Thursday, October 21, 2010

ಹುಟ್ಟುಹಬ್ಬದ ಶುಭಾಷಯಗಳೂ ಅಹನ್



(ಅಹನ್ ನ ಅನಾರೋಗ್ಯದ ಕಾರಣದಿಂದ ಬ್ಲಾಗ ಕಡೆ ಮುಖ ಮಾಡಲೂ ಸಾಧ್ಯವಾಗಲಿಲ್ಲ. ಏನೇ ಮಾಡಿದರೂ ಇಳಿಯದ ಅಹನ್ ಜ್ವರ ನಮ್ಮನ್ನೆಲ್ಲ ಕಂಗೆಡಿಸಿ ಬಿಟ್ಟಿತ್ತು. ಹತ್ತು ದಿನದ ಜ್ವರ ಮುಗಿದ ನಾಲ್ಕೇ ದಿನದಲ್ಲಿ ಮತ್ತೊಮ್ಮೆ ಜ್ವರ.. ಹಿಡಿತಕ್ಕೆ ಸಿಗದಂತೆ ಕಳೆದ ಆ ೧೦೩ ರ(103F ತಾಪಮಾನವಿತ್ತು ಆ ಎರಡು ದಿನ) ದಿನಗಳು ಇನ್ನೂ ಭಯಂಕರವಾಗಿಯೆ ಕಣ್ಣಿಗೆ ಕಟ್ಟುತ್ತದೆ. ಡಾಕ್ಟರ್ ಡೆಂಗ್ಯು ಇರಬಹುದೆಂದು ಸಂಶಯಪಟ್ಟಾಗಂತೂ ನಾವು ನಾವಾಗಿಯೇ ಇರಲಿಲ್ಲ. ಎರಡೆರಡು ಸಲ ಬ್ಲಡ್ ಟೆಸ್ಟ್, ಬ್ಲಡ್ ಕಲ್ಚರ್ ಅದೂ ಇದೂ ಅಂತ ಅಹನ್ ರಕ್ತ ತೆಗೆವಾಗ ಅಹನ್ ಜೊತೆ ನಾವೂ ಅತ್ತಿದ್ದೇ ಅತ್ತಿದ್ದು.. ಅಬ್ಬ ದೇವರ ದಯೆ ಡೆಂಗು ಮಲೇರಿಯಾ ಏನೂ ಆಗಿರಲಿಲ್ಲ.. ಬ್ಯಾಕ್ಟೀರಿಯಲ್ ಫ್ಲೂ ಅಂತ ರಿಪೋರ್ಟ್ ಬಂದಾಗಲೇ ನಮ್ಮನೆಯ ವಾತಾವರಣ ತಿಳಿಯಾದದ್ದು.. ಆದ್ದರಿಂದ ನನಗೆ ಯಾರ ಬ್ಲಾಗನ್ನೂ ಓದಲಾಗಲಿಲ್ಲ. ನನ್ನ ಬ್ಲಾಗನ್ನೂ ತೆರೆಯಲಾಗಲಿಲ್ಲ. ತಮ್ಮೆಲ್ಲರನ್ನೂ ಬಹಳ mis ಮಾಡಿಕೊಂಡ್ದ್ದೇನೆ. ಆದರೂ ಇನ್ನೂ ಸ್ವಲ್ಪ ಸಮಯಾವಕಾಶದ ಅಗತ್ಯವಿದೆ ನನಗೆ.. ಅಹನ್ ನ ಎರಡನೆಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದನ್ನು ಬರೆದು ಪೋಸ್ಟ್ ಮಾಡುತ್ತಿದ್ದೇನೆ.)



ಹುಟ್ಟುಹಬ್ಬದ ಶುಭಾಷಯಗಳು ಅಹನ್

ಅಹನ್ ಮೇಲೆ ಪ್ರೀತಿ ಉಕ್ಕಿದಾಗ ಹೆಚ್ಚು ಕಡಿಮೆ ಅವನನ್ನು ಕರೆಯುವಾಗಲೆಲ್ಲ ರಂಗ, ಬೆಣ್ಣೆ ಕೃಷ್ಣ, ಮುದ್ದು ಕೃಷ್ಣ, ಸಿಂಗಾರ, ಬಂಗಾರ.. ಹೀಗೆಯೇ ಇದ್ದ ಹೆಸರಿನ ಸಾಲುಗಳು ಇದ್ದಕ್ಕಿದ್ದಂತೆ ಕಡಿಮೆ ಎನ್ನಿಸಿತು. ಆಗಿನಿಂದ ಈಗಿನವರೆಗೂ ಅಹನ್ ನನ್ನ ಬಾಯಲ್ಲಿ ಮುದ್ದಿನ ಬಿಸ್ಕೀಟು, ಚಾಕ್ಲೇಟು, ಬಕೆಟ್ಟು, ಬ್ಯಾಟರಿ, ಚಂಬು, ದಿಂಬು, ಪಟ್ಟಿ, ಪುಸ್ತಕ, ಸಾಂಬಾರು, ಚಟ್ನಿ ಎಲ್ಲ ಆಗ್ತಾನೆ. ಅವನೂ ಅಷ್ಟೇ ನನ್ನ ಮೇಲೆ ಪ್ರೀತಿ ಉಕ್ಕಿದಾಗೆಲ್ಲ ಓಡಿ ಬಂದು ಕೂದಲು ಹಿಡಿದು ನೆಲದಿಂದ ಕಾಲು ಬಿಟ್ಟು ಜೋಲಿ ಹೊಡೆಯುತ್ತಾನೆ{ಹೀಗೆಂದ ಮಾತ್ರಕ್ಕೆ ನಾನು ನೀಲವೇಣಿ ಎಂದುಕೊಂಡರೆ ಅದು ನಿಮ್ಮದೇ ತಪ್ಪು,, :) } ಪರಪರ ಮುಖವನ್ನು ಗೆಬರಿ, ಕಚ್ಚಿ ತನ್ನ ಪಾಡಿಗೆ ತಾನು ವಾಪಸ್ಸಾಗ್ತಾನೆ. ತಾಯಿ ಮಕ್ಕಳ ಪ್ರೀತಿ ವ್ಯಕ್ತ ಪಡಿಸುವ ಪರಿ ಪರರಿಗೆ ಏನೆನ್ನಿಸುತ್ತದೋ ತಿಳಿಯದು ಆದರೆ ತಾಯಂದಿರಿಗೆ ಮಾತ್ರ ಬೆಚ್ಚನೆಯ ಅನುಭವ..

ಮೊನ್ನೆ ಮೊನ್ನೆ ತಾನೆ ಹೆತ್ತಂತಿದೆ, ಅದಾಗಲೇ ಅಹನ್ ಓಡಾಡಿ ಕುಣಿದು ಮಾತಾಡುವಂತಾಗಿಬಿಟ್ಟಿದ್ದಾನೆ. ಒಮ್ಮೊಮ್ಮೆಯಂತೂ ಇಷ್ಟು ಬೇಗ ಹೇಗೆ ದಿನಗಳು ಕಳೆಯುತ್ತಿವೆ, ಅಹನ್ ನ ಅಂಬೆಗಾಲು, ಓಲಾಡುತ್ತ ಹೆಜ್ಜೆ ಇಡುವ ದಿನಗಳಿನ್ನೂ ಸರಿ ಅನುಭವಿಸಿ ಆಗಿರಲೇ ಇಲ್ಲವಲ್ಲ ಅಂತ ಪರಿತಪಿಸುವಂತಾಗುತ್ತದೆ.

ತಾಯ್ತನದ ಸುಖವನ್ನು ನೆನೆದಾಗಲೆಲ್ಲ ಪ್ರತಿ ಜನ್ಮವೂ ಹೆಣ್ಣಾಗಿಯೆ ಹುಟ್ಟುವ ಹಂಬಲ,,, ಹೊಟ್ಟೆಯಲ್ಲಿ ಹೊರುವ, ಹೆರುವ, ಬೆಳೆಸುವ ಎಲ್ಲಾ ಕ್ಷಣಗಳೂ ಅತೀ ಅಮೂಲ್ಯ ಮತ್ತು ಅಷ್ಟೇ ಸುಂದರ. ಪ್ರತಿ ಜನ್ಮದಲ್ಲೂ ತಾಯಾಗುವಂತಿದ್ದರೆ ನನಗೆಂದಿಗೂ ಮೋಕ್ಷವೇ ಬೇಡ ...

ತನಗೆ ಬೇಕೆನ್ನಿಸಿದ್ದನ್ನು ಪಡೆಯಲು ಮಾಡುವ ನಾಟಕ, ಬೆಣ್ಣೆ ಹಚ್ಚುವ ಪರಿ, ಬಿದ್ದು ಬಿದ್ದು ಅಳುವ ಆಟ ಹೆತ್ತವರಿಗೆ ಹಬ್ಬ(ಈ ಹಬ್ಬದ ಕಜ್ಜಾಯ ಕಡುಬಲ್ಲದೆ ಬೇರೇನಿದ್ದೀತು???) ಅಹನ್ ನ ಕೀಟಲೆ ಅತೀ ಆದಾಗಲೆಲ್ಲ ನನ್ನ ಅವನ ಲಡಾಯಿ ಶುರು. ಮುತ್ತು ಕೊಡು ಎಂದರೂ ಕೊಡದವ ನನ್ನ ಉರಿ ಮುಖ ಕಂಡು ಓಡಿ ಬಂದು ಮುದ್ದಿಸಿ ಮುತ್ತಿಡುತ್ತಾನೆ. ಇಷ್ಟಾದರೂ ಕೆಲವೊಮ್ಮೆ ಚೆನ್ನಾಗಿ ಅವನಿಗೆ ಏಟನ್ನು ಕೊಟ್ಟು ನಾನು ಅಳುತ್ತ ಕೂತರೆ ಅವನೇ ನನ್ನ ಅಮ್ಮ ಎಂಬಂತೆ ಓಲೈಸುತ್ತಾನೆ..

ಎಷ್ಟು ಸುಳ್ಳೋ ಎಷ್ಟು ನಿಜವೋ ತಾಯಂದಿರ ಶಾಪ, ಬೈಗುಳ ಮಕ್ಕಳಿಗೆ ತಾಗೊಲ್ಲವಂತೆ.. ಸಿಟ್ಟಿನ ಭರದಲ್ಲಿ ತಾಯಂದಿರ ಬೈಗುಳ ಹೇಗಿರುತ್ತದೆಂದರೆ ರಂಗ ಮಂಗ ಎಂಬ ಸಂಭೋದನೆ ಇದೇ ಬಾಯಿಂದ ಉದುರಿದ್ದೇ ಎಂಬ ಸಂಶಯವೂ ಬರುತ್ತದೆ. ಒಟ್ಟಿನಲ್ಲಿ ಮಕ್ಕಳು ನಮಗೆ ಸುಖ ಸಂತೋಷ ಕೊಡಲಿಕ್ಕಾಗೇ ಬರುವ ಸಾಮಗ್ರಿಗಳಲ್ಲ, ಅವರ ಆಟ-ಪಾಠ-ಹಠ ಎಲ್ಲದರಿಂದ ನಾವೇ ಇದರಲ್ಲಿ ಸಂತೋಷವನ್ನು ಕಂಡುಕೊಳ್ಳ ಬೇಕು ಎಂಬ ಆಯಿಯ ಮಾತು ನನಗೆ ಸುಸ್ತಾದಾಗಲೆಲ್ಲ ಕಿವಿಯಲ್ಲಿ ಗುಣುಗುಣಿಸುತ್ತ ನನ್ನ ಕರ್ತವ್ಯಕ್ಕೆ ಸ್ಪೂರ್ತಿ ಆಗುತ್ತದೆ...




ಅಹನ್ ನ ಇತ್ತೀಚಿನ ಭಾವ ಚಿತ್ರಗಳು..




ಅಹನ್ ಹುಡುಗಿಯಾಗಿದ್ದರೆ ಹೀಗೇ ಕಾಣುತ್ತಿದ್ದ.













































ಅಂಬೆ ಬೂಚಿ (ಆಕಳು ಮರಿ) ಎಂದರೆ ಇವನೆ ನೋಡಿ





















ತೊಪ್ಪಿ(ಟೊಪ್ಪಿ) ಹಾಕಿಕೊಂಡು ಕುಣಿಯುವುದೆಂದರೆ ಅಹನ್ ಗೆ ಬಹಳ ಇಷ್ಟ





















ತುಂಟತನ ಮಾಡಿ ಮಳ್ಳು ಮಾಡುವ ನಗು ಇದೇ..





















ತೆಂಡುಲ್ಕರ್ ಆಗ್ತೀನಿ ಅಂತ ಅಹನ್ bat ಇಲ್ಲದೆ batting ಮಾಡ್ತಾನೆ.



















ಅಹನ್ ಈಗ ಬರುವ 24 ಕ್ಕೆ(ಅಕ್ಟೋಬರ್ 24) ಎರಡು ವರ್ಷದವನಾಗುತ್ತಾನೆ.. ಅಹನ್ ನ ಜನ್ಮ ದಿನದ ಸಂಭ್ರಮ ಮನೆಯಲ್ಲಿ. ಅಹನ್ ಗೆ ದೇವರು ಒಳ್ಳೆಯ ಆಯುಷ್ಯ, ಆರೋಗ್ಯ, ವಿದ್ಯೆ, ವಿನಯವನ್ನು ಕರುಣಿಸಲಿ ಎಂಬ ಹಾರೈಕೆಯೊಂದಿಗೆ ನನ್ನ ಬ್ಲಾಗ್ ಜೀವನದ ಮೊತ್ತ ಮೊದಲ ಪೋಸ್ಟ್ ನ್ನು ಮತ್ತೊಮ್ಮೆ ಪಬ್ಲಿಶ್ ಮಾಡ್ತಿದ್ದೇನೆ..


ಇನ್ನು ಮುಂದಿನದ್ದು ಇದಾಗಲೇ ಪೋಸ್ಟ್ ಮಾಡಿದ್ದು.





ಎಲ್ಲಿಯೋ ಬೆಳೆದ ಎರಡು ಜೀವಗಳು ಗರಿಗೆದರಿ ಒಂದಾಗಿ, ಒಲವಿನಲೆಯಲ್ಲಿ ಮಿಂದು, ಪ್ರತಿ ಕ್ಷಣವೂ ಹೊಸ ಪುಟವಾಗಿ ತೆರೆದು, ತೆರೆ ಮರೆಯ ಮುಖಗಳು ಒಂದೊಂದಾಗಿ ಪರಿಚಿತವಾಗಿ, ಅದು ನಗುವಾಗಿ, ಮುನಿಸಾಗಿ, ನಲ್ಮೆಯ ಕನಸಾಗಿ ದಾಂಪತ್ಯದ ನೆಲದಲ್ಲಿ ಹಬ್ಬಿ ಹರಡಿದ ಬಳ್ಳಿಗೆ ಒಂದು ಹೂವಷ್ಟೇ ಕಡಿಮೆ ಎನ್ನಿಸಿತು.



