Wednesday, March 17, 2010

ಮರೆತ ನೆನಪುಗಳ ಮೇಲೊಂದು ಕವನ

ನೆನಪುಗಳೇ ನೀವೇಕೆ ಹೀಗೆ???

ನೆನಪುಗಳೇ,
ಈ ಬದುಕಿಗೆ
ಹಳೆಯ ನೆನಪುಗಳ ಮತ್ತದೇ ಮುನ್ನುಡಿ
ಬರೆಯದಿರಿ!!

ಬಿದ್ದ ಹೂವಿಗೆ
ಗಿಡವೆಂದೂ ಭೂತ,
ಗತಿಸಿದ್ದು
ತಿದ್ದಲಾಗದ ಬರಹ ಮಾತ್ರ.

ಪೂರ್ವ ಉತ್ತರವೋ, ಆಗ್ನೇಯ ಈಶಾನ್ಯವೋ
ಮನದ ಯಾವುದೋ ದಿಕ್ಕಿನಲ್ಲಿ
ಜಿರಲೆ ಕುಂಟೆ,
ಒಂದಿಷ್ಟು ಬಿಂಜಲುಗಳ ನಡುವೆ ಹೂತ
ದ್ರೌಪದಿಯ ಸೀರೆಯಂತೆ
ಸೆಳೆದಷ್ಟೂ ರೂಪುಗೊಳ್ಳುವ
ನೆನಪಿನ ಸರ
-ಮಾಲೆಗಳೇ
ಹೊತ್ತುಗೊತ್ತಿಲ್ಲದೆ
ನನ್ನಾವರಿಸಿ ಮಜ ನೋಡುವುದ
ಬಿಟ್ಟುಬಿಡಿ.

ನೆನಪುಗಳ ಪುಟಗಳನ್ನೆಲ್ಲ
ಹಳೆ ಪುಸ್ತಕದಂತೆ
ರದ್ದಿಗೆ ಕೊಟ್ಟು
ಹಗುರಾಗಿ ಹಾಯಾಗೋಣವೆಂದರೆ
ರದ್ದಿಯಾತನೂ ತೂಗಿದ
ಪುಟಗಟ್ಟಲೆ ಇರುವ ನೆನಪಿನ
ಪುಸ್ತಕವ..!!
ತೂಗಿ ತೂಗಿ ದಣಿವಾಗಿ
'ಬೇಡಮ್ಮ ನಿಮ್ಮ
ರದ್ದಿ,
ಕೊಡುವಷ್ಟು ಕಾಸಿಲ್ಲ,
ಪುಗಸಟ್ಟೆ ಕೊಟ್ಟೇನೆಂದರೂ
ಹೊತ್ತೊಯ್ಯಲು
ಬೆನ್ನಲ್ಲಿ ಕಸುವಿಲ್ಲ'
ಎಂದ.

ಮಂಕಾದೆ ಅವನ ಕೊಂಕಿಗೆ
ಮತ್ತೆ
ಹೊಂಚ ತೊಡಗಿದೆ
ನೆನಪುಗಳನ್ನೆಲ್ಲಾ ಹರಿದು ಹಂಚಿಬಿಡಲು..

ಒಮ್ಮೆಯಂತೂ
ದಿನ, ವಾರ, ತಿಂಗಳು ಕಳೆದು ವರ್ಷವೇ
ಕೂತೆ
ನೆನಪುಗಳ ಸುಟ್ಟಿಬಿಡಲು.
ಸುಟ್ಟೂ ಸುಟ್ಟು ಶಾಖಕೆ
ನಾ ಕರಕಲಾದೆ
ಮಶಿ ಇಂಗಾಳದಂತೆ.
ಆದರೂ ನಿಟ್ಟುಸಿರಿಟ್ಟಿದ್ದೆ ಪಾರಾದೆನೆಂದು,,,,

ನಿನ್ನೆ
ರಾತ್ರಿ ರಾಣಿಯ
ಸವಿಗಂಪ ತಾಳಲಾರದೆ
ಕಿಟಕಿಯಲ್ಲಿ ಇಣುಕಿದರೆ
ನೆನಪುಗಳ
ಬೂದಿಯಲ್ಲಿ
ಬೆಳದೊಂದು ಹೂವಿನ ಗಿಡ
ಘಮ ಘಮಿಸುವ ಹೂವ
ಹೊತ್ತು
ಸತ್ತ ನೆನಪುಗಳಿಗೆ
ಜೀವ ತುಂಬಿ
ಈ ಬದುಕಿಗೆ
ಹಳೆಯ ನೆನಪುಗಳ ಮತ್ತದೇ ಮುನ್ನುಡಿ
ಬರೆಯುತ್ತಿತ್ತು...


