದರೆ ಅಥವಾ ಹೆಣ್ಣು ಎಂದರೆ ವಸ್ತುವಲ್ಲ. ಅದಕ್ಕೂ ಚೈತನ್ಯವಿದೆ ಬುದ್ದಿಯಿದೆ. ಯಾರದ್ದೋ ಪಿಂಡ ಇರಬಹುದು ಎನ್ನುವುದಕ್ಕೆ ಅದು onesided activity ಅಲ್ಲ. ಅದನ್ನು ನಿಯಂತ್ರಿಸಿಕೊಳ್ಳುವುದು ಅವರ ಕೈಯಲ್ಲೇ ಇರುತ್ತದೆ.

ವೇಶ್ಯೆಯರಿರದಿದ್ದರೆ ಸಮಾಜದಲ್ಲಿ ನಮ್ಮ ಹೆಣ್ಣುಮಕ್ಕಳು ಬದುಕಲಾಗುತ್ತಿರಲಿಲ್ಲ ಎನ್ನುವುದು ೨೧ ನೇ ಶತಮಾನದಲ್ಲಿ ಆಡುವ ಮಾತಾ? ಈ ಮಾತು ಹೇಳುವುವವರನ್ನು ಹೆಂಗಸರಾಗಿದ್ದರೆ ವ್ಯಭಿಚಾರೀ ಬುದ್ದಿಯವರು, ಗಂಡಸರಾಗಿದ್ದರೆ ನಾಮರ್ದರು ಅನ್ನಬಹುದು. ವೇಶ್ಯೆ ಗೌರವದಿಂದ ಬಾಳುವಂತಾಗಲೀ ಏನು ಅರ್ಥ! ಆ ಕೆಲಸವೇ ಗೌರವದಲ್ಲದಿರುವಾಗ ಬಾಳುವುದೆಂತು? ಅದು ಗೌರವದ್ದೇ ಆಗಿದ್ದರೆ ನೀವು ಇಲ್ಲಿ ಗೌರವದ ಕೆಲಸಕ್ಕೆ, ಅದರ ಪ್ರತಿಫಲಕ್ಕೆ ಕಣ್ಣೀರು ಹರಿಸಿರುವುದ್ಯಾಕೆ? ಇಷ್ಟೆಲ್ಲಾ ಕರುಣೆ ಹರಿಸುವ ನೀವು ಅವರು ಅಗತ್ಯ ಎನ್ನುವ ನೀವು ನಿಮ್ಮ ಗಂಡನೋ, ತಮ್ಮನೋ, ತಂದೆಯೋ, ಮಗನೋ ವೇಶ್ಯಯ ಬಳಿ ’ಹೋಗಿಬಂದರೆ ’ ಓಹ್ ಸಮಾಜದ ಆರೋಗ್ಯ ಕಾಪಾಡುತ್ತಿದ್ದರು ಎಂದು ಸುಮ್ಮನಿರುತ್ತೀರಾ?(sorry for this , donot take it personally).

ಹಸಿದ ಮಕ್ಕಳು ಸುತ್ತಲಿರುವಾಗ ತಾಯಿಗೆ ವೇಶ್ಯೆಯಾಗುವುದೊಂದೇ ಹೊಟ್ಟೆ ತುಂಬಿಸುವ ದಾರಿಯಲ್ಲ. ಬಡತನ ಇರುವವರಿಗೆ ವೇಶ್ಯಾಗಾರಿಕೆಯೇ ಒಂದು ದಾರಿಯಲ್ಲ. ಹಸಿದ ಹೊಟ್ಟೆಗಳಿಗೆ ವೇಶ್ಯೆಗಾರಿಕೆಯೇ ದಾರಿಯಾಗಿದ್ದರೆ ಇವತ್ತು ಅರ್ಧ ಸಮಾಜ ವೇಶ್ಯೆಯರಿಂದ ತುಂಬಿರುತ್ತಿತ್ತು. ಒಂದೇ ಒಂದು ಕ್ಷಣ ವೇಶ್ಯೆಯಾಗಿ ನಿಮ್ಮನ್ನು ನೀವೇ ಕಲ್ಪಿಸಿಕೊಳ್ಳಿ , ಅದು ಎಂತಹ ಹೊಲಸು, ಎಂತಹ ನೋವು ಎಂದು ತಿಳಿಯುತ್ತದೆ. ನಿಮ್ಮಂತವರು ಅಲ್ಲಿ ಕರುಣೆ ಹರಿಸಿ ಅದಕ್ಕೆ ಸಮಾಜದಲ್ಲಿ ಗೌರವಯುತ ಸ್ಥಾನ ಕೊಡಿಸಲು ಹೊರಟು ಅದಕ್ಕೆ indirectly support ಮಾಡುತ್ತಿದ್ದೀರ ಎನಿಸುತ್ತದೆ.

ನೀವು ಇಲ್ಲಿ ಇಂತಹ ಬಗೆಯ ವೇಶ್ಯೆಯರಿಗೆ ಮಾತ್ರ ಈ ಕವನ ಮೀಸಲು ಅಂತ ಎಲ್ಲೂ ಬರೆದದ್ದು ನಾಕಾಣೆ. ಆದರೂ ಕೂಡ ಕಾಲೇಜು ಹುಡುಗಿಯರು, escort service ಮುಂತಾದ jeans ಹಾಸುವ ವೇಶ್ಯೆಯರ ಬಗ್ಗೆಯರ ಬಗ್ಗೆ ತಾವು ಕರುಣಿ ಹರಿಸಿಲ್ಲವೆಂದೂ ಅಥವಾ ಅವರನ್ನು ಬೆಂಬಲಿಸುತ್ತಿಲ್ಲವೆಂದು ತಿಳಿದು ಸಮಾಧಾನ ಪಟ್ಟುಕೊಂಡಿದ್ದೇನೆ. ಆದರೆ ಅವರು ಅದೆ ಕೆಲಸದಲ್ಲಿ ಬೆಳೆದು ಬಂದ ಮೇಲೆ ಕೊನೆಗೆ ನೀವು ಅವರ ಮೇಲೂ ಇದೇ ರೀತಿ ಕರುಣೆ ಹರಿಸುವ ಸಾಧ್ಯತೆ ಇರಬಹುದಲ್ಲವೇ!

ಚರ್ಚೆ ನಿಲ್ಲಿಸೋಣ. I know u are doing it for a good cause and i am also aware of this prostitution problems. But, ಅದರ ಭರದಲ್ಲಿ ’ಎಲ್ಲವನ್ನೂ ’ ಬೆಂಬಲಿಸಬೇಡಿ, ಸಮರ್ಥಿಸಬೇಡಿ. ನಿಜವಾದ ಕಾಳಜಿ ಇದ್ದರೆ ಅವರನ್ನು ಆ ಕೆಲಸದಿಂದ ಹೊರತರಲು ಪ್ರಯತ್ನ ಪಡೋಣ ಹೊರತು , ಅವರು ಸಮಾಜದ ಆರೋಗ್ಯ ಕಾಪಾಡುವವರು, ಅವರನ್ನು ಗೌರವಿಸೋಣ ಎನ್ನುವುದಲ್ಲ. ಸುತ್ತಲೂ ಅವಕಾಶಗಳಿರುವಾಗ ಸ್ವ ಇಚ್ಛೆಯಿಂದ ವೇಶ್ಯಾಗಾರಿಕೆಗೆ ಇಳಿದೆ ಎನ್ನುವುದು ಎಷ್ಟೆ ಪ್ರಬಲ ಕಾರಣಗಳಿರಲಿ ನನಗೆ ಒಪ್ಪಿಗೆಯಲ್ಲ.

ನಾವೂ ಅಪೇಕ್ಷೆ ಪಡುತ್ತಿರುವುದು ಇಷ್ಟೆ. ಅಕಸ್ಮಾತಾಗೋ, ಅನಿವಾರ್ಯಕ್ಕೋ, ಬಲವಂತದಿಂದಲೋ, ವಂಚನೆಯಿಂದಲೋ ಆದ ವೇಶ್ಯೆ ವೇಶ್ಯೆಯಾಗಿಯೇ ಉಳಿಯದಿರಲಿ. ಅದು ಅಂತಹ ಹೊಲಸು ಕೆಲಸ ಎಂದು ಅವರ ಬುದ್ದಿಗೂ ತಿಳಿದೇ ತಿಳಿಯುತ್ತದೆ ಅಂದ ಮೇಲೆ ಅದರಿಂದ ಹೊರಬಂದು ಇರುವ ಸಾವಿರ ಅವಕಾಶಗಳಲ್ಲಿ ತೊಡಗಿಕೊಂಡು ದುಡಿದು ಬದುಕಲಿ. ಒಬ್ಬ ವೇಶ್ಯೆಯ ಮಗಳು ವೇಶ್ಯೆಯಾಗದಂತೆ ನಾನು ಮದುವೆಯಾಗಿಯೇ ತಡೆಯಬೇಕಾ? ಅದರ ಬದಲು ಅವರು ಬೇರೆ ಕೆಲಸದಲ್ಲಿ ತೊಡಗಿ ತಡೆಯಬಹುದಲ್ಲವಾ? ಅಥವಾ ನಿಮ್ಮಂತಹ ಸ್ವಯಂಸೇವಕರು ಅವರಿಗೆ ಬೇರೆ ದಾರಿಗಳನ್ನು ತೋರಿಸಿ ತಡೆಯಬಹುದಲ್ಲವಾ?(ಅದೇ ಕೆಲಸ ನೀವು ಮಾಡುತ್ತಿದ್ದರೆ ನಿಮಗೆ hatsoff).