ಜಗತ್ತಿನಲ್ಲಿರುವ ಸಿಹಿಯೆಲ್ಲ ಒಂದಾಗಿ, ನಗುವಲ್ಲಿ ಹೊರಳಾಡಿ, ಅಮ್ರತವನುಂಡು ಕಡೆಗೆ ನಮಗಾಗಿ, ಬದುಕಾಗಿ ಬಂದವನೇ ಅಹನ್.

ಅಹನ್ ಎಂದರೆ ಸೂರ್ಯ(ಅಹನಿ ಎಂದರೆ ಹಗಲು), ನಾಶವಿಲ್ಲದವನು ಎಂದು




ಇವನೇ ನಮ್ಮ ಕಂದ ನೀಲಿ ಕಂಗಳ ಅಹನ್






ಸ್ನಾನ ಮಾಡಿಸಿ ಜೊಗುಳ ಹಾಡಿದ್ರೂ ಮಲ್ಗಲ್ಲ ಅಂತ ನಗ್ತಾನೆ..






ಅಹನ್ ಪಿಯಾನೊ ನುಡಿಸಿದ್ದು ೫ನೇ ತಿಂಗಳಲ್ಲಿ






ನನಗೂ ಹೊಸತು, ಅಹನ್ ಗಂತೂ ಎಲ್ಲವೂ ಹೊಸತು, ಇಬ್ಬರೂ ಕಲಿಯತೊಡಗಿದೆವು ಜೊತೆಯಾಗಿ. ನಾನು ಅವನ ಗುರು,
ಅವ ನನ್ನ ಗುರು.




ಅಡಿಗೆ ಮಾಡೋಕೂ ತುಂಬಾನೇ ಹೆಲ್ಪ್ ಮಾಡ್ತಾನೆ ಅಹನ್






ಸ್ನಾನ ಆದ್ಮೇಲೆ ದೇವರ ಪೂಜೆ ಮಾಡದೆ ಇರೋಕಾಗತ್ತ?





ಅಮ್ಮ ಬೈತಾಳೆ ಅಂತ ಸುಳಿವು ಸಿಕ್ಕಿದ್ರೆ ಸಾಕು, ಹೀಗೆ ಅವಿತುಕೊಳ್ತನೆ ತುಂಟ







ಅಮ್ಮನಾದ ಮೇಲೆ ನನಗೆ ನನ್ನ ಆಯಿಯ(ಅಮ್ಮ) ಮೇಲಿನ ಪ್ರೀತಿ ಇನ್ನೂ ಹೆಚ್ಚಾಗಿದೆ, ಅಬ್ಬಬ್ಬ ನನ್ನ ಆಯಿಯೂ
ನನ್ನನ್ನು ಎಷ್ಟೆಲ್ಲಾ ಸಹಿಸಿದ್ದಳು.. ನಿದ್ರೆ ಇಲ್ಲದೆ, ಹಸಿವೋ, ಬಾಯಾರಿಕೆಯೋ, ಬೆನ್ನು ನೋವೋ.. ಊಹೂ೦ ಒಂದೂ ನೋಡದೆ ಬರೀ ತೂಕಡಿಸಿ ಕಳೆದ ರಾತ್ರಿಗಳೆಷ್ಟೋ?? ಸ್ವತಹ ತಂದೆ ತಾಯಿಗಳಾಗುವವರೆಗೂ ತಂದೆ ತಾಯಿಯ ಪ್ರೀತಿ
ಮಕ್ಕಳಿಗೆ ಅರಿವಾಗದಂತೆ,, ಹೌದೆನ್ನಿಸುತ್ತಿದೆ ಈಗ.


ಕೋಪ ನುಂಗಿ ಹೊಟ್ಟೆ ತೊಂಬಿಸಿಕೊಳ್ಳುವ, ನೋವಾದರೂ ನಗುವ ಕಲೆಯನ್ನೆಲ್ಲ ನನಗೆ ಕಲಿಸಿದವನು ನನ್ನ ಮಗ ಅಹನ್.
ಅವನ ತುಂಟತನ ನೋಡಿದಾಗೆಲ್ಲ
" ಇವನು ೯ ತಿಂಗಳು ನನ್ನ ಹೊಟ್ಟೆಯಲ್ಲಿ ಅದು ಹೇಗೆ ಸುಮ್ಮನೆ ಕುಳಿತಿದ್ದನೋ" ಅಂತ ಅನ್ನಿಸುತ್ತದೆ.




ಎಂದೂ ಮಾಸದ ನಗು





ಎಲ್ರೂ ಇವನನ್ನ ನಗೆ ಬುಗ್ಗೆ ಅಂತಾನೆ ಕರ್ಯೋದು






ಡ್ರೆಸ್ ಮಾಡ್ಕೊಂಡು ಕುಣಿಯೋದು, ವಾಕಿಂಗ್ ಹೋಗೋದು ಅಂದ್ರೆ ಜೀವ ಇವನಿಗೆ.






ನಮ್ಮ ನಮ್ಮ ಶಿಶುತನ, ಬಾಲ್ಯವನ್ನು ಬದುಕಿದವರು ನಾವೇ ಆದರೂ ಏನೇನೂ ನೆನಪಿರದ ಆದರೆ ನೆನಪಿನಲ್ಲಿಟ್ಟುಕೊಳ್ಳಲೇ ಬೇಕಾದ ಎಷ್ಟೋ ಘಟನೆಗಳನ್ನು ಅಹನ್ ದಿನ ನಿತ್ಯ ತೋರಿಸುತ್ತಲಿರುತ್ತಾನೆ.
ಕಕ್ಕ ಮಾಡಿಕೊಂಡು ಕಲೆದು ಅದನ್ನೇ ಬಾಯಿಗಿಟ್ಟುಕೊಂಡು ವ್ಯಾ ಎಂದಾಗ "ಅಯ್ಯೋ ನಾವೂ ಹೀಗೇ ಮಾಡಿದ್ದೆವಾ"
ಅಂತ ನಗುವೂ ಬರುತ್ತದೆ.





ಸ್ಕೂಲ್ ಗೆ ಹೋಗೋಕೆ ಈವಾಗ್ಲಿಂದಾನೆ ರಿಹರ್ಸಲ್ ನಡ್ಸಿದಾನೆ ಅಹನ್..






ಅಹನ್ ಕಣ್ಣಾಮುಚ್ಚಾಲೆ ಆಡೋದು ಹೀಗೆ...






ಅಹನ್ ನೀನು ಚೈತನ್ಯದ ಚಿಲುಮೆ..

ಓ ಅಹನ್, ನೀನು ನನಗೆ ಉಣ್ಣಿಸುತ್ತಿರುವ ತಾಯ್ತನದ ಸುಖಕ್ಕೆ ನಾನು ಚಿರಋಣಿ ಕಣೋ...

Monday, September 6, 2010

ಶಿಕ್ಷಕರ ದಿನಾಚರಣೆಯ ಶುಭಾಷಯಗಳು

ಗುರು ಗೋವಿಂದ್ ದೋಊ ಖಡೈ ಖಾಕೆ ಲಾಗೂ ಪಾಯ್
ಬಲಹಾರೀ ಗುರು ಅಪನೆ ಗೋವಿಂದ್ ದಿಯೆ ಬತಾಯ್

(ಗುರು ಮತ್ತು ಗೋವಿಂದರಿಬ್ಬರೂ (ಎದುರಲ್ಲಿ) ನಿಂತಿದ್ದರೆ ಯಾರ ಚರಣಕ್ಕೆ(ಮೊದಲು) ಎರಗಲಿ,
ಗೋವಿಂದನಿರುವನ್ನು ಗುರುವೆ ಅಲ್ಲವೇ ತೋರಿಸಿದ್ದು..)
ನಾನು 7ನೇ ತರಗತಿಯಲ್ಲಿ ಓದಿದ ದೋಹೆ ಇದು. ತುಳಸಿದಾಸರದ್ದು ಎಂಬ ನೆನಪು..

ಹಿಂದೊಂದು ಕಾಲದಲ್ಲಿ ಗುರುವೆಂದರೆ ಸರ್ವಸ್ವ ಎಂದು ನಂಬಿ ಪೂಜಿಸಿಕೊಳ್ಳುತ್ತಿದ್ದ ಗುರು ಈಗ ಎಲ್ಲರ ಬಾಯಲ್ಲೂ ಮಾಸ್ತರನಾಗಿ (ಕೇವಲ) ಆಗಿದ್ದನೆ. ತಿಂಗಳ ಸಂಬಳಕ್ಕೆ ಗಿಂಬಳದ ರುಚಿಯರಿಯದ ಮಾಸ್ತರ್ರು ಕಾಯುವುದು ಧಗಿಸುವ ಬಿಸಿಲಲ್ಲಿ ಸಮುದ್ರ ತೀರದಲ್ಲಿ ನಿಂತು ಸಾಗರದ ಸೊಬಗನ್ನು ಸವಿಯಲಾಗದೆ ಕಾಲ್ಕೆಳಗಿನ ಮಳಲ(ಹೊಯ್ಗೆ) ಝಳಕ್ಕೆ ಥಕಧಿಮಿಸುವಂತಿರುತ್ತದೆ. ಒಮ್ಮೊಮ್ಮೆಯಂತೂ ೫-೬ ತಿಂಗಳು ಸಂಬಳವೆ ಆಗೊಲ್ಲ ಇವರಿಗೆ.. ಇದರೊಂದಿಗೆ "ಹೋಯ್ ಮಾಸ್ತರ್ರೋ" ಎಂದು ಪ್ರೀತಿಯಿಂದ ಕರೆದಂತೆ ಕಂಡರೂ ಹಿಂಬದಿಯಿಂದ "ಅವ ಎಂತಾ ಮಾಸ್ತರ್ನೋ" ಎಂದು ಹೀಗಳೆವ ಪಾಲಕರು!!

ಇವರು ವಾರ್ಷಿಕ ಪರೀಕ್ಷೆಯ ಪೇಪರ್ರು ತಿದ್ದುವುದು ಹೇಗೆ ಗೊತ್ತಾ?? ರೆಡ್ ಇಂಕ್ ಜೊತೆ ಒಂದು ಬ್ಲೂ ಇಂಕ್ ಪೆನ್ ಇಟ್ಕೊಂಡು!ತರಗತಿಯ ೪-೫ ಪೇಪರ್ರನ್ನುಳಿದು ಬಾಕಿ ಎಲ್ಲರ ಪೇಪರ್ರನ್ನು ಮಾಸ್ತರರೇ ಬರೆದು ರೈಟ್ ಹಾಕಿ ಮಾರ್ಕ್ಸ್ ಕೊಟ್ಟು ಪಾಸ್ ಮಾಡುವುದು ವಾಡಿಕೆಯಾಗಿಬಿಟ್ಟಿದೆ..ಕಲಿಸುವಾತ ಕಲಿಯುವಾತ ತೇರ್ಗಡೆಯಾಗುವುದು ಎಲ್ಲವೂ ಮಾಸ್ತರರೇ,, ಆದರೆ ಮಕ್ಕಳ ಹೆಸರಲ್ಲಿ.

ನನ್ನ ತಂದೆ ತಾಯಿ ಇಬ್ಬರೂ ಶಿಕ್ಷಕ/ಕಿ ಯರೆ. ಅವರಿಂದ ಕಲಿತದ್ದು ನಾನು ಬಹಳ ಉಂಟು. ನನ್ನ ಡಿಗ್ರೀ ವರೆಗಿನ ವಿದ್ಯಾಭ್ಯಾಸವೆಲ್ಲ ಘಟ್ಟದ ಮೇಲೆಯೇ ಆದದ್ದು(ಮಂಚೀಕೇರಿ, ಸಿದ್ದಾಪುರ). ಆಗಂತೂ ಘಟ್ಟದ ಕೆಳಗಿನವರು(ಕುಮಟ, ಕಾರವಾರ, ಭಟ್ಕಳ, ಅಂಕೋಲಾ, ಹೊನ್ನಾವರದವರು) ಶಿಕ್ಷಕರಾಗಿ ಘಟ್ಟದ ಮೇಲಿನ(ಶಿರಸಿ,ಸಿದ್ದಾಪುರ,ಯಲ್ಲಾಪುರ,ಮುಂಡಗೋಡು,ಹಳಿಯಾಳ, ಸುಪ) ಊರುಗಳಿಗೆ ಹೋಗುವುದು ಅತಿಯೇ ಇತ್ತು. ಘಟ್ಟದ ಮೇಲಿನ ತೋಟಸ್ತ ಜನರಿಗೆ ಶಿಕ್ಷಕ ವೃತ್ತಿ ಎಂದರೆ ಆಗ ಬಹಳ ತಾತ್ಸಾರ.
"ಮಾಸ್ತರಂಗೆ ತೋಟ ಗೀಟ ಇದ್ದಡ? ಉಣ್ಣಲ್ಲೆ ತಿನ್ನಲ್ಲೆ ಸಾಲ್ತಡ??",, ಬಿಸಿ ಊಟದ ಕಾರ್ಯಕ್ರಮ ಶುರು ಆದಾಗಿನಿಂದ "ನಿನ್ನಪ್ಪ ಮಾಸ್ತರ್ನಲೆ,, ಬಿಸಿ ಊಟದ ಅಕ್ಕಿ ಮನೆಗೂ ಬತ್ತಾ??",, "ಅಕ್ಕೋರು ಮಾಸ್ತರ್ರಿಗೆ ಆರಾಮು, ಬಿಸಿ ಊಟ ಸಿಗ್ತು, ಅಕ್ಕಿ ಗಿಕ್ಕಿ ತರ ಹೇಳೇ ಇಲ್ಲೆ." ಎಂದೆಲ್ಲ ಕೇವಲವಾಗಿ ಮಾತನಾಡಿದಾಗ ನಮಗೆ ಆಗುತ್ತಿದ್ದ ನೋವು, ಬೇಸರ ಹೇಳ ತೀರದು. ಈಗ ಅಪ್ಪ ಆಯಿಗೇ ಗುರುತು ಸಿಗದಂತೆ ಬೆಳೆದ ಡಾಕ್ಟರ್, ಇಂಜಿನೀಯರ್, IPS, IAS ಆಫೀಸರ್ ಗಳು, ಜವಾನ ಮತ್ತು ಲೆಕ್ಚರರ್, ಶಾಲೆ ಮಾಸ್ತರ್ ಗಳು ನಮ್ಮ ಮನೆಗೆ ಬಂದು ತಮ್ಮ ವಿದ್ಯಾರ್ಥಿಗಳೆಂದು
ಪರಿಚಯ ಹೇಳಿಕೊಂಡು ಕಾಲಿಗೆರಗಿದಾಗ ಆಗ ಹೀಯಾಳಿಸಿಕೊಂಡ ನೋವು ಚೂರು ಮನಸ್ಸಿಗೆ ಬರಲ್ಲ. ಇದಕ್ಕಿಂತಲೂ ದೊಡ್ಡ ಕೊಡುಗೆಯನ್ನ ಶಿಕ್ಷಕರಾಗಿ ಅವರು ಪಡೆಯಲು ಸಾಧ್ಯವಿಲ್ಲ ಎನ್ನಿಸುತ್ತದೆ.. ಮೊದಲ ಗುರುವಾದ ಆಯಿಗೆ, ಅಪ್ಪನಿಗೆ ಮತ್ತು ನನ್ನ ಕನ್ನಡ ಶಾಲೆಯ ಮತ್ತು ಹೈಸ್ಕೂಲಿನ ಎಲ್ಲಾ ಸರ್ ಮತ್ತು ಬಾಯರ್ರಿಗೆ(ಆಗ ನಾವು ಬಾಯರ್ರೆ ಅಂತಲೇ ಕರೆಯುತ್ತಿದ್ದಿದ್ದು.), ಶಿಕ್ಷಕರ ದಿನಾಚರಣೆಯ ಶುಭಾಷಯಗಳು (Belated Wishes).