((((ತೇಜಸ್ವಿನಿಯವರೇ,
ನನ್ನ ನಿಜವಾದ ಹೆಸರು ಸಾಗರಿಯೂ ಅಲ್ಲ, ಚಿನ್ಮಯಿಯೂ ಅಲ್ಲ. ಸಾಗರಿಯ ಮೇಲೆ ಬಿದ್ದ ಚಿನ್ಮಯಿಯ ಸ್ವಗತಗಳ ಛಾಯೆಯೇ ನಾನು. ನನ್ನ ವಿವರವನ್ನು ಹೀಗೆ ಗೌಪ್ಯವಾಗಿ ಇಟ್ಟಿದ್ದಕ್ಕೆ ಕ್ಷಮಿಸಿ, ಆದರೂ ಕೆಲವು ಕಡೆ ನನ್ನ ಊರು, ಭಾಷೆ, ಹೆಸರಿನ ಹಿಂಟುಗಳನ್ನು ಇಟ್ಟಿದ್ದೇನೆ.
ಹುಟ್ಟೂರಿಗೆ ಅಚಾನಕ್ಕಗಿ ತೆರಳಿದ ಕಾರಣದಿಂದಾಗಿ ತಮ್ಮೆಲ್ಲರಿಗೂ ಸ್ವಲ್ಪ ತಡವಾಗಿ ಯುಗಾದಿಯ ಶುಭಾಷಯಗಳನ್ನು ಕೋರುತ್ತೇನೆ..(ಯುಗಾದಿಯನ್ನು ಉಗಾದಿ ಅಂತ ಕರ್ಯೋದ್ಯಾಕೆ?? ಗೊತ್ತಿದ್ದವರು ತಿಳಿಸಿ.) ))))


24 comments:

sunaath said...

ಸಾಗರಿ/ಚಿನ್ಮಯಿ/???,
ನಿಮ್ಮ ಕವನ ಸುಂದರವಾಗಿದೆ. ಕೆಲವು ನೆನಪುಗಳನ್ನು ಸುಟ್ಟು ಹಾಕಬೇಕೆನ್ನುತ್ತೀರಿ. ಆದರೆ, ಆ ಬೂದಿಯಿಂದ ಚಿಗುರಿ ನಿಲ್ಲುವ
ಹೂಸಸಿಯ ಪ್ರತೀಕ ಸೊಗಸಾಗಿದೆ.

ಸೀತಾರಾಮ. ಕೆ. / SITARAM.K said...

ಹೋದೆಯಾ ಪಿಶಾಚಿ ಎ೦ದರೇ ಬ೦ದೇ ಗವಾಕ್ಷಿಲ್ಲಿ ಎ೦ಬ ಹಾಗೆ ಗುಡಿಸಿ ಹೊರ ಎಸೆದರೂ ಮತ್ತೆ ಗೊತ್ತಾಗದ೦ತೆ ಒಳಸೇರಿ ಧುತ್ತೆ೦ದು ಎದುರಿ ನಿ೦ತು ಅಣಕಿಸುವದು -ನೆನಪುಗಳೇ!. ಚೆ೦ದದ ಕವನ ತಮ್ಮ ಹೆಸರೇನೇ ಇರಲಿ ಕವನ ಹಾಗೂ ಕಾವ್ಯನಾಮ ಮುದ್ದಾಗಿದೆ. ಆ೦ಗ್ಲಭಾಷೆಯಲ್ಲಿ ಯುಗಾದಿಯನ್ನು "UGADI "ಎ೦ದು ಬರೆಯುವರು ಅದನ್ನೇ ಕನ್ನಡ ಬರಹದಲ್ಲಿ ಟೈಪಿಸಿದರೆ "ಉಗಾದಿ" ಬರುತ್ತೆ ಎ೦ದು ನನ್ನ ಅ೦ಬೋಣ.

ಮನಮುಕ್ತಾ said...

ಸಾಗರಿ ಅವರೆ,
ಒಹ್..!ತು೦ಬಾ.. ಚೆನ್ನಾಗಿದೆ..!!:)

ತೇಜಸ್ವಿನಿ ಹೆಗಡೆ said...

ಛಾಯಾ ಅವರೆ, (=ಸಾಗರಿಯ ಮೇಲೆ ಬಿದ್ದ ಚಿನ್ಮಯಿಯ ಸ್ವಗತಗಳ ಛಾಯೆ :)

ನಿಮಗೂ ಹಾರ್ದಿಕ ಶುಭಾಶಯಗಳು. ತುಂಬಾ ಚೆನ್ನಾಗಿದೆ ನಿಮ್ಮ ನೆನಪುಗಳ ಮಾರಾಟ. ಅದರಲ್ಲೂ ಎರಡನೇ ಚರಣ ಮತ್ತೂ ಇಷ್ಟವಯಿತು.