Anonymous said...

"ಗಂಡ ಹೆಂಡತಿ ಮಕ್ಕಳು...ಎಲ್ಲರೊಂದಿಗೆ ಸಾಮಾನ್ಯರಂತೆ ಬದುಕುವುದು, ಗಿರಾಕಿ ಬಂದಾಗ ಮಾತ್ರ ಶುದ್ಧ ವೇಶ್ಯಯರಾಗುವರು. ಅತ್ಯಾಶ್ಚರ್ಯವೆಂದರೆ ಅವರಲ್ಲಿನ ಎಷ್ಟೋ ಮಹಿಳೆಯರ ಮನೆಯವರಿಗೆ ಅವರು ವೇಶ್ಯೆ ಎಂಬುದೇ ಗೊತ್ತಿಲ್ಲ..,"

what is the need of this? How come poverty or something comes here? She could have earned in respected ways, right? Can you please explain.

[Please don't get angry or get hurt by my comments, I am trying to understand all these, may be you call it as realisation about the society!!]

Guru Moger said...

ಸಾಗರಿ, ಕವನ ತುಂಬಾ ಚೆನ್ನಾಗಿದೆ. ಕೊನೆಯ ಸಾಲುಗಳನ್ನು ಓದುವಾಗ ಸ್ವಲ್ಪ ಭಯ ಆಯ್ತು, ಎಂಥಹ ವಿಪರ್ಯಾಸ ಅಲ್ವಾ.
---------------------------------
ಪ್ರಿಯ ಅನಾಮಧೇಯರವರೇ,

ಹುಟ್ಟುವಾಗಲೇ ಯಾರೂ ತಾನು ಇಂಜಿನಿಯರ್ ಆಗಬೇಕು, ಡಾಕ್ಟರ್‌ ಆಗಬೇಕು ಅಥವಾ "ವೇಶ್ಯೆ" ಆಗಬೇಕು ಅಂದುಕೊಳ್ಳುವದಿಲ್ಲ. ಪರಿಸ್ತಿತಿ ಅವರನ್ನ ಅಯಾ ದಿಕ್ಕಿನೆಡೆಗೆ ಎಳೆದೊಯ್ಯತ್ತೆ. ಯಾವುದೇ ಗಂಡಸಾಗಲಿ ತನ್ನ ಎದುರಿಗೆ ಬರೋ ಹೆಣ್ಣಿನ ಜೊತೆ ತನಗೇ ಯಾವುದೇ ರಕ್ತ ಸಂಬಂಧ ಇಲ್ಲಾ ಅಂತಾ ಗೊತ್ತಾದ್ರೆ, ಆತ ಆಕೆಯನ್ನ ತನ್ನ ತಂಗಿಯಾಗಿಯೋ, ಅಕ್ಕನಾಗಿಯೋ ಅಥವಾ ಅಮ್ಮನಾಗಿಯೋ ನೋಡೋಲ್ಲ, ಆತ ನೋಡೋ ದೃಷ್ಟಿನೇ ಬೇರ‍ೆ. ಇಂತಹ ಸಮಾಜದಲ್ಲಿ ಒಂದು ಹೆಣ್ಣು ಧೈರ್ಯವಾಗಿ ಬದುಕೊಕೆ ಸಾಧ್ಯಾನಾ? ಹೆಣ್ಣಿಗೆ ಅಣ್ಣನ ಜೊತೆ ಬದುಕೋಕೆ ಭಯ, ಅಪ್ಪನ ಒತೆ ಬದುಕೋಕೆ ಭಯ ಯಾಕೆಂದ್ರೆ ಇತ್ತೀಚೆಗೆ ಆಕೆ ತಂದೆಯಿಂದ, ಅಣ್ಣನಿಂದಲೇ ಹೆಚ್ಚು ಅತ್ಯಾಚಾರಕ್ಕೆ ಒಳಗಾಗ್ತಾ ಇದಾಳೆ. ಸರಿ ತಾಯ್ತನ ಅಂದ್ರೆ ಏನು ಅಂತ ಗೊತ್ತಿಲ್ದೆನೆ ಇರೊ ವಯಸ್ಸಿನಲ್ಲಿ ಯಾರದ್ದೋ ಕಾಮದಾಸೆಗೆ ಮಗುವಿನ ತಾಯಿಯಾಗಿ, free ಸಿಕ್ರೆ ತನಗೂ ಒಂದು ತನ್ನ ಅಪ್ಪನಿಗೂ ಒಂದು ಇರ್ಲಿ ಅನ್ನೊ ಜನರ ಮಧ್ಯೆ ಈ ಸಮಾಜದಲ್ಲಿ ಮರ್ಯಾದೆಯಿಂದ ಬದುಕೋದು ಆಕೆಗೆ ಸಾಧ್ಯಾನಾ? ಇಂತ ಇತಿಹಾಸ ಇರೋ ಹೆಣ್ಣು ಯಾವುದೇ ಕೆಲಸಕ್ಕೆ ಹೋದ್ರೂ ಜನ ಕಾಮದಾಸೆಯಿಂದಾನೆ ನೊಡ್ತಾರೆ ಅಂದಮೆಲೆ ಮರ್ಯಾದಸ್ತನ ಮನೆಯಲ್ಲಿ ಆತನಿಂದ ಅತ್ಯಾಚಾರಕ್ಕೊಳಗಾಗ್ತ ಬದುಕೋದಕ್ಕೂ ವೇಶ್ಯೆಯಾಗಿ ಬದುಕೋದಕ್ಕೂ ಇರೊ ವ್ಯತ್ಯಾಸ ಏನು ಹೇಳಿ?

ಸಾಗರಿಯವರು ವೇಶ್ಯಾವಾಟಿಕೆಯನ್ನ ಸಮರ್ಥನೆ ಮಾಡ್ಕೋತಾ ಇಲ್ಲಾ ಬದಲಾಗಿ ಯಾರಿಂದಲೋ ಆದ ನೋವಿಗೆ, ಅನ್ಯಾಯಕ್ಕೆ, ಅವರ ಕಂಬನಿಗೆ ಒಂದು ಸ್ಪಂದನವಸ್ಟೆ.

ನನಗೆ ದೃಷ್ಟಿ ಇದೆ ನಾನು ಜಗತ್ತನ್ನ ನೋಡಬಲ್ಲೆ, ನನಗೆ ಕಾಲುಗಳಿವೆ ನಾನು ಪ್ರಪಂಚವನ್ನ ಸುತ್ತಬಲ್ಲೆ ಆದರೆ ದೃಷ್ಟಿ ಹೀನ, ಅಂಗವಿಕಲ ಹೇಗೆ ಜಗತ್ತನ್ನ ನೋಡಬಲ್ಲ, ಸುತ್ತಬಲ್ಲ? ಎಲ್ಲವೂ ಇರೋ ನಮಗೆ ಇಲ್ಲದೇ ಇರೋ ವ್ಯಕ್ತಿಗಳ ಸಮಸ್ಯೆ ಅಸ್ಟು ಸುಭದಲ್ಲಿ ಅರ್ಥ ಆಗಲ್ಲ. ಹಾಗಂದ ಮಾತ್ರಕ್ಕೆ ಯಾರೂ ತನ್ನ ಒಂದು ಕಣ್ನನ್ನ ಕಿತ್ತು ದೃಷ್ಟಿಹೀನನಿಗೆ ದಾನ ಮಾಡೋ ಉದಾರತೆಯನ್ನ ತೋರಿಸಲ್ಲ ಬದಲಾಗಿ ದೂರದಿಂದಲೇ ಆತನ್ನ "ಕುರುಡ" ಅಂತ ಕರಿತಾರೆ. ಹಾಗೆನೇ ವೇಶ್ಯೆಯರೂ ಕೂಡ, ಯಾರೂ ಆಕೆಯನ್ನ ತನ್ನ ಒಬ್ಬ ಬಂಧುವನ್ನಾಗಿ ನೋಡಲ್ಲ ಹಾಗಿರುವಾಗ ಆಕೆ ಹೇಗೆ ಸಮಾಜದಲ್ಲಿ ಗೌರವದಿಂದ ಬದುಕೋಕೆ ಸಾದ್ಯ ಹೇಳಿ?

ಸಾಗರಿ.. said...