ಕುಮಟೆಯ ಬಾಳಿಗಾ ಕಾಲೇಜಿನ ನನ್ನ ನೆಚ್ಚಿನ ಡಾ!ಮಹೇಶ್ ಅಡಕೋಳಿಯವರಿಗೆ, ಸಿದ್ದಾಪುರದ 65ರ ಇಳಿವಯಸ್ಸಲ್ಲೂ ಬೆಳಿಗ್ಗೆ ೪ಗಂಟೆಗೇ ಎದ್ದು ಓದಲು ಕುಳ್ಳುವ ನನ್ನ ನೆಚ್ಚಿನ ಲೇಖಕರೂ ಆದ ಆರ್.ಪಿ.ಹೆಗಡೆಯವರಿಗೆ, ಧಾರವಾಡ ವಿಶ್ವ ವಿದ್ಯಾಲಯದ ಅರ್ಥ ಶಾಸ್ತ್ರ ವಿಭಾಗದ ಪುಷ್ಪಾ ಸವದತ್ತಿ ಹಾಗೂ ಬಾಗಲಕೋಟಿ ಸರ್ ಅವರಿಗೂ ಮತ್ತು ನನ್ನ ಜೀವನದ ಪುಸ್ತಕದಲ್ಲಿ ಸುಂದರ ಪುಟಗಳಾಗಿ ಬಂದ ನನ್ನ ಎಲ್ಲಾ ಶಿಕ್ಷಕರಿಗೂ ಶಿಕ್ಷಕ ದಿನಾಚರಣೆಯ ಶುಭಾಷಯಗಳು..

ಮತ್ತು ಮಕ್ಕಳ ತಂದೆ ತಾಯಿಗಳಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ ನಮ್ಮ ಹುದ್ದೆ ಎಷ್ಟೇ ಶ್ರೇಷ್ಟವಿರಲಿ, ನಾವು ಎಷ್ಟೇ ಮೇಲ್ಮಟ್ಟದಲ್ಲಿರಲಿ ಶಿಕ್ಷಕ/ಕಿಯರನ್ನು ಅವಹೇಳನ ಮಾಡದೆ ಅವರನ್ನು ಗೌರವಿಸುವ ಸೌಜನ್ಯತೆ ನಮ್ಮಲ್ಲಿರಲಿ,, ಯಾಕೆಂದರೆ ನಮ್ಮ ಭಾವನೆ ವಿಚಾರಗಳು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆಯಲ್ಲವೇ! ಮಕ್ಕಳಿಗೆ ಎಲ್ಲರನ್ನು ಗೌರವಿಸುವ ಮತ್ತು ಪ್ರೀತಿಸುವ ವಿನಯವಂತಿಕೆ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ. ಯಾಕೆಂದರೆ ಅವಿನಯದಿಂದ ವಿದ್ಯೆಯು ಶೋಭಿಸಲ್ಪಡುವುದಿಲ್ಲ..

ಈ ಕೆಳಗಿನ ಸಾಲುಗಳು ಮೊದಲೇ ಪೋಸ್ಟ್ ಮಾಡಿದ್ದಾದರೂ ಶಿಕ್ಷಕರ ನೆನಪಲ್ಲಿ ಇನ್ನೊಮ್ಮೆ ತಮ್ಮ ಮುಂದಿಡುತ್ತಿದ್ದೇನೆ.



ನಮ್ಮ ಅಕ್ಕೋರು ಮಾಸ್ತರ್ರಿಗೆ...
(ಪ್ರೀತಿಯಿಂದ)

ಹದಿನೇಳ ಏಳಲೆಗೇ ನಿಂತ ಮಗ್ಗಿಯ ಗಾಡಿ,
ಮೆಲಕ್ಕೇರದ ಅಣ್ಣನು ಮಾಡಿದ ಗಾಳಿಪಟ,
ಮುಂದೆ ಸಾಗದ ನನ್ನ ನವಿಲು
ನಮ್ಮ ಮಾಸ್ತರ್ರರ ಬೆತ್ತದೇಟಿಗೂ ಬಗ್ಗದೆ
ಹರಿದ ಖಾಕಿ ಚದ್ದಿಯನ್ನಷ್ಟೆ
ಒದ್ದೆ ಮಾಡುತ್ತಿದ್ದರೂ
ಅವರ ಬಾಯಿಪಾಠದ ಕಾಟ ತಪ್ಪುತ್ತಿರಲಿಲ್ಲ.

ಪ್ರತಿ ವರ್ಷವೂ
ನಾ ಕಂಡ ಮಳೆಗಾಲ, ನಾನು ಮಂತ್ರಿ ಆದರೆ,
ಪ್ರವಾಸ ಕಥನ, ಹಿಡಿಯ ಆತ್ಮ ಚರಿತ್ರೆ
ನನ್ನ ಗುರಿ.. ಇಂತಹ ನಿಬಂಧಗಳನ್ನೆ ಬರೆದೂ ಬರೆದು
ನಾವು ದಂಗಾದರೂ ನಮ್ಮ ಶರಾ ಮಾತ್ರ
ಆರಕ್ಕೇರಲಿಲ್ಲ,,,,, ಮೂರಕ್ಕೂ ಏರಲಿಲ್ಲ,
ಅವರೂ ಹೆದರದೆ ಅಪ್ಪನನ್ನೇ ಕರೆಸಿ ಬಿಸಿ ಹಚ್ಚಿ
ಗೆದ್ದಂತೆ ನಗುತ್ತಿದ್ದರು.

ದಿನಚರಿ ಪುಸ್ತಕದಲ್ಲಷ್ಟೆ
ದಿನಾಲು ಕಸಗುಡಿಸುತ್ತೇವೆಂದು ಗೊತ್ತಿದ್ದರೂ
ಒಂದಿನವೂ ಬಿಡದೆ ದಿನಚರಿ ಓದಿ
ಸಹಿ ಹಾಕುವ ಅಕ್ಕೋರಿಗೂ ಗೊತ್ತಿತ್ತು
ಶುಚಿ ಎಂದರೆ ನಮಗೆ ಅಲರ್ಜಿ ಎಂದು.
ಹಾಗಂತ ಪ್ರರ್ಥನೆಯಾದ ಮೇಲೆ ಸತ್ಯವೇ ದೇವರು,
ತಾಯಿಗಿಂತ..; ಕೈ ಕೆಸರಾದರೆ..ಅಂತೆಲ್ಲಾ ಒದರಿಸಿ
ಸಿಂಗನ ಉಗುರು, ಹಳದಿ ಹಲ್ಲನ್ನು ನೋಡಿ
ಕಿವಿ ಹಿಂಡುವುದನ್ನೆಂದೂ ಮರೆಯುತ್ತಿರಲಿಲ್ಲ.

ಪರೀಕ್ಷೆಯ ಮಾರ್ಕ್ಸು ಬಂದಾಗಲೆಲ್ಲ
ನಮ್ಮದು ಒಂದೇ ಗೋಳು
ಅಕ್ಕೋರು ಮಾಸ್ತರ್ರು ಸರಿ ಪಾಠ ಮಾಡಲ್ಲ,,
ಹೀಗೆ ಆಗುತ್ತೆ ಅಂತ ನಮ್ಮ ಅಕ್ಕೋರು ಮಾಸ್ತರ್ರಿಗೂ ಗೊತ್ತು!!
ಕೋಣಗಳ ಮುಂದೆ ಕಿನ್ನರಿ ಊದಿ
ರೂಢಿ ಆದ ಕಿನ್ನರ ಜೊಗಿಯ ವಂಶಸ್ಥರಂತೆ
ಕಾಯಕದಲ್ಲಿ ಕೈಲಾಸ ಕಾಣುವ ಸಹನಾ ಜೀವಿಗಳು
ನಮ್ಮ ಅಕ್ಕೋರು ಮಾಸ್ತರ್ರು

ಗೊಂಡೆಯೋ, ಗುಲಾಬಿ, ದಾಸಾಳವೋ
ತಂದ ಹೂವೆಲ್ಲ ಪ್ರೀತಿಯಿಂದ
ಅಕ್ಕೊರ ಮುಡಿಗೆ
ಬೆಟ್ಟದ ನೆಲ್ಲಿಕಾಯೆಲ್ಲ
ನಮ್ಮೊಲುಮೆಯ ಮಾಸ್ತರ್ರ ಪಾಲಿಗೆ.

ಅಕ್ಕೋರು ಮಾಸ್ತರ್ರ ಮೇಲಿನ ಭಯ, ಭಕ್ತಿ, ಪ್ರೀತಿ
ಮತ್ಯಾವ ಸರ್, ಮೇಡಮ್
ಯಾವ ಲೆಕ್ಚರ್ರರ ಮೇಲೂ(ಲೆಕ್ಚರಿಕೆಯ ಮೇಲೂ)
ಬಂದಿಲ್ಲ.
ಜೀವನದಲ್ಲೊಮ್ಮೆ ಕಾಣುವ ಸರ್ವಜ್ಞರೇ
ನಮ್ಮ ಅಕ್ಕೋರು ಮಾಸ್ತರ್ರು ಎಂದರೂ ತಪ್ಪಿಲ್ಲ

(ಏಕೆಂದರೆ ಕಡೆಗೆಲ್ಲಾ ನಮ್ಮನ್ನುಳಿದು ನಮಗೆ ಇನ್ಯಾರೂ ಸರ್ವಜ್ಞರಂತೆ ಕಾಣಲ್ಲ)

Tuesday, August 31, 2010

ಸಾಗರದ ಹನಿಗಳು.



1.ತೆರೆ(ಅಲೆ) ಮರೆಯ ಮಾತು

ಅಲೆಗಳ ಬಳುಕಲ್ಲಿ
ಮಲೆಗಳ ನೆನಪಲ್ಲಿ
ತನದೇ ಹೆಜ್ಜೆಯನರಸುವ
ನದಿಗಳ ಕಳವಳ, ಕಲರವವೆಲ್ಲ
ಭೋರ್ಗರೆದು
ನೊರೆ ನೊರೆಯ ತೆರೆಯಾಗಿ
ಹಿಂದೆ ಮುಂದಾಡಿ ಸ್ತಬ್ಧವಾಗುವವು.



2.ಸಂಗಮ

ನದಿಯು ತನ್ನ ಸಿಹಿಯ ನೀಡಿ
ಕಡಲ ಉಪ್ಪ ತಾನು ಹೀರಿ
ಒಬ್ಬರಲ್ಲೊಬ್ಬರು ಅಭೇದ್ಯವಾಗಿ ಕರಡಿ
ಪ್ರಕೃತಿಯ ಲೇಣ-ದೇಣ
ವ್ಯವಹಾರದ ಕೂಡಿಕೆಯ ಬಿಂದುವಲ್ಲಿ
ಸಂಧಿಸುತ್ತಾರೆ.


3.ಬೆಸ್ತ

ಹೆಣೆದ
ಬಲೆಯಲ್ಲಿ
ಬದುಕ ಹಿಡಿವಾತ..