ಇನ್ನು ಕೆಲವು ಅತಿರೇಕಗಳಲ್ಲಿ ಈ "ಉಗಾದಿ" ಶಬ್ದದ ಬಳಕೆಯೂ ಒಂದು. ಯುಗಾದಿ ಎಂದರೆ ಎಲ್ಲಿ ಸಂಸ್ಕೃತ ಪದದ ಛಾಯೆ ಕಂಡು ಕನ್ನಡಕ್ಕೆ ಅಪಚಾರವಾಗುವುದೋ ಎಂದೇ ಕೆಲವರು ಬಳಸುತ್ತಾರೆ. ಇನ್ನು ಕೆಲವರು ಹೊಸ ಯುಗದ ಉಗಮ ಎಂಬರ್ಥದಲೂ "ಉಗಾದಿ" ಪದವನ್ನು ಬಳಸಬಹುದೇನೋ... ಸರಿಯಾಗಿ ನನಗೂ ಗೊತ್ತಿಲ್ಲ :) ನನ್ನ ಪ್ರಕಾರ "ಯುಗಾದಿಯೇ" ಸರಿ.

Subrahmanya said...

ಸಾಗರಿಯವರೇ,

ತುಂಬಾ ಚೆನ್ನಾಗಿದೆ ಕವನ. (ಎಲ್ಲಾ ಹೇಳಿದ್ದಾರೆ ಮುಂಚೆ ಬಂದಿರೋರು..) ...:)..Good

Subrahmanya said...
This comment has been removed by the author.
ಗೌತಮ್ ಹೆಗಡೆ said...

kavana nice:)

Vinay Hegde said...

Nice one....nenapina bagge chennaagi chitrisiddiira...!!!! I Liked it...

ಸಾಗರದಾಚೆಯ ಇಂಚರ said...

ಸಾಗರಿ
ತುಂಬಾ ಮಧುರ ಕವನ
ಹಳೆಯ ನೆನಪುಗಳೇ ಹಾಗೆ
ಬೇಡವೆಂದರೂ ಬರುತ್ತವೆ
ಬಂದು ಕಾಡುತ್ತವೆ
ಕಾಡಿ ಬೇಡುತ್ತವೆ
ಬೇಡಿ ಓಡುತ್ತವೆ
ಓಡಿ ನಮ್ಮನ್ನೇ ಕೊಲ್ಲುತ್ತವೆ

ಜಲನಯನ said...

ಸಾಗರಿಯವರೇ..ಕಾಡುವ ನೆನಪುಗಳು ಕಾಣದ ಕನಸುಗಳು...ಮನದಾಳದಲ್ಲಿ ಕಾವುಕೊಡುವ ಇಚ್ಛೆಗಳು...ಇವು ಬಂದಷ್ಟೂ ಹೊರಕ್ಕೆ ಮುದಕೊಡುತ್ವೆ ಸುಖನೆನಪಾದ್ರೆ..ಕಹಿಯಾದ್ರೂ ಮುಂದಕ್ಕೆ ಎಚ್ಚರಿಕೆ ಸೂಚಕಗಳಾಗುತ್ತವೆ

ಸಾಗರಿ.. said...

ಕಾಕಾ,
ನನ್ನನ್ನು ಮರೆತು ಬಿಡು ಎನ್ನುವ ಹುಡುಗಿ, ನಿನ್ನ ಮರೆತುಬಿಟ್ಟೆ ಎಂದು ಹೊಗೆಯಾಗುವ(ನೆನಪನ್ನು ಸುಡಲು ಹೊಗೆ ಬತ್ತಿ
ಬಾಯಿಗೆ ಬರಬೇಕು ಕೆಲವರಿಗೆ!!) ಹುಡುಗ.. ಎಲ್ಲವೂ ಎಷ್ಟು ಹಾಸ್ಯಾಸ್ಪದ, ನಮ್ಮ ನೆನಪುಗಳು ನಾವಿರುವವರೆಗೂ ಜೀವಂತವೇ ಸರಿ. ಅದನ್ನು ಸುಡಲು, ಬಾಡಿಗೆ ಕೊಡಲು, ಹಂಚಿಬಿಡಲು ಸಾಧ್ಯವಿಲ್ಲ ಅಂತ ಹೇಳಬೇಕಿತ್ತು ಕವನದಲ್ಲಿ ನನಗೆ. ಸರಿಯಾಗಿ ಹೇಳಲು ನನ್ನ ಭಾವನೆಗಳು ಶಕ್ತವಾಗಿವೆಯೋ ಇಲ್ಲವೋ..! ನಿಮ್ಮೆಲ್ಲರ ಮಾತೇ ಕನ್ನಡಿ ನನಗೆ

ಸಾಗರಿ.. said...