ಅನಾಮಿಕರೇ,
ನಾನು ಸೈನಿಕರನ್ನು ಮತ್ತು ವೇಶ್ಯೆಯರನ್ನು ಹೋಲಿಸಿ ಹೇಳಿಲ್ಲ, ಅಥವಾ ಸೈನಿಕರನ್ನು ದೂರಿಲ್ಲ, ಎಂತಹ ದೊಡ್ಡ ಮನುಷ್ಯನೇ ಇರಲಿ ಅವನಲ್ಲೂ ಕಾಮ ಮನೆ ಮಾಡಿರುತ್ತೆ. ಅದನ್ನು ಬೇಕಾಬಿಟ್ಟಿ ಹೊರಹಾಕುವುದರಿಂದ ಎಷ್ಟೋ ಮುಗ್ಧೆಯರ ಬಾಳು ಹಾಳಾಗತ್ತೆ ಅಂತ. ನೀವ್ಯಾಕೆ ಸರಿಯಾಗಿ ಅದನ್ನ ಓದ್ಕೋಬಾರ್ದು?? ಅಲ್ದೆ ಭಾರತ ಸರ್ಕಾರ ನಡೆಸುತ್ತಿರುವ ಕಾರ್ಯಕ್ರಮ, ವಾರ್ತೆಗಳಷ್ಟೇ ಸತ್ಯವೇ?? ಅಲ್ದೆನೇ ನಾನು ಸಿನೇಮಾ ನಟರ ಉದಾಹರಣೆಗಳನ್ನು ಕೊಟ್ಟಿದ್ದು ವೇಶ್ಯಾವೃತ್ತಿಗೆ ಸಮರ್ಥನೆ ಅಂತ ನೀವು ತಿಳಿದಿದ್ದು ದೇವರಿಗೆ ಪ್ರಿಯ.
oneside activity ಅಲ್ಲ, ಆದರೆ ವೇಶ್ಯೆಯೇನೋ ಎಲ್ಲಾ ಬಿಟ್ಟವಳು, ನಾಲಾಯಕ್ಕು ಹೆಂಗಸು ಬಿಡಿ. ಆದರೆ ಆಕೆ ಬಳಿ ಹೋಗೆ ಬರುವ ಸಂಭಾವಿತ ಎಂಥವನಾಗಿರಬಹುದು? ಅವಳು ವೇಶ್ಯೆ ಅಂತ ತೋರಿಸಿಕೊಂಡಳು,,, ಇವನೂ ಹೆಂಡತಿ ಮಕ್ಕಳಿಗೆ ತಿಳಿಯದಂತೆ ಹೋಗಿ ಚಟ ತೀರಿಸಿಕೊಂಡು ಬಂದ ಅಷ್ಟೇ ವ್ಯತ್ಯಾಸ. ಅಂಥವನ ಪಿಂಡವನ್ನು ಧರ್ಮರಾಯನ ಪಿಂಡ ಎನ್ನಲೇ??
ನಿಮ್ಮ ವ್ಯಭಿಚಾರಿ ಬುದ್ದಿಯ ಹೆಂಗಸು, ನಾಮರ್ದು ಗಂಡಸರ list ಗೆ ಸೇರಿಸುವ ಯೋಚನೆಗೆ ಭಲೇ ಎನ್ನಲೇ ಬೇಕು. ನಾನು ವೇಶ್ಯೆಯರಿರದಿದ್ದರೆ ಹೆಂಗಸರು ಬದುಕಲು ಸಾಧ್ಯವೇ ಇಲ್ಲ ಎಂದಲ್ಲ, ಅವರಿರುವುದರಿಂದ ನಮಗೆ ಸ್ವಲ್ಪಮಟ್ಟಿಗಾದರೂ ರಕ್ಷಣೆಯಿದೆ ಎನ್ನಲೇಬೇಕು, ಚಟ ಬಂದ ಶ್ರಾವಣದ ನಾಯಿಗಳು rape ಮಾಡುವ ಕೆಲಸ ಬಿಟ್ಟು ವೇಶ್ಯೆಯರ ಬಳಿ ಹೋಗುತ್ತಾರೆಂಬುದು ಬರಿಯ ಊಹೆ ಅಥವ ನನ್ನ ವ್ಯಭಿಚಾರಿ ಬುದ್ಧಿ ಹೇಳ್ತಾ ಇಲ್ಲ, ಅಲ್ಲಿ ಹೋಗುವ ಗಂಡಸರ interview ಮಾಡಿದ್ದನ್ನೇ ಹೇಳಿದ್ದು.

ಮತ್ತೆ ನಾನೆಲ್ಲಿಯೂ ವೇಶ್ಯಾವಾಟಿಕೆ support ಮಾಡ್ತಿದ್ದೇನೆ ಎಂದೋ, ನೀವೂ ವೇಶ್ಯೆಯರಾಗಿ ಎಂದೋ/ವೇಶ್ಯೆಯರ ಬಳಿ ಹೋಗಿ ಎಂದೋ/ಅವರ ವೃತ್ತಿಯನ್ನು ಗೌರವಿಸಿ ಎಂದೋ ಎಲ್ಲೂ ಹೇಳಿಲ್ಲವಲ್ಲ. i am not supporting prostitution. ನೊಂದವರಿಗೆ ಒಂದು ಸಾಂತ್ವನವಿದು ಅಷ್ಟೇ, ಅವರನ್ನು ಅಂತಹ ಸಮಾಜದಿಂದ ಹೊರಬರಲು ಪ್ರೋತ್ಸಾಹವಿದು, ವೇಶ್ಯೆಯರೇ ಆಗಿದ್ದರೂ ಅವರು ಅಂತಹ ದಾರಿ ಬಿಟ್ಟು ಬಂದ್ರೆ ಅವರನ್ನು ಪ್ರೀತಿಯಿಂದ ಕಾಣುತ್ತೇವೆ ಎಂಬ ಭರವಸೆಯ ಸಾಂತ್ವನವಿದು. ನನ್ನ ಪ್ರೀತಿಯ ಸಾಂತ್ವನ ಅವರಿಗಿದೆಯೇ ಹೊರತು ಅವರ ವೃತ್ತಿಗೆ ಗೌರವದ ಕೆಲಸ ಎಂಬ ಸಮ್ಮಾನವಲ್ಲ, ಯಾವುದಕ್ಕೂ ವಿಪರೀತಾರ್ಥ ಕಲ್ಪಿಸದಿದ್ದರೇ ಒಳಿತು..

ನನ್ನ ತಂದೆ/ತಮ್ಮ/ಗಂಡ/ಮಗ ಇವರಷ್ಟೇ ಅಲ್ಲ,, ಅಲ್ಲಿ ಗಿರಾಕಿಯಾಗಿ ಹೋಗುವ ಹುಚ್ಚು ನನ್ನ ವೈರಿಗೂ ಬೇಡ. ನಾನು ಯಾರನ್ನಾದರೂ ಅವರಲ್ಲಿ ಹೋಗಿ ಎಂದು ಪ್ರೋತ್ಸಾಹಿಸಿ ಬರೆದ ಸಾಲಿದ್ದರೆ ಅದನ್ನೂ ತೋರಿಸಿ. ಕಷ್ಟ ಬಂದವರು ಎಷ್ಟೋ ಮಂದಿ(not all) ಕೊಲೆಗಾರರೂ,ಕಳ್ಳಕಾಕರು ಆಗಿ ಬೇರೆಯವರ ಜೀವ ತಿಂದು ತೇಗುತ್ತಿದ್ದಾರೆ,, ವೇಶ್ಯೆಯರು ತಮ್ಮನ್ನೇ ತೆಯ್ದುಕೊಳ್ಳುತ್ತಿದ್ದಾರೆ. ನನ್ನ ಕವನ ಇಂಥವರಿಗೇ ಮೀಸಲು ಎಂದು ಹೇಳಿದ್ದು ಕಂಡಿಲ್ಲವೆಂದಿರಿ, ನನ್ನ ಕವನದ ಕೆಳಗಿನ ಚಿಕ್ಕ ಮಾತ ಕೊನೆಯಲ್ಲಿ ಅದಕ್ಕೆ ಉತ್ತರವಿದೆ, ಶಬ್ದಶಹ ಅರ್ಥಕ್ಕೆ ಹೋದರೂ ಅದೇ ಉತ್ತರ, ನನ್ನ ಕವನ ಕೈ ತುತ್ತು ಕೊಟ್ಟ ಆ ವೇಶ್ಯಾ ಮಣಿಗಳಿಗೆ ಎಂದು, ವಿಶಾಲಾರ್ಥದಲ್ಲಿ ಹೋದರೂ ನನ್ನ ಸಾಂತ್ವನ ಅನಿವಾರ್ಯವಾಗಿ ವೆಶ್ಯೆಯರಾದವರಿಗೆ ಎಂದು(ನಾನೆಲ್ಲೂ ಈ ಕವನ ಶ್ರೀಮಂತ ವೆಶ್ಯೆಯರು i mean callgirlsಗೆ ಅಂತ ಹೇಳೇ ಇಲ್ಲ!!)