Tuesday, July 27, 2010

ಗಜಲ್

ಗಜಲ್


ಅಪನೆ ಹಿ ದಿಲ್ ನೆ ಹಂ ಸೆ ಬಗಾವತ್ ಕಿಯಾ
ಬಿನಾ ಇಜಾಜತ್ ಉನ್ ಸೆ ಪ್ಯಾರ್ ಕಿಯಾ
ಕೋಸೆ ತೊ ಕಿಸೆ ಕೋಸೆ ಖಡೆ ಹಂ ತೊ
ಜಹರೀಲಿ ಹುಸ್ನ್ ನೆ ಹಮಾರೀ ಮಾತಮ್ ಕಿಯಾ


ಬಡತೀ ರಾತ್ ಮೆ ಖುಲೆ ಮೈಖಾನೆ ಕಹಾಂ ಡೂಂಢೆ
ದರ್ ದರ್ ಫಿರ್ ಕೆ ಆತೇ ಥೆ ಕದಮೋ ತಲೆ ತೇರೆ
ತೇರೀ ನಶೀಲಿ ಆಂಖೆ ಪಿಲಾತೀ ಥಿ ಇಸ್ ಕದರ್ ಜಾಮ್ ಹಂ ಕೊ
ಶರಾಬೀ ಬನಾಕೆ ಛೋಡಾ ಹೈ ತೂನೆ, ಐಸಾ ಹಂ ನೆ ಕ್ಯಾ ಕಿಯಾ


ಮುಸ್ಕುರಾನೆ ಸೆ ಪೆಹಲೆ ಸೋಚ್ ಲಿಯಾ ಹೋತಾ
ದಿಲ್ ಜಲಾನೇ ಸೆ ಪೆಹಲೆ ಪೂಛ್ ಲಿಯಾ ಹೋತಾ
ಅಶ್ಕೋಂಕೆ ಆಗ್ ಜೋ ಸೀನೇ ಮೆ ಜಲ್ ರಹೀ ಹೈ
ಸುಲಝತೆ ಅರಮಾನೋ ಸೆ ಖಿಲವಾಡ್ ಆಖಿರ್ ಕ್ಯೋ ಕಿಯಾ


ಅಂಧೇರೆ ಕೆ ಎಹಸಾನ್ ಮೆ ಹಿ ರೆಹನೇದೆ ಹಮೆ ಸಾಗರಿ,
ಸಚ್ಚೆ ಪ್ಯಾರ್ ಕಾ ಖೂಬ್ ಇನಾಮ್ ಮಿಲಾ
ಯೂ ದಿಲ್ ತೊ ಹಜಾರೋ ಲಗಾತೆ ಹೋಂಗೆ ಉನ್ ಸೆ
ಬದನಸೀಬೊ ವಾಲೊ ಮೆ ಓ ಹಮೆ ಭಿ ಶಾಮಿಲ್ ಕಿಯಾ


ಗಜಲ್ ಎಂದರೆ..
"ಸ್ತ್ರೀಯೊಂದಿಗಿನ ಸಂಭಾಷಣೆ" ಎಂದು. ಗಜಲ್ ನಲ್ಲಿರುವ ಪ್ರತಿಯೊಂದು ಶೇರ್(ಎರಡು ಅಥವಾ ನಾಲ್ಕು ಸಾಲಿನ ಗುಂಪು)ತನ್ನಷ್ಟಕ್ಕೆ ತಾನೇ ಪರಿಪೂರ್ಣವಿದ್ದು, ಅದು ಹಿಂದಿನ ಇಲ್ಲವೇ ಮುಂದಿನ ಶೇರ್ ನೊಂದಿಗೆ ಯಾವುದೇ ತರದ ಸಂಬಂಧವನ್ನು ಇಟ್ಟುಕೊಂಡಿರುವುದಿಲ್ಲ. ಅವೆಲ್ಲ ಯಾವ ರೀತಿಯಿಂದಲಾದರೂ ಪರಸ್ಪರ ಹೊಂದಿಕೊಂಡಿದ್ದರೆ ಅದು ಕೇವಲ ಅಂತ್ಯಪ್ರಾಸದ ಮೂಲಕ.
ತಾಂತ್ರಿಕವಾಗಿ ಹೆಳಬೇಕೆಂದರೆ ಗಜಲ್ ನಲ್ಲಿ(ಎರಡು ಸಾಲಿನ ಗಜಲ್ ನಲ್ಲಿ) ಮೊದಲಿನ ಎರಡು ಪಂಕ್ತಿಗಳು ಸಮಪ್ರಾಸವುಳ್ಳದ್ದಾಗಿದ್ದು, ಅವು ಆರಂಭವನ್ನು ಸೂಚಿಸುವುದರಿಂದ ಆ ಪಂಕ್ತಿ ಗುಂಪಿಗೆ ಅಥವಾ ಮೊದಲಿನ ಶೇರ್ ಗೆ "ಮತ್ಲ ಅ" ಎನ್ನುತ್ತಾರೆ.ಮುಂದಿನ ಶೇರ್ ಗಳ ಪ್ರತಿ ಎರಡನೆಯ ಪಂಕ್ತಿಯು ಮೊದಲಿನ ಶೇರ್ ನ ಪ್ರಾಸವನ್ನು ಹೊಂದಿರುತ್ತದೆ. ಕೊನೆಯ ಶೇರ್ ಗಜಲ್ ನ ಮುಕ್ತಾಯವನ್ನು ಸೂಚಿಸುವುದರಿಂದ ಅದಕ್ಕೆ"ಮಕ್ತ ಅ" ಎನ್ನುತ್ತಾರೆ. ಗಜಲ್ ಕಾರನು ಮಕ್ತ ಅ ದಲ್ಲಿ ತನ್ನ ಹೆಸರನ್ನು ಇಲ್ಲವೆ ಕಾವ್ಯನಾಮವನ್ನು ಉಪಯೋಗಿಸುವುದು ಸರ್ವೇಸಾಮಾನ್ಯವಾಗಿದೆ.


ಗಜಲ್ ಬರೆಯುವ ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ಇಲ್ಲಿ ವ್ಯಾಕರಣದ ಇಲ್ಲವೆ ಗಜಲ್ ನ ಯಾವುದೇ ತಾಂತ್ರಿಕ ದೋಷವಿದ್ದರೂ ದಯವಿಟ್ಟು ತಿಳಿಸಿ, ತಿದ್ದುಕೊಳ್ಳಲು ಬಯಸುತ್ತೇನೆ. ಹಿಂದಿಯಲ್ಲಿ ಸರಿಯಾಗಿ type ಮಾಡಲು ತೊಂದರೆ ಎನ್ನಿಸಿ(ಉದಾ: ಇಜಾಜತ್ ಅನ್ನು ಹಿಂದಿಯಲ್ಲಿ इजाजत ಬರೆಯಲು ज ಕೆಳಗೆ ಒಂದು ಚುಕ್ಕೆಯ ಅವಶ್ಯಕತೆ ಇದ್ದು ಅಂಥವನ್ನೆಲ್ಲ ಹೇಗೆ type ಮಾಡುವುದು ಎಂದು ತಿಳಿಯದೆ ಕನ್ನಡ ಲಿಪಿಯನ್ನೇ ಬಳಸಿದ್ದೇನೆ, ಮತ್ತು ಇಂತಹ ತೊಂದರೆಯನ್ನು ಕನ್ನಡ ಲಿಪಿ ಬಳಸುವಾಗಲೂ ಕಂಡಿದ್ದೇನೆ)
ಧನ್ಯವಾದಗಳು
.

Friday, July 9, 2010

ಸಾಗರಿಯ ಕವನಗಳು

ಕಾಮ(ದ) ದಾಹ..

ಕಾಡಿನ ಸಂದು ಗೊಂದುಗಳಲ್ಲಿ
ಮಿಣ್ಣನವಿತು ಕುಳಿತ
ಕಾಮ
ಮೋಜೆನಿಸಿ
ಕಪ್ಪೆಯಂತೆ ಜಿಗಿದು
ಆಗಸಕ್ಕೇರಿ ಸ್ವರ್ಗ ಸೇರಿತು.

ಕಣ್ಣಿಟ್ಟಲ್ಲೆಲ್ಲಾ ಸಿಂಗಾರ ಬಂಗಾರ
ವರ್ಷವಿಡೀ ವಸಂತ, ಎಂದೂ
ಮಾಸದ ವಸಂತ
ಚೆಲ್ಲಾಡುವ ಹರೆಯ
ಢೊಲು, ಸಂಗೀತ, ಕುಣಿತ
ಸ್ವರ್ಗದವರೆಲ್ಲಾ ಮೀಯುವುದು
ಮದಿರೆಯಲ್ಲೇ ಎಂದು
ಎಂದೋ ಕೇಳಿದ್ದು
ಇಂದು ಕಂಡಂತಾಗಿತ್ತು..,

ಜೀವನ ಪರ್ಯಂತ
ಇಲ್ಲೇ ಇದ್ದು ಬಿಡಬೇಕೆಂದುಕೊಂಡ
ಮರುದಿನವೇ
ಕಾಮ
ಅಲ್ಲಿಯವರ ತೃಪ್ತ ಕಂಗಳ ಕಂಡು
ಕಂಗೆಟ್ಟು ಬರುಡಾಗಿ
ತನ್ನಿರುವಿಗಿಲ್ಯಾವ ಬೆಲೆಯಿಲ್ಲ
ಕಾಮ ಪ್ರೇಮದಲ್ಲಿವರು
ಸಂತುಷ್ಟರೆಂದರಿತು
ದಾರಿ ಕಾಣದಂತಾಗಿ
ಭೂಮಿಗುದುರಿತು..

ಕಂಡಿದ್ದೆನಿಲ್ಲಿ..
ಪ್ರತಿಯೊಬ್ಬರೂ
ದಾಹದಲ್ಲುರಿಯುತ್ತಿರುವ
ಒಂದೊಂದು ಚಿತೆಗಳು,,
ತೀರದ ಕಾಮ
-ದ ಕಡಲಲ್ಲಿ ಮುಳುಗಿದ
ಪ್ರತಿ ದೇಹವೂ ತಣಿಸಲಾರದ
ತುಡಿತದಿಂದ ತಪಿಸುತ್ತಿತ್ತು.

ಕಾಪುರುಷರ ಲೋಕದಲ್ಲಿ
ಕಾಮಕ್ಕೆಲ್ಲಿದೆ ಬಿಡುವು
ದಣಿದಷ್ಟೂ ಖುಶಿ ಕೊಡುವ
ಆಟವಲ್ಲವೇ ಇದು!!

ಹೊಟ್ಟೆಯ ಹಸಿವು, ಕಾಮ-ಮೋಹ
ಎಂದು ತೀರಿದ್ದಿದೆ,
ಪಡೆದಷ್ಟೂ ಬೇಕೆನಿಸಿ ಸುಖಿಸಿ
ಮತ್ತೆ ಹುಡುಕುವ ಚಪಲರ ದಂಡು ಕಂಡು
ಕಾಡು-ಮೇಡು, ಸ್ವರ್ಗದಲ್ಲೆಲ್ಲೂ ಇರದ
ದಾಹದ
ರೌರವವ ನೋಡಿ
ಹಿರಿಮೆಗೊಂಡು
ಕಾಮ,,,
"ಸ್ವರ್ಗಕ್ಕೆ
ಮತ್ತೊಮ್ಮೆ ಕಿಚ್ಚು ಹಚ್ಚೆಂದಿತು.."

Wednesday, June 23, 2010

ನೆರೆ-ಹೊರೆ(ಸ್ವಲ್ಪ ಜಾಸ್ತಿಯೇ ಹೊರೆ!!)

ನೆರಮನೆ


ನೆರಮನೆಯ
ಕಾಂಪೌಂಡು
ನಮ್ಮ ಮನೆಯ ಕಸದ ತೊಟ್ಟಿ,
ಯಾರೂ
ಕಣ್ಣಿಗೆ ಬೀಳದಿದ್ದಾಗ
ಉದುರಿದ ಒಣ ಎಲೆ, ಹಕ್ಕಿ ಪಿಷ್ಟಿ,
ಕಿಗ್ಗು ತೆಗೆದ ಹತ್ತಿ ಉಂಡೆ
ಚಾಕಲೇಟು ಸಿಪ್ಪೆ, ತರಕಾರಿ ಸೊಪ್ಪೆ
ಎಲ್ಲವನ್ನೂ
ಕಣ್ಣುಮುಚ್ಚಿ ಎಸೆಯಬಹುದಾದ
ಸುರಕ್ಷಿತ ಜಾಗ..

ನೆರಮನೆ,,
ನನ್ನವಳ ಕೋಪಗೃಹ
-ಅಡಿಗೆ ಮನೆಗೆ ಕಾಲಿಡದ ಹಠ ಹೂಡಿ
ಬಿಮ್ಮನೆ ಬಾಗಿಲೆರಸಿ
ಸುಲಭವಾಗಿ ನುಸುಳಿಕೊಳ್ಳಲು ಸಿಗುವ
ಅಡಗು ತಾಣ
ಒಂದೇ ಮಾತಲ್ಲಿಡುವುದಾದರೆ
ನೆರಮನೆಯಲ್ಲಿ ನನ್ನವಳ
ಉಪವಾಸ ಸತ್ಯಾಗ್ರಹ,,
ವ್ಯತ್ಯಾಸವಿಷ್ಟೇ
ಉಪವಾಸ ನನಗೆ
ಸತ್ಯಾಗ್ರಹಅವಳಿಗೆ.

ನೆರಮನೆ,,
ಹರಟೆ ಹೊಡೆಯಲು ಹವಣಿಸಿ
ಹಸಿದ
ಅತೃಪ್ತ ಆತ್ಮಗಳಿಗೆ
ದಿವ್ಯ ಸನ್ನಿಧಿ.
ತೂತಾಗದ ಕಿವಿ, ಒಡೆಯದ ಬಾಯಿ
ಹೊಂದಿರುವವರ
ಅತ್ಯದ್ಭುತ ಲೋಕ..

ಹ್ಹೆ,,ಹ್ಹೀ ನಮ್ಮದೂ ಅದೇ ಕುಟುಂಬ..
?
?
ನಮ್ಮನೆಯೂ ಇಲ್ಲೊಬ್ಬರ
ನೆರಮನೆಯೇ ಸರಿ..!

ವಿಗ್ರಹವಾಕ್ಯ ಬಿಡಿಸಿ ಸಮಾಸ ಹೆಸರಿಸಿದರೆ
ನೆರ(ರೆ)ಮನೆ= ಈಗಲೋ ಆಗಲೋ ಮುಳುಗಿಸುವ(ಮುಳುಗಿಸಲು ಹೊಂಚಿರುವ) ನೆರೆಯಲ್ಲಿರುವ ಮನೆ
ಷಷ್ಟಿ ತತ್ಪುರುಷ ಸಮಾಸ.

(ವ್ಯಾಕರಣಕಾರರ ಕ್ಷಮೆಕೋರಿ.)

Wednesday, June 9, 2010

ನನ್ನ ಪುಂಗಿ

ಹೊ(ತೆ)ಗಳಿಕೊಳ್ಳುವವರೇ ನಿಮಗೊಂದು ಕಿವಿ ಮಾತು..



ಹಿಂದೊಂದು ಕಾಲದಲ್ಲಿ ಎಂದರೆ ತುಂಬಾ ಹಿಂದೆ ಹೋಗಬೇಕಿಲ್ಲ,,, ಈಗ್ಗೆ ಸುಮಾರು ೭-೮ (ಅಥವಾ ೪-೫)ವರ್ಷಗಳ ಹಿಂದೆ ಹೇಳಿಕೊಳ್ಳಲೂ ಮುಜುಗರಪಡುವ ಸಂಗತಿ ಈಗ ಹೆಮ್ಮೆಯ ವಿಷಯವಾಗಿದೆ ಎಂದರೆ ನಂಬ್ತೀರಾ???