ನಾನು ಅವರ ಜಾಗದಲ್ಲಿ ನಿಂತಿದ್ದಕ್ಕೇ ಅವರಿಗಾಗಿ ನೊಂದಿದ್ದು, ಸಾಂತ್ವನಗೈದಿದ್ದು. ಬೇಡಿ ತಿನ್ನುವುದಕ್ಕಿಂತಲೂ ಕೀಳಾದ ಜೀವನ ಅವರದ್ದು ಎಂದು ಬೆಸರವಾಗಿಯೇ ಅವರನ್ನು ಹೊರ ತರಲು ಪ್ರಯತ್ನಿಸಿದ್ದು. ಮೊದಲು ನಮ್ಮದೊಂದು rescue group(ವೆಶ್ಯೆಯರನ್ನು ಅವರ ವೃತ್ತಿಯಿಂದ ಹೊರ ತರುವುದು) ಇತ್ತು. ಅಲ್ಲಿ ನಮ್ಮನ್ನು ಕರೆದೊಯ್ತಾ ಇರಲಿಲ್ಲ. ನಾನು ಅಂಥವಳೊಬ್ಬಳ ಮಗುವಿನ ವಿದ್ಯಾಭ್ಯಾಸದ ಭಾರವನ್ನೂ ಹೊತ್ತಿದ್ದೇನೆ. ಅವರ ಮನೆಯವರಿಗೂ ಗೊತ್ತಿಲ್ಲ ಅವರ ವೃತ್ತಿಯ ಬಗ್ಗೆ ಎಂದರೆ ಅವರು ಹಗಲಲ್ಲಿ ನಮ್ಮ ನಿಮ್ಮಂತೆ ದುಡಿದು ಸಾಮಾನ್ಯರಂತೆ ಬದುಕುತ್ತಾರೆ, ಅವರು ನಮ್ಮ ಮದ್ಯೆಯೇ ಇದ್ದರೂ ನಮ್ಗೆ ಅವರನ್ನು ಗುರುತಿಸಲಾಗದಂತೆ ನಮ್ಮಲ್ಲಿದ್ದಾರೆ ಎಂದು. ಅವರನ್ನು ಹೊಗಳಿಲ್ಲ, ವಾಸ್ತವಿಕತೆಯನ್ನು ತೆರೆದಿಟ್ಟಿದ್ದೇನೆ.

ಸಾಮಾನ್ಯವಾಗಿ ವೇಶ್ಯೆಯರು(normal ವೇಶ್ಯೆಯರು, not hifi) ಕೆಳ ದರ್ಜೆಯ ಕುಟುಂಬದಿಂದ, ಅವಿದ್ಯಾವಂತರ ಕುಟುಂಬದಿಂದ ಬಂದವರು. ಅವರಿಗೆ ವಿದ್ಯೆಯ ಜೊತೆಗೆ ನಮ್ಮ ಸಹಾಯದ ಅಗತ್ಯವಿದೆ(ಅವರಲ್ಲಿ ಹೋಗಿಬರುವ ಸಹಾಯ ಅಂತ ತಿಳಿದರೆ ಅದಕ್ಕೆ ನಾನು ಹೊಣೆ ಅಲ್ಲ). ಅಂಥ ವೃತ್ತಿಯಿಂದ ಹೊರಬಂದರೆ ಗೌರವದ ಬದುಕು ಅವರದ್ದಾಗಬಹುದು ಎಂಬ ಭರವಸೆಯ ಅಗತ್ಯವಿದೆ. ಮೊದಲು ವೇಶ್ಯೆಯಾದವಳು ಕಡೆಗೆ ಬೇರೆ ವೃತ್ತಿ ಸೇರಿದರೂ ಆಕೆಯನ್ನು ಮೊದಲಿನಂತೆ ನೋಡುವ ಜನರು ಆಕೆಯನ್ನು ಆಕೆಯ ದೇಹವನ್ನು ಬಳಸಿಕೊಳ್ಳಲು ಕಾಯ್ತಿರ್ತಾರೆ, ಹೊರಬಂದರೆ ರಕ್ಷಣೆ ನೀಡುತ್ತೇವೆ ಎಂಬ ಭರವಸೆಯ ಅಗತ್ಯವಿದೆ ಅವರಿಗೆ.

ಈ ಕವನ ನೊಂದವರಿಗೆ ಸಂತ್ವನವಷ್ಟೆ, support ಮಾಡುವ ಉದ್ದೇಶ ಇಲ್ಲಿ ಇಲ್ಲ. ಹೀಗೆ ಬರುತ್ತಿರಿ ನನ್ನ ಬ್ಲಾಗಿಗೆ. ಧನ್ಯವಾದಗಳು.

ಸಾಗರಿ.. said...

ಬಾಕಿ ಪ್ರತಿಕ್ರೀಯೆಗಳಿಗೆ ಧನ್ಯವಾದ ತಿಳಿಸಲು ಆದಷ್ಟು ಬೇಗ ಬರುವೆ. ಸಮಯಾಭಾವದಿಂದಾಗಿ ಮತ್ತು ಅನಾಮಿಕರಿಗೆ ಉತ್ತರಿಸಬೇಕೆಂಬ ಉದ್ದೇಶದಿಂದ ಅವರಿಗಿಂತ ಮೊದಲು ಪ್ರತಿಕ್ರೀಯಿಸಿದವರಿಗೂ ಉತ್ತರಿಸಲಾಗಲಿಲ್ಲ, ಕ್ಷಮೆಯಿರಲಿ.

ಮನಸಿನಮನೆಯವನು said...

ರೀ ಸಾಗರಿ..,
ಏನೋ ಹೇಳಲು ಹೊರಟಿದ್ದೀರಿ..
ಹೇಳಿದ್ದೀರಿ..
ವಾದ-ಸಂವಾದಗಳ ನಡುವಲ್ಲಿ ನಿಮ್ಮ ಕವನಕ್ಕೊಂದು ಅರ್ಥ ಸಿಕ್ಕಿದೆ.. ತರ್ಕ ನಡೆದಿದೆ..
ವೈಚಾರಿಕತೆ ಇದೆ..
ಅತ್ಯುತಮಕವನ.

ಸಾಗರಿ.. said...

ಕೃಷ್ಣ ಅವರೇ,
ಕವನ ಓದಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು. ನಾನು ನಳಿನಿಯ ಬಗ್ಗೆ ಮತ್ತು ಪುಸ್ತಕದ ಬಗ್ಗೆ ಚೂರುಪಾರು ಕೆಳಿದ್ದೇನೆ. ಹೋಟೆಲ್ ಮಾಣಿ ಆಕೆಯನ್ನು ಗುಪ್ತವಾಗಿ ಆಕೆ "ಯಾರೆಂದು" ತಿಳಿಯದೆಲೆ ಪ್ರೀತಿಸಿದ್ದನ್ನೂ ಎಲ್ಲಿಯೋ ಓದಿದ್ದೇನೆ. ಆಕೆ ಆತನ ಬಳಿ ಸತ್ಯ ಹೇಳಿ ತನ್ನ ವೃತ್ತಿ ತೊರೆದು ಬಂದು, ಆತನೂ ಒಪ್ಪಿ ಮದುವೆ ಅಗಿದ್ದಿದ್ದರೆ ಎಂದೂ ಕಲ್ಪಿಸಿದ್ದೆ. ಇದು ಕಥೆ ಅಲ್ಲ ಜೀವನ, ಆದರ್ಶ ವಾಸ್ತವಿಕತೆ ಅಗೋದು ಬಹಳ ವಿರಳವೇ.. ಅನಾಮಿಕರಿಗೆ ಉತ್ತರವನ್ನು ಕೊಟ್ಟಿದ್ದು ನಮ್ಮ ಕಳಕಳಿ ಅವರಿಗೆ ಅರ್ಥವಾಗಲಿ ಎಂದು, ನಾನೂ ಒಂದು ಕಾಲದಲ್ಲಿ ರಾಜ್ಯಮಟ್ಟದ ಚರ್ಚಾಪಟುವೇ ಆಗಿದ್ದೆ. ಆದ್ರೆ ಕೊನೆಯಲ್ಲಿ ನನಗೆ ಚರ್ಚಾಸ್ಪರ್ಧೆಯಿಂದ ಬೇಸರವಾಗಿದ್ದೆಂದರೆ ಅಲ್ಲಿ ಬರುವವರೆಲ್ಲ ಸರಿ ತಪ್ಪಿನ ವಿವೇಚನೆ ಮಾಡುವುದಕ್ಕಿಂತ ಎದುರಾಳಿಯ ತಪ್ಪು ಯಾವ್ದು ಎಂದು ಎತ್ತಿ ತೋರಿಸುವುದರಲ್ಲೇ ನಿರತರಾಗಿರುತ್ತಾರೆ. ಒಳ್ಳೆಯದನ್ನು adopt ಮಾಡಿಕೊಳ್ಳುವ ಗುಣ ಯಾರಲ್ಲೂ ಇರೊಲ್ಲ(ನನ್ನಲ್ಲೂ!!)
ಒಟ್ಟಿನಲ್ಲಿ ನಾವು ನೊಂದವರನ್ನು ಸಂತೈಸುವುದು, ಅವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವುದು ನನಗೆ ತಪ್ಪು ಎನ್ನಿಸಲಿಲ್ಲ.

ಸಾಗರಿ.. said...

ಪ್ರಕಾಶಣ್ಣ,
ನಿಜ, ಬೇಡವೆಂದರೂ ಇಂಥದ್ದೊಂದು ಸಮಾಜ ನಮ್ಮ ನಡುವೆ ಇದೆ. ಈ ಪಿಡಿಗನ್ನು ನಿವಾರಿಸುವುದು ಸುಲಭದ ಮಾತೂ ಅಲ್ಲ. ಈ ಪಿಡುಗನ್ನು ನಿವಾರಿಸುವ ಕೆಲಸದ ಜೊತೆಗೆ ಇದಕ್ಕೆ ಕಾರಣವಾದ ಬಡತನ,ಅಜ್ಞಾನ ನಿವಾರಣೆ ಆಗಬೇಕು. ಸಂಪತ್ತಿನ ಅಸಮಾನ ಹಂಚಿಕೆ ಕೂಡ ಕಡಿಮೆ ಆಗಬೆಕು. ನಮ್ಮ ಅಳಿಲು ಸೇವೆ ನಮ್ಮ ಸಮಾಜಕ್ಕೆ ದೊರೆತರೆ ನಮಗದೇ ಖುಷಿ ಅಲ್ಲವೇ. ನನ್ನ ಕವನವನ್ನು ಓದಿ ಪ್ರತಿಕ್ರೀಸಿದ್ದಕ್ಕೆ ಧನ್ಯವಾದಗಳು.
ಶ್ರೀನಿಧಿ ಅವರೆ,
ತಮಗೆ ನನ್ನ ಬ್ಲಾಗಿಗೆ ಸ್ವಾಗತ. ಕವನ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

ಸಾಗರಿ.. said...