ಕಾಲೇಜು ಹುಡುಗ/ಹುಡುಗಿಗೆ boy friend/girl friend ಇದ್ದಾನೆ/ಇದ್ದಾಳೆ ಅಂತಾದ್ರೆ ಆ ಕಾಲದಲ್ಲಿ ಹೆತ್ತವರು ತಲೆ ತಗ್ಗಿಸಿಯೆ ಓಡಾಡ್ತಿದ್ರು. ಈಗ ಅದು ಘನತೆಯ ವಿಷಯವಾಗಿದೆ. counts ಹೆಚ್ಚಿದಂತೆ ಘನತೆಯೂ ಹೆಚ್ಚು!! drinksನಂತಹ ಚಟಗಳ ವಿಷಯದಲ್ಲೂ ಹಾಗೆಯೇ.. ಪಾರ್ಟಿಯಲ್ಲಿ ಶರಾಬೀ ಝಲಕ್, ಹುಡುಗಿಯರ ಬಳುಕು ಇಲ್ಲದಿದ್ದರೆ ಅಂತಹ ಪಾರ್ಟಿಗಳಿಗೆ ಕಿಮ್ಮತ್ತೇ ಇಲ್ಲ. ಪಬ್ಬುಗಳಲ್ಲಿ, ಪಾರ್ಕುಗಳಲ್ಲಿ open romance ಗಳಿಗೂ ಈಗ ಭಾರೀ ಬೆಲೆ ಬಂದಿದೆ. ಇವೆಲ್ಲ ಇನ್ನು ಮುಂದೆ ಭಾರತೀಯ ಸಂಸ್ಕೃತಿಯಲ್ಲಾಗಬೇಕಾದ ಮಹತ್ತರ ammendment ಏನೋ!!!

ಹಮ್.. ನಾನೀಗ ಹೇಳಲು ಹೊರಟಿದ್ದು ಇದಲ್ಲ. ಮುಚ್ಚಿಟ್ಟುಕೊಳ್ಳಬೇಕಾದ ವಿಷಯವನ್ನು ಬಾಯ್ಬಿಟ್ಟು ಕೊಚ್ಚಿಕೊಳ್ಳುವ(infact ಕೊಚ್ಚಿಹೋಗುವ) ಮಂದಿಯದ್ದು. ಇದೊಂದು ಹೊಸಾ trend. ಮೇಲ್ವರ್ಗದವರಂತೂ ಬಿಡಿ,, ಮಧ್ಯಮ ಮತ್ತು ಕೆಳವರ್ಗದವರಲ್ಲೂ ಇದು ಈಗಿನ hottest and latest running trend.

ನನ್ನ ಮಗಳಿಗೆ/ತಂಗಿಗೆ/ಮೊಮ್ಮಗಳಿಗೆ ಅಡಿಗೆಯ ಗಂಧಗಾಳಿಯೂ ಇಲ್ಲ(ನನ್ನ ಮಗಳಿಗೆ/ತಂಗಿಗೆ/ಮೊಮ್ಮಗಳಿಗೆ ಅಡಿಗೆಯ ಗಂಧಗಾಳಿನೂ ಇಲ್ಲೆ)

ಮದುವೆ ವಯಸ್ಸಿಗೆ ಬಂದ್ರೂ ಹುಡುಗಿ ಇನ್ನೂ ಅಡಿಗೆ ಮನೆಗೆ ಕಾಲಿಟ್ಟಿಲ್ಲ ಕಣ್ರಿ(ಮದುವೆ ವಯಸ್ಸಿಗೆ ಬಂತಲೆ ಕೂಸು,, ಇನ್ನೂ ಅಡಿಗೆ ಮನೆಗೆ ಹೇಳಿ ಕಾಲಿಟ್ಟಿದ್ದಲ್ಲ ಮಾರಾಯ್ತಿ..)

ಇಷ್ಟು ವರ್ಷ education ಅಂತಾಯ್ತು, ಈವಾಗ jobಊ ಪಾಪ ಅಡಿಗೆ ಕಲಿಯೋಕೆ time ಎಲ್ಲಿದೆ.

ನಾನಿಲ್ಲ ಅಂದ್ರೆ ನನ್ ಮಗಳು ಹಸಿದುಕೊಂಡೆ ಇರ್ತಾಳೆ ಬಿಟ್ರೆ ಅವಳಿಗೆ ಅಡಿಗೆ ಎಲ್ಲಿ ಬರತ್ತೆ ಅಂತ ಮದುಮಗಳ ತಾಯಿ ಮಾತು..

ಇದ್ನೆಲ್ಲ ನೀವು ಅಲವತ್ತುಕೊಳ್ಳುವಿಕೆಯೋ ಅಥವಾ ದುಃಖದ ಮಾತೋ ಅಂತ ತಿಳಿದರೆ ತಪ್ಪಾದೀತು.. ಇವೆಲ್ಲಾ ಹೊಗಳಿಕೆಯ ಮಾತುಗಳು. ಬ್ಲಾಗಿನ ಲೋಕದಿಂದ ಮತ್ತು ಬೆಂಗಳೂರಿನಿಂದ ದೂರವಿದ್ದು ಒಂದು ತಿಂಗಳ ಮೇಲಾಯಿತಲ್ಲ,, ಮದುವೆ ಸೀಸನ್ನು ಮುಗಿಸಿ ಬರುವಾಗ ಮದುವೆಗೆ ಬಂದ ಮದುವೆ ವಯಸ್ಸಿನ ಹೆಣ್ಣು ಮಕ್ಕಳ ಅಮ್ಮಂದಿರ ಮಾತು ಕೇಳಿ ಎಂತಾ ಜಮಾನಾ ಬಂದಿದೆ ಅಂತ ಯೋಚಿಸುತ್ತ ಕುಳ್ಳುವಂತಾಯ್ತು ನನಗೆ. ಒಬ್ಬರಿಗಿಂತ ಒಬ್ಬರು ಜಂಬದಿಂದ ಅಡಿಗೆಯ ಅ ಆ ಇ ಈ ತಿಳಿಯದ ಮುದ್ದು ಹೆಣ್ಣು ಮಕ್ಕಳ ಬಗ್ಗೆ ಶೋಕಿಯಿಂದ ಜಂಬಕೊಚ್ಚಿಕೊಳ್ಳುತ್ತಿದ್ದರು. ಕೊಚ್ಚಿಕೊಳ್ಳುವ ಪರಿ ನೋಡಿಯೇ ಆನಂದಿಸಬೇಕು.

ತುಂಬಾ ಹಿಂದೆ ಹೋಗಿ ದಣಿಯಬೇಕೆಂದಿಲ್ಲ, ಬರೀ ೪-೫ ವರ್ಷಗಳ ಹಿಂದೆಅಡಿಗೆ ಬಾರದ ಹೆಣ್ಣು ಎಂದರೆ ಲೆಕ್ಕಕ್ಕೆ ಬೇಡಾ ಎನ್ನುವಂತಹ ಸ್ಥಿತಿ. ಹಾಡು-ಹೂ ಬತ್ತಿ, ರಂಗೋಲಿ ಯಾವುದೂ ಬೇಡಾ ಬಿಡಿ ಆದರೆ ಹೊಟ್ಟೆಗೆ ಹಿಟ್ಟನ್ನು ಬೇಯಿಸಲು ಬೇಕಾದ ಕನಿಷ್ಟ ತಿಳುವಳಿಕೆಯೂ ಇಲ್ಲದಂತೆ ಮಾಡಿದ್ದು ಯಾವುದಿರಬಹುದು?? ಹೆತ್ತವರ ಒಣಜಂಬ, ಪ್ರತೀಷ್ಠೆ, ಅತೀ ಪ್ರೀತಿ ಅಷ್ಟೆ. ಎಂತಹ ಪರಿಸ್ಥಿಯಲ್ಲೂ ಇದ್ದು ಜಯಿಸಿ ಬರಬೇಕಾದಂತೆ ಮಕ್ಕಳನ್ನು ಸಾಕಬೇಕಾದ ಪಾಲಕರೇ, ತಾಯಿ ಮನೆಯಲ್ಲಿ ಇಲ್ಲದಿದ್ದರೆ ಹಸಿವೆಯಿಂದ ಹಾಗೆಯೇ ಮಲಗುವಷ್ಟು ಪರಾವಲಂಬಿಗಳನ್ನಾಗಿ ಮಾಡ್ತಿದ್ದಾರೆ!! ಈಗಿನ ಹುಡ್ಗೀರೂ ತಾವು ಅಡಿಗೆ-ಕೆಲಸ ಕಲಿತರೆ ಗಂಡಿಗಿಂತ ಕಡಿಮೆ ಎನ್ನುವ ಭಾವನೆ ಬೆಳೆಸಿಕೊಳ್ತಿದ್ದಾರೆ.

ದೊಡ್ಡ-ಸಣ್ಣ ಕೆಲಸಕ್ಕೆ ಹೋಗುವ ಹುಡ್ಗೀರಷ್ಟೇ ಅಲ್ಲ ಮನೆಗೆಲಸ-ಕೂಲಿಯನ್ನೇ ಆಧಾರವಾಗಿಟ್ಟುಕೊಂಡು ಬದುಕುವ ಮಂದಿಯದ್ದೂ ಇದೇ ಕತೆ. ಮೊನ್ನೆ ನಮ್ಮನೆ ಕೆಲಸದಾಕೆ ಹೇಳ್ತಾ ಇದ್ಲು-"ಮುಂದಿನ ತಿಂಗ್ಳು ನನ್ ಎರಡನೇ ಮಗ್ಳ ಮದುವೆ" ಅಂತ. ಅದಕ್ಕೆ ನಾ ಕೇಳಿದೆ-"ಓಹೊ, ಹಾಗದ್ರೆ ಅಡಿಗೆ ಮನೆ training ಜೋರು ಅನ್ನು. ಎಲ್ಲಾ ಕಲ್ತಿದ್ದಾಳಾ?" ಅವಳು "ಅಯ್ಯ್.. ಈಗ ಅದ್ನೆಲ್ಲಾ ಯಾರು ಕಲೀತಾರೆ, ಹಕ್ಕಿಗೆ ಹಾರೋದು ಹೇಳಿಕೊಡಬೇಕಾ,, ಮದ್ವೆ ಆದ್ಮೇಲೆ ತಾನಾಗಿಯೇ ಕಲಿತಾಳೆ. ನಿಮ್ಗೇನು ಮದ್ವೆಗಿಂತಾ ಮುಂಚೆ ಅಡಿಗೆ ಮಾಡ್ಲಿಕ್ಕೆ ಬರ್ತಿತ್ತಾ?" ಅಂತ ಸವಾಲೆಸೆದಳು. ನಾನು "ಶಿವಮ್ಮಾ,, ನಾನು ನನ್ ತಮ್ಮ ಪೇಟೆಯಲ್ಲಿ room ಮಾಡಿಕೊಂಡು ಕಾಲೇಜಿಗೆ ಹೋಗುವಾಗ ಅಡಿಗೆ ಮಾಡೋದು, ಪಾತ್ರೆ ಬಟ್ಟೆ ತೊಳೆಯೋದು, ಬಳಿಯೋದು ಎಲ್ಲಾ ನಾನೇ ಮಾಡ್ಕೊಂಡು ಓದ್ಕೋಬೇಕಿತ್ತು" ಅಂತ ಹೇಳಿ ಮಾತು ಮುಗಿಸಿದ್ದೆ. ನಾನು ಓದು ಮುಗಿಸಿ ೪ ವರ್ಷ ಕೂಡ ಸರಿ ಆಗಿಲ್ಲ ಜನರ ಯೋಚನೆ, ಅವರ style ಎಷ್ಟೊಂದು ಬದಲಾಗಿಬಿಟ್ಟಿದೆ.. ಮೈಮುರಿದು ದುಡಿಯುವವರೆ ಕೆಲಸ ಮಾಡುವುದು/ಕಲಿಯುವುದು ಅವಮಾನ ಅಂತ ತಿಳಿಯುತ್ತಿರಬೇಕಾದರೆ ಮೇಲ್ವರ್ಗ ಮತ್ತು ಮಧ್ಯಮ ವರ್ಗದವರಲ್ಲಿ ಈ trend ಅದೆಷ್ಟು fast ಇರಬೇಡ.

ಯಾವುದಾದರು ತಾಯಿ "ನನ್ನ ಮಗ ಕೆಲಸಕ್ಕೇ ಹೋಗಲ್ಲ, ದುಡಿಯುವುದು ಅಂದ್ರೆ ಅವನಿಗೆ ಆಗೋದೇ ಇಲ್ಲ" ಅಂದ್ರೆ ಆ ಮಗನ ಬಗ್ಗೆ ಕೇಳಲೂ ನಮಗೆಷ್ಟು ಕಿರಿಕಿರಿ.. ಹಾಗೆಯೇ ಅಡಿಗೆಯೇ ಬರಲ್ಲ ಎಂದುಕೊಚ್ಚಿಕೊಳ್ಳುವ ತಾಯಂದಿರನ್ನು ಕಂಡಾಗಲೂ ಮೈ ಪರಚಿಕೊಳ್ಳುವಂತಾಗುತ್ತದೆ. ಮುಂದೊಂದು ದಿನ "ಮಗ ದುಡಿಯಲ್ಲ" ಅಂತ ಹೊ(ತೆ)ಗಳಿಕೊಳ್ಳುವುದೂ ಒಂದು trend ಆಗಬಹುದು.

ಇತ್ತೀಚೆಗೆ ನಮ್ಮ ಹುಡುಗರೇ ಭಾರೀ ರುಚಿ ಅಡಿಗೆ ಮಾಡೊದನ್ನ ಕಲ್ತಿದ್ದಾರ್ರಿ.. ಹೊರಗಡೆ ಕೆಲಸಕ್ಕೆ ಹೋಗಿಬಂದೂ ಮನೆಯಲ್ಲಿ ಕೂಳುಬೇಯಿಸಿಕೊಂಡು ತಿಂತಿದ್ದಾರೆ. ಆದರೆ ಯಕೋ ಹೆಣ್ಣುಮಕ್ಕಳು ಮಾತ್ರ ಎಲ್ಲದರಲ್ಲೂ ಮುಂದಿರಬೇಕೆಂದು ಬಯಸುವವರು ಅಡಿಗೆ ಕಲಿಯಲು ಸಂಕೋಚಪಡುತ್ತಿದ್ದಾರೋ??

ಪ್ರಸಂಗ ಬಂದಾಗ ತಾನಾಗಿಯೇ ಅಡಿಗೆ ಕಲೀತಾರೆ/ಮದುವೆಯಾದ್ಮೇಲೆ ಒಂದೊಂದೇ ಕಲೀತಾರೆ ಅನ್ನುವ ಮಾತೂ ಇದೆ. ಎಲ್ಲಾ ಸರಿ ಆದ್ರೆ ಮದ್ವೆಗಿಂತ ಮುಂಚೆ ಅಡಿಗೆ ಕಲಿತರೆ ತೊಂದರೆ ಎಂಥಾದ್ದು? ಗಂಡಂದಿರಿಗೆ ಏನೂ ಬರಲ್ಲ ಎಂಬ ಡೌಲಿನ ಹೆಂಡತಿಗಿಂತ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಹೆಂಡತಿಯೇ ಇಷ್ಟವಾಗ್ತಾಳೆ.ಮುಂದೊಂದು ದಿನ "ನಿಮ್ಮಮ್ಮ ಇದನ್ನೂ ಹೇಳಿಕೊಡ್ಲಿಲ್ವಾ" ಎಂಬ ಮಾತು ಬಂದು ಲಡಾಯಿ ಆಗಬಾರದಲ್ಲ ಅಂತ ಹೇಳಿದೆ ಅಷ್ಟೆ. ಹೊರ ಕೆಲಸಕ್ಕೆ ಹೋಗುವ ಮಹಿಳೆಯರೂ ಅಡಿಗೆ ಕಲಿತಿದ್ದರೆ ಆದಷ್ಟು ಬೇಗ ಅಡಿಗೆ ಮುಗಿಸುವ ಮತ್ತು ಗಂಡನಿಂದ ಸರಿಯಾಗಿ help ಪಡೆಯುವ ಕಲೆ ಕರಗತ ಮಾಡ್ಕೋಬಹುದು..

ಕೂಸು ಬರ್ಜರಿ ಓದ್ತು/ನೌಕರಿಯಲ್ಲಿದ್ದು ಅದಕ್ಕೆ ಅಡಿಗೆ ಮನೆಗೆ ಕಾಲಿಡಲೂ ಪುರುಸೊತ್ತಿಲ್ಲ ಎಂದು ಹೇಳಿಸಿಕೊಳ್ಳುವುದಕ್ಕಿಂತಲೂ ಎಷ್ಟೆಲ್ಲಾ ಓದಿಕೊಂಡು/ನೌಕರಿಗೆ ಹೋಗಿಬಂದು ಅಡಿಗೇನೂ ಚೆನ್ನಾಗಿ ಮಾಡ್ತು ಎನ್ನಿಸಿಕೊಳ್ಳಿವುದೇ ಒಂದು ತೂಕ ಜಾಸ್ತಿ ಅಲ್ಲವೇ?? ಈ ಮಾತು ಮನಸ್ಸಿಗೆ ಬಂದಿಲ್ಲವೆಂದರೆ atleast ಎಲ್ಲರೆದುರು ಕೆಲಸಬರದ ಕೂಸನ್ನು ಹೊ(ತೆ)ಗಳುವುದನ್ನಾದರೂ ಬಿಡಿ,, ನಿಮ್ಮ ಹಿಂದೆ ಆಡಿಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾದೀತು!!

Thursday, April 8, 2010

ಈ ಕವನ ರಾತ್ರಿ ರಾಣಿಯರಿಗಾಗಿ

ಅವಳೂ ಮತ್ತು ಅವನೂ....

ಲಗು ಬಗನೆ ಮಾಡಿಟ್ಟ
ಪಲ್ಯ, ಗೊಜ್ಜು, ಹುಳಿ
ಒಗ್ಗರಿಸಲೂ ಮರೆತ ತಂಬಳಿ
ಪುರುಸೊತ್ತಿಲ್ಲದೆ ಗಿಳಿಗೂಟಕ್ಕೆ
ಹಾಗೆಯೇ ಸಿಕ್ಕಿಸಿದ ಸೀರೆ, ಪರಿಕಾರ, ಕೌಪು
ಸರಗೋಲು ಸರಿಸಲೂ ಮರೆತ ನೆನಪು..
'ಎನೆನ್ನುವನೋ ನನ್ನ ಮಗರಾಯ
ಇವತ್ತಿನ ಕೊನೆಯ ಗಿರಾಕಿ ಮುಗಿದರೆ ಸಾಕು'
ಎಂದು ಓಡಲು ತಯಾರಾದ ಕಾಲು
ಅವಳು ಮೈ ಕೊಡವಿ ಮೇಲೆದ್ದು
ನೆರಿಗೆ ಎಣಿಸಿ, ಸೆರಗ ಮುಸುಕೆಳೆದಳು...


ಹೊರಗಡೆ ಯಜಮಾನಪ್ಪನ ಜೋರು
ಬಿಚ್ಚಯ್ಯ ಇನ್ನೂ ಒಂದು ನೂರು
ನಡೆದಿತ್ತು ಚೌಕಾಸಿ
ಕದ ಮುಚ್ಚಿದ ಕೋಣೆಯೊಳಗೆ ಎಲ್ಲವೂ ಅಸಷ್ಟ.
ಏನೇನೋ ಮಸಲತ್ತು ನಡೆಸಿ
ಒಳಬಂದ ಅವನು
ಅವಳ ಇಂದಿನ ಕೊನೆಯ ಗಿರಾಕಿ.


ದಂಧೆಯ ಉಸೂಲೇ ಹಾಗೆ
ನಯ, ನಾಜೂಕು, ನಾಚಿಕೆ, ಹುಸಿ ಮುನಿಸು, ನಗು
ದಿನ ದಿನವೂ ನವ ವಧುವಿನ ಬಳುಕು
ವಯ್ಯಾರದ ಥಳಕು.
ಆದರೂ ಅವಳಿಗೆ ಒಳಗೊಳಗೆ
ಮಗನದೇ ಹಂಬಲ
ಹಸಿದುಬಂದವ ಉಂಡನೋ
ಇಲ್ಲಾ ಹಾಗೆಯೇ ಒರಗಿಬಿಟ್ಟನೋ..


ಒಳ
ಬಂದವನು ಹಾಗೆಯೇ ತಲೆಗೆ ಹೊದ್ದ
ಸೆರಗನ್ನೂ ಸರಿಸದೆ ಕೈ ಹಿಡಿದ ಮೆತ್ತಗೆ,
ಅವಳೂ ತಲೆ ಎತ್ತಲಿಲ್ಲ,
ಎಂದಿನಂತೆ ನಾಚಿ ನೀರಾದಳು..
ಮತ್ತೆ ಮತ್ತೆ
ಮೆಲ್ಲಗೆ ಅವನ ಕೈ ಅಮುಕಿದಳು,, ಅವಳಿಗೋ
ಮಗನದೇ ಚಿಂತೆ..
ವರ್ಷ ಇಪ್ಪತ್ತಾದರೂ ಮಗನಿಗಿದು
ತಿಳಿದಿಲ್ಲ, ಎಷ್ಟಾದರೂ ಹೈ ಗೈ ಎನ್ನದಂತೆ
ಸಾಕಿಲ್ಲವೆ ಇವಳು!!


ಅವನಿನ್ನೂ ಕೈ ಹಿಡಿದೇ ನಿಂತಿದ್ದ
ಮುಂದುವರಿಯದೆ,,
ತಾಳಲಾರದೆ ಅವಳೇ ಕೇಳಿದಳು
ತಲೆ ಎತ್ತದೆ,,
ಮೊದಲ ಬಾರಿಯೇ????
....
....
....

ಸಂಕೋಚವೇ????
ಅವನೆಂದ
ಹಾಗೇನಿಲ್ಲ,
ನಡೆಯಮ್ಮ ಹೋಗೋಣ ಮನೆಗೆ...

ದನಿ ಕೇಳಿ
ಕತ್ತಲಾದಂತೆನಿಸಿ
ಆಸರೆಗೆ ಅವನಿಗಾಗಿ ತಡಕಾಡಿದಳು..


ಚಿಕ್ಕ ಮಾತು:
ಈಗ್ಗೆ ಮೂರು ವರ್ಷದ ಹಿಂದೆ ನಾನು IFMR ಲ್ಲಿ ಫೀಲ್ಡ್ ಇನ್ವೆಸ್ಟಿಗೇಟರ್ ಅಗಿದ್ದಾಗಲೂ ISEC (Institute for Social & Economic Change) ವಸತಿ ನಿಲಯದಲ್ಲಿ ನನ್ನ ಸೀನಿಯರ್ (ಆಕೆ ನನಗೆ ಅಕ್ಕನಿಗಿಂತಲೂ ಒಂದು ಕೈ ಮಿಗಿಲು) ಜೊತೆ ಇದ್ದೆ. ಭಾನುವಾರ ಅಥವಾ ಹಬ್ಬ ಹರಿದಿನದ ರಜಾ ದಿನಗಳಲ್ಲಿ ನಾನು ಕನ್ನಡ-ಹಿಂದಿ ಟ್ರಾನ್ಸ್ಲೇಟರ್ ಆಗಿ research students ಜೊತೆ ಅಗಾಗ ಹೋಗುವುದಿತ್ತು. ಅಂದೂ ಹೋಗಿದ್ದೆ, ರಾಜರಾಜೇಶ್ವರಿ ನಗರದ ಸಮೀಪ ಇರುವ ನಾಯಂಡ ಹಳ್ಳಿಗೆ.. AIDS ತಗಲಿದ ವೇಶ್ಯೆಯರ ಜೊತೆ ಮಾತು ಕತೆಗೆ. ಇದೊಂದು ಥರದ ಬೇರೆಯದೇ ರೀತಿಯ ಅನುಭವ ಕೊಟ್ಟಿತ್ತು ನನಗೆ.

28-30 ಮಹಿಳೆಯರಿರುವ ಸಂಘ ಅದು. ಚಿಕ್ಕ ರೂಮನ್ನು ಬಾಡಿಗೆಗೆ ಹಿಡಿದವರು ಸಂಘದ ಅಧೀಕೃತ ಸಭೆಗೆ ಅಲ್ಲಿಯೇ ವಾರಕ್ಕೆ ಮೂರು ದಿನ ಸೇರುತ್ತಿದ್ದರು. ಆಚೀಚೆಯವರಿಗೆ, ಖುದ್ದು ರೂಮನ್ನು ಬಾಡಿಗೆಗೆ ಕೊಟ್ಟ ಮಾಲೀಕನಿಗೂ ಇವರು AIDS ತಗಲಿದ ವೇಶ್ಯೆಯರೆಂದು ಗೊತ್ತಿಲ್ಲ. ನಮ್ಮನ್ನು ಅವರ ನಾಯಕಿ(ಸಂಘದ ಅಧ್ಯಕ್ಷೆ) ಬಹಳ ಆದರದಿಂದ ಬರಮಾಡಿಕೊಂಡರು. ಒಬ್ಬೊಬ್ಬರನ್ನಾಗಿ ಒಳ ಕರೆದು ಮಾತನಾಡಿಸುವುದು ಮತ್ತು ಮೊದಲೇ ತಯಾರಿಸಿದ ಒಂದಿಷ್ಟು ಪ್ರಶ್ನೆಗಳನ್ನು ಅವರಿಗೆ ಕೇಳುವುದು ನಮ್ಮ ಅಂದಿನ ಕೆಲಸ.

ಪ್ರತಿಯೊಂದು ಪ್ರಶ್ನೆಯೂ ಅತೀ ವೈಯಕ್ತಿಕವಾದ್ದು ಮತ್ತು ಮುಜುಗರ ತರಿಸುವಂಥದ್ದು. ಆದರೂ ಯಾರೊಬ್ಬರೂ ನಮ್ಮನ್ನು ಬೈಯದೆ, ತರಾಟೆಗೆ ತಗೊಳ್ಳದೆ ಬಹಳ ಸಹಕರಿಸಿದ್ದರು, ಅವರೆಲ್ಲರ ಕಣ್ಣೀರು ನಮ್ಮ ಹೆಗಲನ್ನೆಲ್ಲಾ ತೋಯಿಸಿತ್ತು. ಒಬ್ಬೊಬ್ಬರೂ ಅದೆಷ್ಟು ನೋವನುಂಡವರು...!! ಅವರಲ್ಲಿ ಕೆಲವರು ನಮ್ಮೆಲ್ಲರಂತೆ ಕುಟುಂಬಸ್ಥರು. ಗಂಡ ಹೆಂಡತಿ ಮಕ್ಕಳು...ಎಲ್ಲರೊಂದಿಗೆ ಸಾಮಾನ್ಯರಂತೆ ಬದುಕುವುದು, ಗಿರಾಕಿ ಬಂದಾಗ ಮಾತ್ರ ಶುದ್ಧ ವೇಶ್ಯಯರಾಗುವರು. ಅತ್ಯಾಶ್ಚರ್ಯವೆಂದರೆ ಅವರಲ್ಲಿನ ಎಷ್ಟೋ ಮಹಿಳೆಯರ ಮನೆಯವರಿಗೆ ಅವರು ವೇಶ್ಯೆ ಎಂಬುದೇ ಗೊತ್ತಿಲ್ಲ.., ಅವರೊಂದಿಗೆ ನಡೆದ ಮಾತು ಕತೆ ಹೇಳುವುದು ಬೇಕಷ್ಟಿದೆ.. ಅವೆಲ್ಲ ಇಲ್ಲಿ ಅಪ್ರಸ್ತುತ. ಒಟ್ಟಿನಲ್ಲಿ ಅಂದು ನಮ್ಮೊಂದಿಗೆ ಪ್ರೀತಿಯಿಂದ ಬೆರೆತು, ಅವರ ದುಃಖಕ್ಕೆ ನಮ್ಮ ಹೆಗಲನ್ನು ಆಸರೆಯಾಗಿ ಬಳಸಿ ಆತ್ಮೀಯತೆ ಮೆರೆದ, ಅವರ ತಟ್ಟೆಯ ಅನ್ನವನ್ನು ಕೈ ತುತ್ತೆಂದು ನಮಗೆ ಉಣ್ಣಿಸಿದ ಆ ಎಲ್ಲ ವೆಶ್ಯಾ ಮಣಿಗಳಿಗಾಗಿ ಈ ಕವನ...



Tuesday, March 23, 2010

believe in democracy :-) :-) :-)

ನಿನ್ನ ಮರ್ಜಿಗೆ ನಾನು ಊಹುಂ ಎನಲಾರೆ..



ಆರೇಳು ಫೋಟೆತ್ತರದ ಭಡ ದೇಹ
ಗಂಜಿಯ ನೆಳದಂತೆ
ಗಟಾರದಲ್ಲಿ
ಭಿಡೆ ಬಿಟ್ಟು
ಕೂಳು, ಕಸ, ಕಫ ಒಂದೂ ನೋಡದೆ
ನೆಕ್ಕಿ ಮುಕ್ಕಿ ಮೆಲುಕುವ,,
ಮನುಷ್ಯರಂತೆ ನಟಿಸಿ ನುಲಿಯುವ
ಧಣಿಗಳ
ಎಂದೂ ಹೊರಡದ ದನಿಗಳು ನಾವು..