ಸಿಂಧು ಅವರೆ,
ನಿಮಗೂ ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಕಳಕಳಿಗೆ ನನ್ನ ಧನ್ಯವಾದಗಳು. ಹಿಂದೆ rescue team ನಲ್ಲಿ ನಾನೂ ಇದ್ದೆ. ಈಗ ನಾನು ಅಪ್ಪಟ housewife ಆಗಿಬಿಟ್ಟಿದ್ದೇನೆ. ಸದ್ಯಕ್ಕೆ ನನಗೆ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಮಾಹಿತಿ ಗೊತ್ತಿಲ್ಲ. ನಾನು ತಿಂಗಳಿಗೆ ೨೦೦/- ನ್ನು ಒಬ್ಬ ಮಗುವಿನ ವಿದ್ಯಾಭಾಸಕ್ಕೆ ಕೊಡುವ ಮಾತಿದೆ. ಮುಂದೇನಾದರೂ ನನಗೆ ನೊಂದ ಮಹಿಳೆಗೆ ಸಹಾಯ ಮಾಡುವ ಅವಕಾಶ ಸಿಕ್ಕಿದರೆ ತಮಗೂ ತಿಳಿಸುವೆ. ಕವನ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

ಸಾಗರಿ.. said...

economics ಅವರೇ,
ಕವನ ಓದಿ ದೀರ್ಘವಾದ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ.

ಸಾಗರಿ.. said...

ಜ್ಞಾನಾರ್ಪಣಮಸ್ತು ಅವರೇ,
ನನ್ನ ಬ್ಲಾಗಿಗೆ ತಮಗೂ ಸ್ವಾಗತ. ನನ್ನ ಕವನ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಕವನ ತಮಗೆ ಹಿಡಿಸಿದಲ್ಲಿ ಮತ್ತೆ ಅದರ ಉದ್ದೇಶ ತಮಗೆ ತಮಗೆ ಅರ್ಥವಾದರೆ ನನಗದೇ ಖುಷಿ.

ಮನಸಿನ ಮಾತು said...

ಧನ್ಯವಾದಗಳು ಸಾಗರಿ..

shridhar said...

ಸಾಗರೀ ಯವರೆ,
ಕವನ ಚೆನ್ನಾಗಿದೆ ಹಾಗೆಯೇ ಕವನದ ಆಶಯ ಕೂಡ.
ವೈಶ್ಯಾವಾಟಿಕೆ ಎಂಬ ಶಬ್ದವೇ ಹೀಗೆ ... ಕೊನೆಯಿಲ್ಲದ ವಾದ ... ಮತ್ತೆ ವಿವಾದ.
ಅದೆಲ್ಲವನ್ನು ಬದಿಗೊತ್ತಿ .. ಒಮ್ಮೆ ನಿಮ್ಮ ಕವನದಲ್ಲಿ ಕಣ್ಣಾಡಿಸಿದರೆ..
ಆ ವೄತ್ತಿಯಲ್ಲಿರುವವರ ಕಂಬನಿ ಕಾಣಿಸುತ್ತದೆ.
ಇಷ್ಟೊಂದು ಚರ್ಚೆಯೆ ಸಾಕು ನಿಮ್ಮ ಕವನದ ಆಶಯವನ್ನು ಎತ್ತಿ ಹಿಡಿಯಲು...
ಹೀಗೆ ಬರೆಯುತ್ತಿರಿ...

ಪ್ರವೀಣ್ ಭಟ್ said...

Hi sagari..

tumba arthavattada katora satya saalugalu.. ottadakke paristitiya gaalakke .. kelvondu sala gottillade .. hottepadige.. sikki veshyeyargiruttare.. yaru bekanta a udyogakke iliyuvudilla.. adeniddaru hifi janara akrama sambhandagalu matra.. nimma hrudaya midida bagege avarige e kavana arpisida bagege.. bahala abhimanavide..

kavanada kone katora satya a veshyeya jeevanadante..

pravi

Shweta said...

ಸಂಕಟ ಆಗೋಯ್ತು ಕಣ್ರೀ ಕವನದ ಕೊನೆಯ ಸಾಲುಗಳನ್ನು ಓದಿ.ಬೇಕು ಬೇಕು ಎಂದು ಅಂತಹುದಕ್ಕೆ ಬಿದ್ದಿರುವವರನ್ನ ನೋಡಿದ್ದೆ. ಅದೂ ಒಳ್ಳೆಯ ಸಂಭಾವಿತರ ಮನೆಯ ಹುಡುಗಿ .

Ramesh said...

ಸಾಗರಿ,
ತುಂಬ ಮನಮುಟ್ಟುವಂಥಹ ಬರಹ. ಒಂದು ಕ್ಶಣ ಸುಮ್ಮನೆ ಕುಳಿತುಬಿಟ್ಟೇ. ಆ ಅಸಹಾಯಕತೆ ಯಾರಿಗು ಬೇಡಪ್ಪ. ಕೊನೆಯಲ್ಲಿ ನಡಿಯಮ್ಮ ಮನೆಗೆ ಹೊಗೋಣ ಅನ್ನೋ ಪದಗಳನ್ನು ಕೇಳಿ ಆ ತಾಯಿಯ ಹ್ರುದಯಕ್ಕೆ ಆಗಿರಬಹುದಾದ ಆಘಾತ ಒಂದು ಸ್ಫೋಟದಂತಿರಬಹುದೋ ಎನೋ ಅನ್ಸತ್ತೆ.

Anonymous said...

"ಗಂಡ ಹೆಂಡತಿ ಮಕ್ಕಳು...ಎಲ್ಲರೊಂದಿಗೆ ಸಾಮಾನ್ಯರಂತೆ ಬದುಕುವುದು, ಗಿರಾಕಿ ಬಂದಾಗ ಮಾತ್ರ ಶುದ್ಧ ವೇಶ್ಯಯರಾಗುವರು. ಅತ್ಯಾಶ್ಚರ್ಯವೆಂದರೆ ಅವರಲ್ಲಿನ ಎಷ್ಟೋ ಮಹಿಳೆಯರ ಮನೆಯವರಿಗೆ ಅವರು ವೇಶ್ಯೆ ಎಂಬುದೇ ಗೊತ್ತಿಲ್ಲ..,"


Sagari,

I want clarification for this. Please explain.

ಸಾಗರಿ.. said...

ಶ್ರೀಧರ್ ಅವರೇ,
ನನ್ನ ಬ್ಲಾಗಿಗೆ ತಮಗೆ ಸ್ವಾಗತ. ಸಾಮಾಜಿಕ ಪಿಡುಗುಗಳಿಗೆ ಒಮ್ಮೊಮ್ಮೆ ಪ್ರತ್ಯಕ್ಷವಾಗಿ ಕೆಲವೊಮ್ಮೆ ಪರೋಕ್ಷವಾಗಿ ಸಮಾಜವೇ ಕಾರಣವಾಗಿರುತ್ತದೆ. ಮತ್ತೆ ಇಂತಹ ಪಿಡುಗುಗಳೂ ಸಮಾನ್ಯಕ್ಕೆ ತೊಲಗುವಂಥದ್ದಲ್ಲ. ಅದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವೆ ಆಗಿದೆ ಎನ್ನುವುದು ನನ್ನ ಭಾವನೆ. ಕವನವನ್ನು ಓದಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು.

ಸಾಗರಿ.. said...