ಜೀ ಹುಜೂರ್ ಎಂದು
ನಾವೇ ತೊಡಿಸಿದ ಹುಜೂರಿಕೆಯ ಪಟ್ಟ
ಬಾಗಿದರೆ ಬಿದ್ದೀತೆಂದು
ಭದ್ರವಾಗಿ ಅತ್ತಿತ್ತ ಕಾಣದಷ್ಟೂ
ಅಲ್ಲಾಡದೆ ನಡೆದು,
ರಾಜಕೀಯದ ರೇಂಪಲ್ಲಿ(ramp) ಥಕದಿಮಿಸುವ
ಖಾದಿಯೊಳಗಣ
ಬೆತ್ತಲು ದೇಹ ಕೊಬ್ಬಿದ್ದು
ಕಂಡೀತು ಹೇಗೆ,,,
ಇರುವ ಎರಡೇ ಕಣ್ಣಿಗೆ
ಯಾರ ತಾತನ ಗಂಟೆಂಬ ಔದಾಸ್ಯದ
ಪೊರೆ ಬಂದ ಮೇಲೆ..!!

ಬೀಡಿ ಕೊಂಡ ಮುದುಕಪ್ಪನಿಗೆ
ಬತ್ತಿ ಹೊಸೆದ ಹಳೇ ಮುದುಕಿಗೆ
ಟ್ಯಾಕ್ಸು, ರೆವೆನ್ಯೂ, ಎಕ್ಸ್ಪೆಂಡೀಚರ್ರು ಎಲ್ಲಾ
ಬ್ರಹ್ಮನ ಕಗ್ಗಂಟು,
ಇವೆಲ್ಲಾ ಭೋಗಸ್ಸೆಂದು
ಸರ್ಕಾರಕ್ಕೊಂದಿಷ್ಟು ಗೊಣಗಿ
ಮುರುಟಿ ಮಲಗುವ
ಮಹಾಪೌರನ
ಪಾಯಿಖಾನೆಯಷ್ಟೇ ಖಾಸು ಎನಿಸಿದ
ರಟ್ಟಾದ ಗುಟ್ಟು ಇದು.

ಪ್ರಜಾಪ್ರಭುತ್ವ::::
ಜನರು ಜನರಿಂದ ಜನರಿಗಾಗಿ
ಮಾಡುವ ಧೋಕಾ,,
ಮಾಯಾಲೋಕ..


ರಾಜಕಾರಣಿ, ಕಾರಿಣಿಯರ
ಮಾತಿನರಮನೆಗಳ ಸಾಲಲ್ಲಿ
ನನ್ನದೆಂಬ ಒಂದು ಗುಡಿಸಲೂ ಇಲ್ಲ
ಎಲ್ಲವೂ ಪ್ರಜೆಗಳನ್ನು ಪ್ರಭುವಾಗಿಸಿದವರ ಲೀಲೆ
ಜೊತೆಗೆ
ಹೆಸರಿಗಷ್ಟೇ ಪ್ರಜೆಯೇ ಪ್ರಭುವೆಂಬ
ಪಟ್ಟ ಹಣೆಯ ಮೇಲೆ..!!
ನಾನು ಧನ್ಯ..
ನೀನೂ ಧನ್ಯ..
ನಾವೆಲ್ಲರೂ ಕೃತಜ್ಞರೇ ನಿಮಗೆ..

ಅಹುದಹುದು..
ಮೂರು ಮಂಗಗಳ ಪೈಕಿಯಲ್ಲೇ
ನಮ್ಮಗಳ ಆಯ್ಕೆ,,
ನಾನು ಕಣ್ಣು ಕಾಣದ ಮಂಗ
ಇವ ಕಿವಿ ಕೇಳದ ಮಂಗ
ನಿಮ್ಮ ನಿಮ್ಮ ಆಯ್ಕೆ ನಿಮಗೇ ಬಿಟ್ಟಿದ್ದು..
ಸ್ವತಂತ್ರ್ಯ ಭಾರತದಲ್ಲಿ ಇಷ್ಟಾದರೂ
ಸ್ವಾತಂತ್ರ್ಯವಿರದಿದ್ದರೆ ಹೇಗೆ..??

ಓಹೋ,,,
ಇದಕ್ಕೂ ಬೇಸರವೇ ನನ್ನೊಡೆಯಾ?????
ಹೋಗಲಿಬಿಡು
ಬೇಕಾದರೆ ನೀನೇ
ವಿಂಗಡಿಸಿ ಪಂಗಡಿಸಿಬಿಡು ನಮ್ಮ
ನಿನ್ನ ಮರ್ಜಿಗೆ ನಾನು ಊಹುಂ ಎನಲಾರೆ..
(infact ನಾವ್ಯಾರೂ ಊಹುಂ ಎನಲಾರೆವು)

Wednesday, March 17, 2010

ಮರೆತ ನೆನಪುಗಳ ಮೇಲೊಂದು ಕವನ

ನೆನಪುಗಳೇ ನೀವೇಕೆ ಹೀಗೆ???

ನೆನಪುಗಳೇ,
ಈ ಬದುಕಿಗೆ
ಹಳೆಯ ನೆನಪುಗಳ ಮತ್ತದೇ ಮುನ್ನುಡಿ
ಬರೆಯದಿರಿ!!

ಬಿದ್ದ ಹೂವಿಗೆ
ಗಿಡವೆಂದೂ ಭೂತ,
ಗತಿಸಿದ್ದು
ತಿದ್ದಲಾಗದ ಬರಹ ಮಾತ್ರ.

ಪೂರ್ವ ಉತ್ತರವೋ, ಆಗ್ನೇಯ ಈಶಾನ್ಯವೋ
ಮನದ ಯಾವುದೋ ದಿಕ್ಕಿನಲ್ಲಿ
ಜಿರಲೆ ಕುಂಟೆ,
ಒಂದಿಷ್ಟು ಬಿಂಜಲುಗಳ ನಡುವೆ ಹೂತ
ದ್ರೌಪದಿಯ ಸೀರೆಯಂತೆ
ಸೆಳೆದಷ್ಟೂ ರೂಪುಗೊಳ್ಳುವ
ನೆನಪಿನ ಸರ
-ಮಾಲೆಗಳೇ
ಹೊತ್ತುಗೊತ್ತಿಲ್ಲದೆ
ನನ್ನಾವರಿಸಿ ಮಜ ನೋಡುವುದ
ಬಿಟ್ಟುಬಿಡಿ.

ನೆನಪುಗಳ ಪುಟಗಳನ್ನೆಲ್ಲ
ಹಳೆ ಪುಸ್ತಕದಂತೆ
ರದ್ದಿಗೆ ಕೊಟ್ಟು
ಹಗುರಾಗಿ ಹಾಯಾಗೋಣವೆಂದರೆ
ರದ್ದಿಯಾತನೂ ತೂಗಿದ
ಪುಟಗಟ್ಟಲೆ ಇರುವ ನೆನಪಿನ
ಪುಸ್ತಕವ..!!
ತೂಗಿ ತೂಗಿ ದಣಿವಾಗಿ
'ಬೇಡಮ್ಮ ನಿಮ್ಮ
ರದ್ದಿ,
ಕೊಡುವಷ್ಟು ಕಾಸಿಲ್ಲ,
ಪುಗಸಟ್ಟೆ ಕೊಟ್ಟೇನೆಂದರೂ
ಹೊತ್ತೊಯ್ಯಲು
ಬೆನ್ನಲ್ಲಿ ಕಸುವಿಲ್ಲ'
ಎಂದ.

ಮಂಕಾದೆ ಅವನ ಕೊಂಕಿಗೆ
ಮತ್ತೆ
ಹೊಂಚ ತೊಡಗಿದೆ
ನೆನಪುಗಳನ್ನೆಲ್ಲಾ ಹರಿದು ಹಂಚಿಬಿಡಲು..

ಒಮ್ಮೆಯಂತೂ
ದಿನ, ವಾರ, ತಿಂಗಳು ಕಳೆದು ವರ್ಷವೇ
ಕೂತೆ
ನೆನಪುಗಳ ಸುಟ್ಟಿಬಿಡಲು.
ಸುಟ್ಟೂ ಸುಟ್ಟು ಶಾಖಕೆ
ನಾ ಕರಕಲಾದೆ
ಮಶಿ ಇಂಗಾಳದಂತೆ.
ಆದರೂ ನಿಟ್ಟುಸಿರಿಟ್ಟಿದ್ದೆ ಪಾರಾದೆನೆಂದು,,,,

ನಿನ್ನೆ
ರಾತ್ರಿ ರಾಣಿಯ
ಸವಿಗಂಪ ತಾಳಲಾರದೆ
ಕಿಟಕಿಯಲ್ಲಿ ಇಣುಕಿದರೆ
ನೆನಪುಗಳ
ಬೂದಿಯಲ್ಲಿ
ಬೆಳದೊಂದು ಹೂವಿನ ಗಿಡ
ಘಮ ಘಮಿಸುವ ಹೂವ
ಹೊತ್ತು
ಸತ್ತ ನೆನಪುಗಳಿಗೆ
ಜೀವ ತುಂಬಿ
ಈ ಬದುಕಿಗೆ
ಹಳೆಯ ನೆನಪುಗಳ ಮತ್ತದೇ ಮುನ್ನುಡಿ
ಬರೆಯುತ್ತಿತ್ತು...


((((ತೇಜಸ್ವಿನಿಯವರೇ,
ನನ್ನ ನಿಜವಾದ ಹೆಸರು ಸಾಗರಿಯೂ ಅಲ್ಲ, ಚಿನ್ಮಯಿಯೂ ಅಲ್ಲ. ಸಾಗರಿಯ ಮೇಲೆ ಬಿದ್ದ ಚಿನ್ಮಯಿಯ ಸ್ವಗತಗಳ ಛಾಯೆಯೇ ನಾನು. ನನ್ನ ವಿವರವನ್ನು ಹೀಗೆ ಗೌಪ್ಯವಾಗಿ ಇಟ್ಟಿದ್ದಕ್ಕೆ ಕ್ಷಮಿಸಿ, ಆದರೂ ಕೆಲವು ಕಡೆ ನನ್ನ ಊರು, ಭಾಷೆ, ಹೆಸರಿನ ಹಿಂಟುಗಳನ್ನು ಇಟ್ಟಿದ್ದೇನೆ.
ಹುಟ್ಟೂರಿಗೆ ಅಚಾನಕ್ಕಗಿ ತೆರಳಿದ ಕಾರಣದಿಂದಾಗಿ ತಮ್ಮೆಲ್ಲರಿಗೂ ಸ್ವಲ್ಪ ತಡವಾಗಿ ಯುಗಾದಿಯ ಶುಭಾಷಯಗಳನ್ನು ಕೋರುತ್ತೇನೆ..(ಯುಗಾದಿಯನ್ನು ಉಗಾದಿ ಅಂತ ಕರ್ಯೋದ್ಯಾಕೆ?? ಗೊತ್ತಿದ್ದವರು ತಿಳಿಸಿ.) ))))


Monday, March 8, 2010

ಹೀಗೂ ಒಂದು ಪತ್ರ
















ಮಗನಿಗೊಂದು ಪತ್ರ.


ಮಗೂ,
ಮುಂದೆಂದೂ ಬರೆಯಲಾಗದೇನೋ ಎನ್ನಿಸಿ ನಿನಗೆ ಈ ಪತ್ರವನ್ನು ಈಗಲೇ ಬರೆತ್ತಿದ್ದೇನೆ. ನನ್ನ ಜೀವವೇ ನೀನಾಗಿರುವಾಗ ಎದುರಿಗೆ ನೀ ನಿಂತು ಕೇಳಿದರೂ ಮಾತಲ್ಲಿ ನಾ ಹೇಳಬಲ್ಲೆ ಎಂಬ ನಂಬಿಕೆ ಇಲ್ಲದ ಕೆಲವು ಭಾವನೆಗಳನ್ನ ಪತ್ರದಲ್ಲಿ ಬರೆದಿರುವೆ. ಸಾವಧಾನವಾಗಿ ಓದಿಕೋ. ದೇವರು ನಿನಗೆ ಒಳ್ಳೆಯ ಆಯುಷ್ಯ, ಆರೋಗ್ಯ, ನೆಮ್ಮದಿ ಕೊಟ್ಟು ಕರುಣಿಸಲಿ

ಪಕ್ಕದಲ್ಲೇ ಮಲಗಿರುವ ನಿನ್ನ ಚಿಣಕಿ ಪಿಣಕಿ ಬೆರಳುಗಳು, ಮೆತ್ತನೆಯ ಗಂಧದ ಬಣ್ಣದ ನಿನ್ನ ಮೈ ಕೈ, ಹಲ್ಲುಜ್ಜಲೂ ಬಿಡದೆ ಹಳದಿಗಟ್ಟಿಸಿಕೊಂಡಿರುವ ಹಲ್ಲು, ಎಷ್ಟೇ ಆಡಿ ಕುಣಿದರೂ ದಣಿಯದ ಆ ಪುಟ್ಟ ಕಾಲ್ಗಳು, ಕೆನ್ನೆ ಮೇಲೆ ಇನ್ನೂ ಆರದೆ ಉಳಿದಿರುವ ಎರಡು ಬಿಂದು ಕಣ್ಣೀರು, ಕೆಂದುಟಿಗಂಟಿರುವ ಹನಿ-ಹನಿ ಹಾಲು.... ಮಲಗೆನೆಂದು ಅತ್ತೂ ಅತ್ತೂ ಬಳಲಿ ಮಲಗಿದೆಯಲ್ಲ ಕಂದ!! ನಿನ್ನ ತುಂಟತನ ಸಹಿಸಲಾಗದೆ ನಾ ನಿನಗೆ ಬೈದಾಗಲೆಲ್ಲ ಏನೂ ಅರಿಯದವನಂತೆ ಮಿಕ ಮಿಕ ಕಣ್ಣಗಲಿಸಿ ಬೆದರಿದ ಹರಿಣಿಯಂತೆ ನನ್ನುಸಿರ ಬಿಸಿಗೆ ಬೆಚ್ಚಗಾಗೋಣವೆಂದು ಓಡಿ ಬಂದು ನನ್ನ ತಬ್ಬುವೆಯಲ್ಲ ಕಂದ,, ನಿನ್ನದು ಅದೆಂತಹ ಪ್ರೀತಿ! ಅಮ್ಮನ ಮಡಿಲೇ ಹಾಗೆ ಎಲ್ಲಿಯೂ ಸಿಗದ ಶಾಂತಿ, ನೆಮ್ಮದಿ, ಸುರಕ್ಷಿತತೆಯ ಭಾವ.. ಎಲ್ಲವನ್ನೂ ನೀಡುತ್ತದೆ.

ನಿನ್ನಂತೆಯೇ ನಾನೂ ಇದ್ದೆನಂತೆ ಪುಟ್ಟ ಕೈ, ಕಾಲು, ಬಾಯಿ..ಎಲ್ಲಾ. ನನ್ನ ಆಯಿಯ ಸೆರಗಂಚು ಹಿಡಿದು ಭಯ ಅಂತ ನಿನ್ನೆ ಮೊನ್ನೆವರೆಗೂ ಓಡಾಡಿಕೊಂಡಿದ್ದೆ. ಇಂದು ಹೆದರದಿರೆಂದು ನಿನ್ನನ್ನು ನನ್ನ ತೆಕ್ಕೆಯಲ್ಲಿ ಭದ್ರವಾಗಿರಿಸಿಕೊಂಡು ಓಲೈಸುವಷ್ಟಾಗಿಬಿಟ್ಟಿದ್ದೇನೆ,, ನೆನ್ನೆವರೆಗೂ ಎಲ್ಲಿತ್ತೋ ಈ ತಾಯ್ತನ! ನನ್ನ ಆಯಿಯ ಕಣ್ಣಿಗೆ ನಾನು ಅಶಿಸ್ತೆಂದು ಕಂಡಾಗೆಲ್ಲ "ನೀನೂ ಒಂದು ಹೆಣ್ಣಾ" ಅಂತ ಬೈದಾಗ ನಕ್ಕು ಮೈ ಕೊಡವಿ ಬರುತ್ತಿದ್ದೆ. ಈಗ ಯಾರಾದರೂ "ನೀನೂ ಒಂದು ತಾಯೀನಾ" ಎಂದುಬಿಟ್ಟಾರೆಂದು ನಿನ್ನಾರೈಕೆಯಲ್ಲಿ ಅಚ್ಚುಕಟ್ಟಾಗಿಬಿಟ್ಟಿದ್ದೇನೆ..

ಪೋರಾ,, ಹೀಗೆ ದಿನ ಕಳೆವುದು.., ಅರಿವಿಲ್ಲದೊಂದು ದಿನ ನಿನಗೆ ಕುಡಿ ಮೀಸೆಯೂ ಚಿಗುರುವುದು. ಒಡೆದ ದನಿಯಲ್ಲಿ ಅಮ್ಮಾ ಎಂದು ಕರೆದಾಗ ಕಂದಾ ಎಂದು ಕೆನ್ನೆಗೆ ಮುದ್ದಿಸಲೇ ಎಂಬ ಸಂದಿಗ್ಧತೆ ನನಗೂ ಬರಬಹುದು. ಅದಾಗಲೇ ನೀನು ತನ್ನ ಖಾಸಗಿ ಎಂಬ ಗೋಡೆಯ ಹಿಂದಿನಿಂದ ಇರಮ್ಮಾ ಎಂದು ನಾ ಕರೆದರೂ ನೀ ಬಾರದೆಯೂ ಇರಬಹುದು..

ನೀನು ಈಗ ಒಲ್ಲೆ, ಆಗ ಒಲ್ಲೆ ಎಂದು ರಾಗವೆಳೆದರೂ ನಿನ್ನೊಲವಿಗೊಪ್ಪುವ ಕನ್ಯೆ ನನ್ನ ಸೊಸೆಯಾಗಿ ಬಂದಾಗಲೇ ಈ ಜೀವಕ್ಕೆ ತಂಪು. ಮಗ ಸೊಸೆ ಗುಸು-ಗುಸು ಮಾತಾಡಿಕೊಂಡು ನಕ್ಕಾಗ, ಮನೆ ತುಂಬಿದವಳ ಬಳೆ ಕೋಣೆಯೊಳಗೆ ವಿನಾಕಾರಣ ಘಲ್ ಘಲ್ ಎಂದಾಗ ನನಗೆಷ್ಟು ನೆಮ್ಮದಿಯಾಗುತ್ತೆ ಗೊತ್ತಾ ಕಂದಾ?? ನಾನೂ ಈ ಮನೆಗೆ ಒಂದು ಕಾಲದಲ್ಲಿ ಹೊಸಬಳಾಗಿಯೇ ಬಂದಿದ್ದೆನೆಂಬ ನೆನಪೆಲ್ಲ ನನಗೆ ಬಾರದೆ ಇರದು. ಮಗೂ,, ನಿನ್ನಜ್ಜ ಅಜ್ಜಿಯಂದಿರು ವಾಡಿಕೆಯಂತೆ ನಿನ್ನ ಸೊಸೆಗೆ ಎಂತಹ ಪ್ಲಾನಿಂಗೂ ಬೇಡಾ ಎಂದು ಹೆಳುವಂತೆ ನನ್ನ ಒತ್ತಾಯಿಸುವುದಂತೂ ಖಂಡಿತ.

ನಿನ್ನ ಎಲ್ಲಾ ತುಂಟತನದ ಫೋಟೊ, ಆಟಿಕೆ, ನೀನು ಮೊತ್ತ ಮೊದಲು ತೊಟ್ಟ ಬಟ್ಟೆ, ನಿನ್ನ ದೇವರ ಕೂದಲು ಉದುರಿದಾಗ ಎತ್ತಿಟ್ಟ ಆ ಸಿಕ್ಕು ಸಿಕ್ಕಿನ ಕೂದಲ ಗಂಟು, ನಿನ್ನ ತುಂಟಾಟಕ್ಕೆ ಸೋತು ಉದುರಿದ ಕಾಲ್ಗೆಜ್ಜೆಯ ಗೆಜ್ಜೆ ಗುಂಡು.. ಎಲ್ಲವನ್ನೂ ನಾನು ಭದ್ರವಾಗಿ ಎತ್ತಿಟ್ಟು ಜೋಪಾನ ಮಾಡುತ್ತಿದ್ದೇನೆ.., ನನ್ನ ಮೊಮ್ಮಕ್ಕಳಿಗೆ ಇದನ್ನೆಲ್ಲ ತೋರಿಸಿ ಕತೆ ಹೇಳಲಿಕ್ಕಾಗಿ.

ಮದುವೆಯಾದ ಮೇಲೆ ನನ್ನ ವಯಸ್ಸಿನವರೂ ನನ್ನನ್ನು ಆಂಟಿ ಎಂದಾಗ ನನಗಾದ ಮುಜುಗರ ಅಷ್ಟಿಷ್ಟಲ್ಲ, ಆದರೆ ಈಗ ಅಜ್ಜಿ ಎನಿಸಿಕೊಳ್ಳಲು ಆಗುತ್ತಿರುವ ತವಕ ಮಾತ್ರ ಹೇಳತೀರದು..

ನಿನ್ನ ಸಂಸಾರದ ವಾಸ್ತವದ ಜವಾಬ್ದಾರಿ ಶುರು ಆಗೋದು ನೀನು ಅಪ್ಪ ಎನ್ನಿಸಿಕೊಂಡಾಗಿನಿಂದ. ಮಕ್ಕಳನ್ನ ಹೆರ್ತೀಯೋ ಮಸಣಕ್ಕೆ ಹೋಗ್ತೀಯೋ ಅಂತ ನಮ್ಮನೆಗೆ ಬರುತ್ತಿದ್ದ ಕೆಲಸದ ಶಿವಮ್ಮ ಹೇಳ್ತಾ ಇರ್ತಿದ್ಲು. ಆದ್ರೆ ಪಶುವಂತೆ ಶಿಶುತನವ ಕಳೆದನಾ ಕೃಷ್ಣ ಎಂಬ ಮಾತೂ ನೆನಪಲ್ಲಿಡು. ತಲೆ ನೋವೆಂದು ಹೇಳಲಾಗದೆ ಹೊಟ್ಟೆ ನೋವಿಗೆ ಮದ್ದು ಕುಡಿವ ಮುದ್ದು ಕಂದಮ್ಮನ ಮೇಲೆ ಎಂದಿಗೂ ಅಕ್ಕರೆಯಿರಲಿ.

ನನ್ನ ದೊರೆಯೇ,, ಮೊಮ್ಮಕ್ಕಳಾಟದಲ್ಲಿ ನನ್ನ ಚರ್ಮ ಸುಕ್ಕಿದ್ದು ಮರೆಯುವುದೋ ಎನೋ?! ಹಲ್ಲುಗಳುದುರಿ ನಾನು ಅಕರಾಳ-ವಿಕರಾಳವಾಗಬಹುದು. ನೀನು ಬಳಿ ನಿಂತು ಅಮ್ಮ ಎಂದು ಕರೆದಿದ್ದೂ ಕೇಳಿಸದಷ್ಟು ಕಿವಿ ದೂರಾಗಿ ಚಾಳೀಸಿನ ನಂಬರ್ ಎರುತ್ತಾ ಹೋಗುತ್ತದೆಯಲ್ಲವೇ ನನಗೆ..? ಪಕ್ಕದ ಕೇರಿಯ ಮಾಯಬ್ಬೆಗೆ ಅರುಳು ಮರುಳಂತೆ ಎರಡು ತಿಂಗಳಿನಿಂದ. ಈ ಲೋಕದ ಖಬರ್ರೇ ಇರೊಲ್ವಂತೆ. ಮಿಮ್ಮಕ್ಕಳ ಬರುವು ಹಾಯುವ ವಯಸ್ಸಲ್ಲಿ ತನ್ನ ಮಗನಿನಿಗೇಂತ ತೊಟ್ಟಿಲು ಕಟ್ಟಿ ಜೋಗುಳ ಹಾಡ್ತಾಳಂತೆ. ಬರುವ ಜಾತ್ರೆಗೆ ಹೊಸ ಲಂಗ ತಗೋಬೇಕಂತ ದುಡ್ಡೂ ಜಮಾ ಮಾಡ್ತಿದಾಳಂತೆ..!! ಯಾರ್ಯಾರ ಕಾಲ ಹೇಗೋ ತಿಳಿಯದು. ಸುಖದ ಮರಣವನ್ನೂ ಕೇಳಿ ಬಂದಿರ ಬೇಕು. ನನ್ನ ಕತ್ತಿನಲ್ಲಿ ತಾಳಿ ತೂಗಿದಾಗಿಂದ ತುಪ್ಪದ ದೀಪ ಹಚ್ಚಿ ಮುತ್ತೈದೆಯಾಗಿ ಸಾಯುವ ಭಾಗ್ಯ ನನ್ನದಾಗಲಿ ಎಂದು ಬೇಡಿದ್ದು ಸಾರ್ಥಕವಾಗಲಿ ಎಂದು ನೀನೂ ಪ್ರಾರ್ಥಿಸು ಕಂದಾ. ಹೆತ್ತವರು ವಯಸ್ಸಾಗಿ ಎಷ್ಟೇ ನಮೆಯುತ್ತಿದ್ದರೂ ಮಕ್ಕಳಿಗೆ ಹೆತ್ತವರ ಸಾವನ್ನು ಪ್ರಾರ್ಥಿಸುವುದು ಸುಲಭವಲ್ಲ ಅಲ್ಲವಾ?? ನಾನಿಲ್ಲವಾದಾಗ ನನಗಿಂತ ಅತಿಯಾಗಿ ನಿನ್ನನ್ನು ಪ್ರೀತಿಸಿದ ನಿನ್ನ ತಂದೆಗೆ ಎಂತಹ ನೋವು ಆಗದಂತೆ ಕಾಪಾಡಿಕೊಂಡರೆ ನನಗದೇ ಭಾಗ್ಯ.

ಮುಪ್ಪು ಮನುಷ್ಯರ ಶತ್ರು ಕಣೋ,, ಬರೀ ರೋಗದ ಭೀತಿ, ನಿರ್ಲಕ್ಷ್ಯಕ್ಕೊಳಗಾಗಬಹುದೆಂಬ ಆತಂಕದ ಗೂಡು ಅದು. ಅವಲಂಬಿಸಿ ಬದುಕಲೂ ಕಷ್ಟವಾಗುವ ಅತ್ತ ಸಾಯಲೂ ಆಗದ ಸ್ಥಿತಿ. ಎಂತಹ ರೋಗವೂ ಬಾಧಿಸದೆ ನಿನ್ನ ಹೆತ್ತರಿಗೆ ಸುಖದ ಸಾವು ಬರಲೆಂದುಕೋ ಮಗನೇ.. ನಮಗೆ ಜಾಡ್ಯವಂಟಿದರೆ ನಿನಗೆಷ್ಟು ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ತೊಂದರೆಯಾಗಬಹುದೇನೋ ಎಂಬ ಆತಂಕ ನನಗೆ. ಆ ಕಾಲಕ್ಕೆ ದಯಾ ಮರಣವೆನ್ನುವುದು ನಮ್ಮ ದೇಶದಲ್ಲೂ ಜಾರಿಗೆ ಬಂದಿದ್ದರೆ ಒಂದು ರೀತಿಯಲ್ಲಿ ಮುಪ್ಪಿನಲ್ಲೂ ದಿನ ದೂಡಲು ಧೈರ್ಯ ಮತ್ತು ನೆಮ್ಮದಿ ಇರುತ್ತಿತ್ತು.

ಎಷ್ಟೋ ಜನ್ಮದ ಋಣಾನುಬಂಧದಿಂದ ನಾವು ಹೀಗೆ ಸಂಬಂಧ ಹೊಂದಿ ಸಂಧಿಸುತ್ತೇವಂತೆ.., ನನ್ನ ನಲ್ಮೆಯ ಗಂಡನಿಗೆ ಹೆಂಡತಿಯಾಗಿ, ನಿನ್ನಂತಹ ಅಕ್ಕರೆಯ ಕಂದನಿಗೆ ಬರುವ ಜನ್ಮದಲ್ಲಿಯೂ ಅಮ್ಮನಾಗುವ ಆಸೆ ಕಣೋ. ನನ್ನ ತಾಳ್ಮೆ ಮೀರಿದಾಗ ನಿನ್ನ ತಪ್ಪಿಲ್ಲದೆಯೂ ನೀನು ನನ್ನಿಂದ ಶಿಕ್ಷೆಗೊಳಗಾಗಿರಬಹುದು,,, ನನ್ನಂತಹ ಅಮ್ಮಂದಿರ ಸಹವಾಸ ಸಾಕು ಎಂದು ನಿನಗೆ ಯಾವತ್ತಾದರೂ ಎನ್ನಿಸಬಹುದು.. ಆದರೆ ಮಗೂ ಯಾವದನ್ನೂ ಮನಸ್ಸಿಗೆ ತಗೊಳ್ಳದೆ ನನ್ನ ಮುಂದಿನ ಜನ್ಮದಲ್ಲೂ ನೀ ನನಗೆ ಮಗನಾಗಿ ಬರುವೆ ಎಂದು ಸುಳ್ಳಾದರೂ ಒಮ್ಮೆ ಆಶ್ವಾಸನೆ ಕೊಟ್ಟುಬಿಡೋ. ಸಾಯುವ ಈ ಜೀವಕ್ಕೆ ಸಾವೂ ಒಂದು ಆಶಾ ಕಿರಣದಂತೆ ಕಾಣಬಹುದು....

ಇಂತಿ ನಿನ್ನ
ಅಮ್ಮ.