ಪ್ರವೀಣ ಅವರೇ,
ತಮಗೂ ನನ್ನ ಬ್ಲಾಗಿಗೆ ಸ್ವಾಗತ ಮತ್ತು ಕವನವನ್ನು ಓದಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು. ಬಡತನದ ವಿಷ ವರ್ತುಲಕ್ಕೆ ಸಿಕ್ಕ ಬಹಳ ಜನ ಅಡ್ಡ ದಾರಿ ಹಿಡೀತಾರೆ, ಅವರನ್ನು ಸರಿ ದಾರಿಗೆ ತಂದು ಅರೋಗ್ಯಕರ ಸಮಾಜ ರಚನೆ ಮಾಡಬೇಕಾದ್ದು ನಮ್ಮದೇ ಕರ್ತವ್ಯ. ಈ ಕವನದ ಮಗ ತಾಯಿಯ ವೃತ್ತಿ ತಿಳಿದು ಆಕೆಯನ್ನು ದೂರ ಮಾಡಿದ್ದರೆ ಆಕೆ ಬೇರೆ ಗತಿ ಇಲ್ಲದೆ ಮತ್ತದೇ ವೃತ್ತಿಯನ್ನು ಅನುಸರಿಸಬೇಕಾಗ್ತಿತ್ತೋ ಏನೋ?? ಆದರೆ ಆಕೆಯ ತ್ಯಾಗ(ಕೆಳ ದರ್ಜೆಯ ಮಹಿಳೆ ಕೇವಲ ಸುಖಕ್ಕಾಗಿ ವೇಶ್ಯೆ ಆಗಿದ್ದು ನಾನು ಕಂಡಿಲ್ಲ.)/ಆಕೆ ಅಂತಹ ದಾರಿ ಹಿಡಿಯಲು ಕಾರಣವಾದ ಆಕೆಯ ಅಸಹಾಯಕತೆ, ಅಥವಾ ಆಕೆಯ ಅಜ್ಞಾನ ಎಲ್ಲವನ್ನೂ ಮನ್ನಿಸಿ ಕರೆದೊಯ್ಯುವ ಮಗ ಮುಂದೆ ಆಕೆಗೆ ಹೊಸ ಬದುಕು ಕೊಡುವ ದೊಡ್ಡ ಮನಸ್ಸು ಮಾಡಬಹುದೆಂಬ ಆಶಯ.. ಅಷ್ಟೇ. ಧನ್ಯವಾದಗಳು

ಸಾಗರಿ.. said...

ಪ್ರವೀಣ ಅವರೇ,
ತಮಗೂ ನನ್ನ ಬ್ಲಾಗಿಗೆ ಸ್ವಾಗತ ಮತ್ತು ಕವನವನ್ನು ಓದಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು. ಬಡತನದ ವಿಷ ವರ್ತುಲಕ್ಕೆ ಸಿಕ್ಕ ಬಹಳ ಜನ ಅಡ್ಡ ದಾರಿ ಹಿಡೀತಾರೆ, ಅವರನ್ನು ಸರಿ ದಾರಿಗೆ ತಂದು ಅರೋಗ್ಯಕರ ಸಮಾಜ ರಚನೆ ಮಾಡಬೇಕಾದ್ದು ನಮ್ಮದೇ ಕರ್ತವ್ಯ. ಈ ಕವನದ ಮಗ ತಾಯಿಯ ವೃತ್ತಿ ತಿಳಿದು ಆಕೆಯನ್ನು ದೂರ ಮಾಡಿದ್ದರೆ ಆಕೆ ಬೇರೆ ಗತಿ ಇಲ್ಲದೆ ಮತ್ತದೇ ವೃತ್ತಿಯನ್ನು ಅನುಸರಿಸಬೇಕಾಗ್ತಿತ್ತೋ ಏನೋ?? ಆದರೆ ಆಕೆಯ ತ್ಯಾಗ(ಕೆಳ ದರ್ಜೆಯ ಮಹಿಳೆ ಕೇವಲ ಸುಖಕ್ಕಾಗಿ ವೇಶ್ಯೆ ಆಗಿದ್ದು ನಾನು ಕಂಡಿಲ್ಲ.)/ಆಕೆ ಅಂತಹ ದಾರಿ ಹಿಡಿಯಲು ಕಾರಣವಾದ ಆಕೆಯ ಅಸಹಾಯಕತೆ, ಅಥವಾ ಆಕೆಯ ಅಜ್ಞಾನ ಎಲ್ಲವನ್ನೂ ಮನ್ನಿಸಿ ಕರೆದೊಯ್ಯುವ ಮಗ ಮುಂದೆ ಆಕೆಗೆ ಹೊಸ ಬದುಕು ಕೊಡುವ ದೊಡ್ಡ ಮನಸ್ಸು ಮಾಡಬಹುದೆಂಬ ಆಶಯ.. ಅಷ್ಟೇ. ಧನ್ಯವಾದಗಳು

ಸಾಗರಿ.. said...

ಶ್ವೇತಾ ಅವರೇ,
ತಮಗೂ ನನ್ನ ಬ್ಲಾಗಿಗೆ ಸ್ವಾಗತ ಮತ್ತು ಕವನವನ್ನು ಓದಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು. call girls ಇದ್ದಂತೆ call boys ಕೂಡಾ ಇರ್ತಾರಂತೆ. ದೊಡ್ಡ ದೊಡ್ಡ ಮನೆತನದ ಹೆಂಗಸರು ತಮ್ಮ ದೂರದಲ್ಲಿರುವ ಪತಿಯ ಅನುಪಸ್ಥಿತಿಯನ್ನು ಮರೆಯೋಕೆ ಅವರನ್ನೇ ಅವಲಂಬಿಸಿರ್ತಾರಂತೆ. ದುಡ್ಡಿಲ್ಲದೆ ಅರೆಬರೆ ಬಟ್ಟೆ ತೊಡುವವರಿಗೂ, ದುಡ್ಡು ಹೆಚ್ಚಾಗಿ ಅರೆಬರೆ ಬಟ್ಟೆ ತೊಡುವವರಿಗೂ ಇರುವ ವ್ಯತ್ಯಾಸದಂತೆ ಇವರದ್ದೂ ಕೂಡ!!

ಸಾಗರಿ.. said...

ರಮೇಶ ಅವರೇ,
ತಮಗೂ ನನ್ನ ಬ್ಲಾಗಿಗೆ ಸ್ವಾಗತ ಮತ್ತು ಕವನವನ್ನು ಓದಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು. ಅಸಹಾಯಕತೆ ಮನುಷ್ಯನನ್ನು ಎಂತಹ ಮಟ್ಟಕ್ಕೂ ತಳ್ಳಬಹುದು ಎಂಬುದಕ್ಕೆ ಇವರೆ ಜೀವಂತ ಸಾಕ್ಷಿ. ಮರಳುಗಾಡಲ್ಲಿ ಕಳೆದು ಹೋದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಬಿಸಿಲಿನ ಬೆಗೆಗೆ ಸತ್ತನಂತೆ, ಇನ್ನೊಬ್ಬ ಹಸಿವೆಯಿಂದ ಸಾಯುವ ಸ್ಥಿತಿ ಬಂದಾಗ ತನ್ನ ಜೊತೆಗಾರನ ಶವವನ್ನೇ ದಿನವೂ ತಿಂದು(ಅದೂ ಹಸಿ ಮಾಂಸ) ೧೫ ದಿನ ಬದುಕಿ ಬಚಾವಾಗಿ ಬಂದನಂತೆ. ಸುಲಭಕ್ಕೆ ಸಾಯುವ ಮನಸ್ಸು ಯಾರಿಗೂ ಬರದು, ಬದುಕುವ ಆಸೆ, ಹಸಿವು ಯಾರನ್ನು ಎಂತಹ ಸ್ಥಿತಿಗೆ ಬೆಕಾದರೂ ತರಬಹುದು. ಅಂಥ ಅಸಹಾಯಕತೆ ಯಾರಿಗು ಬರದಿರಲಿ..

ಸಾಗರಿ.. said...

anonymous ಅವರೇ,
ಕೇವಲ ಎರಡು ಘಟನೆಯನ್ನು ಮಾತ್ರ ಹೇಳುತ್ತೇನೆ.

೧. ಆಕೆಯ ಪತಿ ಲಾರಿ ಡ್ರೈವರ್, ಹದಿನೈದು ದಿನಕ್ಕೋ ತಿಂಗಳಿಗೋ ಒಮ್ಮೆ ಮನೆಗೆ ಬಂದು ಹೆಂಡತಿ ಮಕ್ಕಳಿಗೆ ಒಂದಿಷ್ಟು ಹೊಡೆದು ಹೋಗ್ತಾನಂತೆ. ಅವನಿಗೆ ಗಂಡು ಮಗು ಕೊಟ್ಟಿಲ್ಲವೆಂದು ಹೆಂಡತಿಯನ್ನ, ಹೆಣ್ಣು ನೀನು ಎಂದು ಮಕ್ಕಳನ್ನ ಹೊಡೆಯುತ್ತಾನಂತೆ. ೪ ಹೆಣ್ಣು ಹುಟ್ಟಿದರೂ ಗಂಡು ಮಗು ಹುಟ್ಟಿಲ್ಲವೆಂಬುದು ಆತನ ದೂರಂತೆ. ಮಕ್ಕಳು ಸಾಕು, ಸಾಕುವುದು ಕಷ್ಟವೆಂದರೂ ಕೇಳೊಲ್ಲವಂತೆ. ಆತ ದುಡಿದ ದುಡ್ಡು ಬರಿಯ ಸಾರಾಯಿ ಸೇಂದಿಗಂತೆ. ಅಥವಾ ಇಟ್ಟುಕೊಂಡವಳಿಗಂತೆ. ಆಕೆ ಒಂದು ಗಾರ್ಮೆಂಟಲ್ಲಿ ಕಸ ಗುಡುಸಿವಾಕೆಯಂತೆ, ತಿಂಗಳಿಗೆ ೮೦೦ ರೂಪಾಯಿ ಸಂಬಳವಂತೆ. ಮನೆ ಬಾಡಿಗೆ ಹೋಗಿ ಐನೂರು ಮಿಕ್ಕುತ್ತದೆಯಂತೆ.; ಬೆಳಿಗ್ಗೆ ೬ ರಿಂದ ೯ ರವರೆಗೂ ಅವರಿವರ ಮನೆಗೆಲಸ ಮಾಡ್ತಾಳಂತೆ. ಗಾರ್ಮೆಂಟಲ್ಲಿ ಆಕೆಯನ್ನು ಆಕೆಯ ಮೇಲಿನವರು ಬೇಕಾಬಿಟ್ಟಿ ಬಳಸಿಕೊಳ್ತಾರಂತೆ. ಆಕೆ ಅಲ್ಲಿಯ ವೇಶ್ಯೆಯೇ ಆಗಿಬಿಟ್ಟಿದ್ದಾಳಂತೆ. ಹೋಗು ಎಂದವರ ಬಳಿ ಕಳಿಸಿದಲ್ಲೆಲ್ಲಾ ಹೋಗಬೇಕಂತೆ. ಬರಲ್ಲ/ಬೇಡಾ/ಯಾರಿಗಾದ್ರೂ ಹೆಳಿಬಿಡ್ತೀನಿ/ಬಿಟ್ಟು ಹೋಗ್ತೀನಿ ಅಂದ್ರೆ ನಿನ್ನ ಮಗಳನ್ನು ಇಟ್ಕೋತೀವಿ ಅಂತ ಮನೆಗೂ ಬರ್ತಾರಂತೆ. ಗಂಡನಂತೂ ತನಗೆ ರೋಗವಿದೆ ಅಂತ ಒಂದು ವರ್ಷ ಮನೆಗೇ ಬಂದಿಲ್ಲವಂತೆ. ಆಮೇಲೆ ಬಂದವನು ರೋಗವನ್ನು ಆಕೆಗೂ ಹತ್ತಿಸಿ ಹೋದನಂತೆ(AIDS). ಆಕೆಯ ಮಕ್ಕಳಿಗೆ ರೋಗವಿಲ್ಲ, ಮಕ್ಕಳು ಇನ್ನೂ ಚಿಕ್ಕವರು ಓದುತ್ತಿದ್ದಾರೆ, ರೋಗ ಹತ್ತಿಸಿ ಹೋದವನ ಪತ್ತೆಯೇ ಇಲ್ವಂತೆ. ಈಗ ಈ ಸಂಘದ ಸದಸ್ಯೆಯಾದ ಮೇಲೂ ಆಕೆಯನ್ನು ಆಕೆಯ ಮಕ್ಕಳ ಹೆಸರಲ್ಲಿ ಬೆದರಿಸಿ ಬಳಸಿಕೊಳ್ತಾರಂತೆ. ಇದ್ಯಾವ್ದೂ ಆಕೆಯ ಮಕ್ಕಳಿಗೆ (ಗಂಡನಿಗೆ ಹೇಳುವ ಧೈರ್ಯ ಆಕೆ ಮಾಡಿಲ್ಲವಂತೆ) ಗೊತ್ತಿಲ್ಲವಂತೆ.

೨. ಆಕೆಯ ಗಂಡ ದುಡಿಯಲ್ಲವಂತೆ, ಆಕೆ ದುಡಿದ ದುಡ್ಡಲ್ಲೇ ಜೀವನವಂತೆ. ದುಡಿದು ಬಾ ಅಂದರೆ ಮನೆಯಲ್ಲಿ ಆ ದಿನ ದೊಡ್ಡ ಗಲಾಟೆಯಂತೆ. ಒಂದು ಗಂಡು ಒಂದು ಹೆಣ್ಣು ಮಗುವಂತೆ ಆಕೆಗೆ. ಓದಲು ತುಂಬಾ ಜಾಣ ಮಕ್ಕಳಂತೆ ಅವು. ಹೆಂಡ್ತಿ ಒಬ್ಬಳೇ ಎಷ್ಟು ದುಡಿದಾಳು. ಸಂಬಂಧಿಗಳು ಸಾಲ ಕೊಡಲಿಲ್ಲ, bank ಸಾಲ ತೀರಿಸಲಾಗದೆ ಮನೆಯ ಸಾಮಾನೆಲ್ಲ ಹರಾಜಾದವಂತೆ ಆದರೂ ಸಾಲ ತೀರದೆ, ಹೊಟ್ಟೆಗೂ ಇಲ್ಲದೆ ಆಕೆ ಈ ದಂಧೆಗೆ ಇಳಿದಳಂತೆ. ಈಗ ಆಕೆ ಮಗನಿಗೆ diploma ಮಾಡಿಸಿದ್ದಾಳಂತೆ, ಮಗಳು ಓದುತ್ತಿದ್ದಾಳಂತೆ, ಗಂಡ ಮೊದಲಿನಂತೆಯೇ ಇದ್ದಾನಂತೆ. ಮಗನಿಗೆ ಕೆಲಸ ಸಿಕ್ಕ ಮೇಲೆ ಆಕೆ ದಂಧೆಯನ್ನು ನಿಲ್ಲಿಸಿದ್ದಾಳಂತೆ. ಅವಳು ದಂಧೆ ಮಾಡಿದ್ದು ಆಕೆಯ ಗಂಡ, ಮಕ್ಕಳಿಗೆ ಯಾರಿಗೂ ಗೊತ್ತಿಲ್ಲ. ಆಕೆಯ ರೋಗ ಕೂಡ ಆಕೆಯ ಗಂಡ ಮಕ್ಕಳಿಗೆ ಬಂದಿಲ್ಲ. ತಾಯಿಯ ಆರೈಕೆ ಈಗ ಮಕ್ಕಳೆ ಮಾಡುತ್ತಿದ್ದಾರಂತೆ ರೋಗ ಹೇಗೆ ಬಂದಿದೆ ಎಂಬುದು ಮಕ್ಕಳಿಗೆ ಗೊತ್ತಿಲ್ಲವಂತೆ.. ಇವಳು ಅದೇ ಸಂಘದ ಅಧ್ಯಕ್ಷೆ.

ಯಾರಿಗೂ ಗೊತ್ತಿಲ್ಲದಂತೆ ಮಾಡುತ್ತಿರುವ ಅವರ ಕೆಲಸವನ್ನು ಹೊಗಳಿ ಹೇಳಿದ್ದಲ್ಲ, ವಾಸ್ತವತೆಯನ್ನು ತೆರೆದು ಇಟ್ಟಿದ್ದು. ಅವರು ಅವರ ಮಟ್ಟಕ್ಕೆ ಅವರಿಗೆ ಬಂದ ಸಮಸ್ಯೆಯನ್ನು ನಿಭಾಯಿಸುತ್ತಿದ್ದಾರೆ. ದೊಡ್ಡ ಸಂಬಳ ಎಣಿಸುವ ನೌಕರಿ ಅವರಿಗೆ ಸಿಗಲ್ಲ, ಸಣ್ಣ ಸಂಬಳ ಸಾಕಾಗಲ್ಲ. ಹಣದ ಸಹಾಯ ಕೊಡುವ ಕೈ ಅವರಿಗಿಲ್ಲ, ಸಾಲ ತೀರಿಸುವುದು ಅಸಾಧ್ಯವಾದಾಗ, ಗಂಡ ಎನ್ನುವವ ಬೇಜವಾಬ್ದಾರಿ ಅದಾಗ ಏನು ತಾನೆ ಮಾಡಿಯಾಳು ಆಕೆ????(ಇಲ್ಲೂ ನಾನು ವೇಶ್ಯಾವೃತ್ತಿಯನ್ನು ಸಮರ್ಥಿಸುತ್ತಿಲ್ಲ)
ಮನೆಯ ಗಂಡಸು ಸರಿ ಇದ್ದಿದ್ದರೆ ಹೆಣ್ಣುಮಕ್ಕಳ ಹೆಸರಲ್ಲಿ ಮಾನ ದೋಚುವವರಿಗೆ ಸೆರಗೊಡ್ಡುವ ಗತಿ, ಓದುತ್ತೇವೆಂಬ ಮಕ್ಕಳಿಗೆ ಸೆರಗೊಡ್ಡಿ ಓದಿಸುವ ಗತಿ(bank loan ತೀರಿಸುವ ಗತಿ ಕೂಡ) ಅವರಿಗೆ ಬರುತ್ತಿತ್ತೇ??

ನಾವು ಹೇಗೆ ನಮ್ಮ ತಂದೆ ತಾಯಿ, ಸಹೋದರ ಸಹೋದರಿ, ಮಕ್ಕಳನ್ನು ಪ್ರೀತಿಸುತ್ತೇವೆಯೋ ಅವರೂ ಹಾಗೆ. ಪ್ರಾಣಿಗಳೂ ಅವರವರ ಮರಿಗಳನ್ನು ಪೋಷಿಸುತ್ತವೆ!!. ಕಷ್ಟ ಬಂದಾಗ ಅವರನ್ನೆಲ್ಲಾ ಬಿಟ್ಟು ಬೇರೆ ಹೋಗಿ ಹಾಯಾಗಿರಲು ನಮ್ಮಿಂದ ಸಾಧ್ಯವೇ? ನಮ್ಮ ನಮ್ಮ level ಗೆ ನಾವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ. ನನಗೆ ಕಷ್ಟ ಬಂದರೆ ನನ್ನ ವಿದ್ಯೆ-ಬುದ್ಧಿ, ಹಣ, ಸೈರಣೆಯ ಶಕ್ತಿ, ನೈತಿಕತೆಗೆ ಅನುಗುಣವಾಗಿ ನಾನು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇನೆ. ವಿಷ್ಣುವರ್ಧನ್ ಅವರಿಗೆ ಕಷ್ಟ ಬಂದಾಗ ಹೇಗೆ ಅದಕ್ಕೆ ಪ್ರತಿಸ್ಪಂದಿಸಿದರೋ ಹಾಗೆ ನಾನೂ ಮಾಡಬೇಕು ಅಂದರೆ ನನಗೆಲ್ಲಿ ಅದು ಸಾಧ್ಯ ಹಾಗೆಯೇ ಅವರದ್ದೂ ಕೂಡ.. ಅವರಿಗೆ ಒಳ್ಳೆಯ education ಅಗತ್ಯವಿದೆ. ಹಾಗೆಯೇ ಹೆಂಗಸರನ್ನು mis use ಮಾಡದಂತೆ ಕಾಯ್ದೆ ಇದ್ದರೂ ಹೆಂಗಸರು ಹಲವೆಡೆ exploit ಆಗ್ತಿದ್ದಾರೆ. ಮತ್ತೆ ಬಹಳಷ್ಟು ಗಂಡಸರಿಗೆ ಹೆಂಡತಿ ಮಕ್ಕಳ ಮೆಲಿನ ತಮ್ಮ ಕರ್ತವ್ಯದ ಬಗ್ಗೆ ತಿಳುವಳಿಕೆ ಮೂಡಬೇಕಿದೆ(ಕೆಳ ದರ್ಜೆಯ ಜನರಲ್ಲಿ ಇದು ಅತೀ ಅವಶ್ಯವೆನಿಸಿದೆ.) ನನ್ನ ಆಶಯವಿಷ್ಟೇ ಪ್ರತಿಯೊಬ್ಬರಿಗೂ ಅವರ ವೈಯಕ್ತಿಕ ಜೀವನದ ಜವಾಬ್ದಾರಿ ಇರುವಂತೆ ಸಮಾಜದಲ್ಲಿಯೂ ಜವಾಬ್ದಾರಿಯುತವಾಗಿ ವರ್ತಿಸುವ ಅವಶ್ಯವಿದೆ, ನಮಗೆಲ್ಲ ಅವರ ದೂಷಣೆಯ ಆಚೆ ನಮ್ಮದೂ ಬಹಳ ಜವಾಬ್ದಾರಿ ಇದೆ ಎಂಬುದು ತಿಳಿಯಬೇಕಿದೆ

ತೇಜಸ್ವಿನಿ ಹೆಗಡೆ said...

ಸಾಗರಿ,

ನಿಮ್ಮ ಈ-ಮೈಲ್ ವಿಳಾಸವಿರದಿದ್ದಕಾರಣ ಇಲ್ಲಿಯೇ ಉತ್ತರಿಸುತ್ತಿದ್ದೇನೆ. ಪ್ರಸ್ತುತ ನನ್ನ ಕವನಕ್ಕೆ ನೀವು ಬೇರೊಬ್ಬರ ಪೋಸ್ಟ್‌ಗೆ ಪ್ರತಿಕ್ರಿಯಿಸುವಬದಲು ಹಾಕಿರುವಿರೆಂದು ಭಾವಿಸುವೆ.
ur comment : "ಮಳೆಗಾಲದಲ್ಲಿ ಖಾರ ಖಾರ ಪಾನಿಪುರಿ.... ಯಮ್ಮೀಈಈಈಈ." ಹಾಗಾಗಿ ನಾನು ಅದನ್ನು ಬ್ಲಾಗಿಗೆ ಹಾಕಲಿಲ್ಲ :) ದಿವ್ಯಾ ಅವರ ಪಾನಿಪುರಿ ಬ್ಲಾಗಿಗೆ ನೀವು ಈ ಕಮೆಂಟ್ ಹಾಕಬೇಕಿತ್ತು ಬಹುಶಃ ತಪ್ಪಾಗಿ ನನಗೆ ಹಾಕಿರುವಿರಿ ಎಂದು ಭಾವಿಸುವೆ. :)

Badarinath Palavalli said...

ದನಿ ಕೇಳಿ
ಕತ್ತಲಾದಂತೆನಿಸಿ
ಆಸರೆಗೆ ಅವನಿಗಾಗಿ ತಡಕಾಡಿದಳು..

This poem and background writing is quite heart touching....

Nice.

Pl. visit my Kannada poetry bog:
www.badari-poems.blogspot.com

- Badarinath Palavalli

Raghu said...

ಸಾಗರಿ..ತುಂಬಾ ಚೆನ್ನಾಗಿದೆ ಈ ಕವನ ಮತ್ತು ಲೇಖನ... ಇವತ್ತು ತುಂಬಾ ಸಮಯ ತೆಗೆದುಕೊಂಡೆ ಕಾಮೆಂಟ್ ಸಾಲುಗಳನ್ನು ಓದಲಿಕ್ಕೆ... ಅದರಲ್ಲೂ ನಿಮ್ಮ ಮತ್ತು Anonymous ನಡುವಿನ ವಿಚಾರ ವಿನಿಮಯ ಮಾಡಿಕೊಂಡ ಬಗೆ...ಒಟ್ಟಿನಲ್ಲಿ ಒಳ್ಳೆ ಪ್ರಯತ್ನ..
ನಿಮ್ಮವ,
ರಾಘು.

ಜಲನಯನ said...

ಸಾಗರಿ, ಭಾವನೆಗಳ ಸಾಗರವನ್ನೇ ಮಂಥಿಸಿದಂತಹ ಕವನ ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳ ಕಥನ,,.ನಿಜವಾಗಿಯೂ ನಿಮ್ಮ ಈ ಪೋಸ್ಟ್ ಅಂತಹ ಸಾರ್ಥಕತೆಯನ್ನು ಪಡೆದಿದೆ ಎಂದರೆ...ನಂಬಲೇಬೇಕು...ಬಹಳ ಚನ್ನಾಗಿ ಪರ-ವಿರೋಧಗಳ ಅಲೆಯನ್ನು ಏರಿ ಸಾಗಿದ್ದೀರಿ ನಮ್ಮನ್ನೂ ಸಾಗಿಸಿದ್ದೀರಿ ಜೊತೆಜೊತೆ... ಮೌಲ್ಯಗಳ ಬಗ್ಗೆ ಹೇಳುವುದು ಸುಲಭ..ಆದರೆ ನುಡಿದಂತೆ ಆಚರಣೆ ಮಾಡುವುದು ಕಷ್ಟವೇ ಮಾತ್ರವಲ್ಲ ಹೆಚ್ಚು ಜನಕ್ಕೆ ಇಷ್ಟವೂ ಅಲ್ಲ.... ನನಗೆ ನನ್ನ ಪ್ರೊಫೆಸರ್ ರವರ ಮಾತು ನೆನಪಿಗೆ ಬಂತು ..ಮೈಕ್ರೋಸ್ಕೋಪಿನಲ್ಲಿ ಒಂದು ಜೀವಿಯನ್ನು ಗುರುತಿಸಿ ಏನದು ಎಂದು ಹೇಳಬೇಕಿತ್ತು...ನಮ್ಮ ಕ್ಲಾಸಿನ ಎಲ್ಲರೂ ನೋಡಿ...ಇದು...ಅದಲ್ಲ..ಎಂದರೇ ಹೊರತು ಅದು ಏನಾಗಿತ್ತು ಎಂದು ಹೇಳದಾದರು...ಆಗ ಅವರು---Friends,,remember it is always very Easy to say what any thing it is not ..but very difficult to say what it is....
ಎಂತಹ ಸರಳ ಆದರೂ ಅಮೂಲ್ಯ ಮಾತುಗಳವು...
ವೇಶ್ಯೆ ..ಅವಳು ಹಾಗೇ ಮಾಡಬಾರದಿತ್ತು ...ಕಳ್ಳ ಹಾಗೆ ಮಾಡಬಾರದಿತ್ತು...ಲಂಚಕೋರ ಹಾಗೆ ಮಾಡಬಾರದಿತ್ತು...ಅವರು ಎನು ಮಾಡಬಹುದಿತ್ತು...ಹೇಳುವವರು ಬಹಳ ವಿರಳ..ಹಾಗೆ ಹೇಳುವವರು...ಎಷ್ಟು ಪಾಲಿಸುತ್ತಾರೆ ತಾವೇ ಸ್ವತಃ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ....
Hats off ಸಾಗರಿ ಒಂದು ಒಳ್ಳೆಯ ಪೋಸ್ಟ್ ಕೊಟ್ಟಿದ್ದಕ್ಕೆ ಮತ್ತು ಅದರ ಈ ರೀತಿಯ ವಿಮರ್ಶೆಗೆ ದಾರಿ ಮಾಡಿದ್ದಕ್ಕೆ.

ಸಾಗರಿ.. said...

tentcinema, ರಾಘು ಹಾಗೂ ಅಜಾದ್ ಸರ್,
ನಿಮ್ಮ ಪ್ರೀತಿಯ ಕಾಮೆಂಟಿಗೆ, ಅನಿಸಿಕೆಗೆ ಧನ್ಯವಾದಗಳು. ಅನಿವಾರ್ಯ ಕಾರಣಗಳಿಂದಾಗಿ ಬಹಳ ತಡವಾಗಿ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ಹೀಗೆಯೇ ಬರುತ್ತಿರಿ.