ಸೀತಾರಾಮ್ ಸರ್,
ನೆನಪುಗಳು ಒಮ್ಮೆ ನಗುವಾಗಿ, ಒಮ್ಮೆ ಅಳುವಾಗಿ, ಒಮ್ಮೆ ನಿಟ್ಟುಸಿರಾಗಿ ಹೊರಬರುತ್ತವೆ ಬಿಟ್ಟರೆ ಅವುಗಳು ನಮ್ಮೊಂದಿಗೆ
ನಾವಿರುವವರೆಗೂ ಇರುತ್ತವೆ, ನೆನಪಿಗೆ ನಾವಿರುವವರೆಗೂ ಸಾವಿಲ್ಲ. ಕವನ ಓದಿದ್ದಕ್ಕೆ ಧನ್ಯವಾದಗಳು.

ಸಾಗರಿ.. said...

ಮನಮುಕ್ತಾ ಅವರೆ,
ಕವನವನ್ನು ಓದಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

ಸಾಗರಿ.. said...

ತೇಜಸ್ವಿನಿಯವರೇ,
ಛಾಯಾ ಎಂಬ ಹೆಸರೂ ಚೆನ್ನಾಗಿದೆ. ಧನ್ಯವಾದಗಳು. ಕವನವನ್ನು ಓದಿ ಆಸ್ವಾದಿಸಿದ್ದಕ್ಕೆ .
ಯು(ಉ)ಗಾದಿಯ ಬಗ್ಗೆಯೂ ತಿಳಿಸಿದ್ದಕ್ಕೆ, ಮತ್ತೊಮ್ಮೆ ಧನ್ಯವಾದಗಳು

ಸಾಗರಿ.. said...

ಶಂಭುಲಿಂಗ ಅವರೇ,
ಕವನವನ್ನು ಓದಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು.

ಸಾಗರಿ.. said...

ಗೌತಮ್ ಅವರೇ,
ಧನ್ಯವಾದಗಳು.

ಸಾಗರಿ.. said...

ವಿನಯ್ ಅವರೇ,
ಕವನ ನಿಮಗೆಲ್ಲ ಹಿಡಿಸಿದರೆ ನನಗದೇ ಖುಷಿ.

ಸಾಗರಿ.. said...

ಗುರು ಅವರೇ,
ನನ್ನ ಕವನಕ್ಕಿಂತ ನಿಮ್ಮ ಕಾಮೆಂಟೇ ಚೆನ್ನಾಗಿದೆ. ಓಡಿ ಕೊಲ್ಲುವ ನೆನಪುಗಳು ಒಮ್ಮೊಮ್ಮೆ ಕಚಗುಳಿಯನ್ನೂ ಇಡುವವು. ಧನ್ಯವಾದಗಳು.

ಸಾಗರಿ.. said...

ಅಜಾದ್ ಸರ್,
ನೆನಪುಗಳು ಹಾಗೇ ಅಲ್ಲವೇ, ಒತ್ತಿದಷ್ಟೂ ಒತ್ತರಿಸಿ ಬರುವುದು. ನೆನಪಿನ ಪುಟಗಳ ಸುಟ್ಟರೂ ನೆನಪುಗಳು ಮಾಸಲ್ಲ.
ಕವನ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

Ittigecement said...

ನಮಸ್ತೆ...

ನಿಮಗೂ ಉಗಾದಿ ಹಬ್ಬದ ಶುಭಾಶಯಗಳು..
ಕವನ ತುಂಬಾ ಚೆನ್ನಾಗಿದೆ...

ನಿಮ್ಮ ಉಗಾದಿ. ಯುಗಾದಿ ಸಂಶಯದ ಬಗೆಗೆ ಕಳೆದ ವರ್ಷ ನನ್ನ ಲೇಖನದ ಪ್ರತಿಕ್ರಿಯೆಯಲ್ಲಿ ಸಣ್ಣ ಸಂವಾದ ನಡೆದಿತ್ತು.
ಅಲ್ಲಿ ಚಂದ್ರ ಕಾಂತ ಅನ್ನುವಗುರು ಮಾತಾ ನಮ್ಮೆಲ್ಲರ ಸಂಶಯ ಪರಿಹರಿಸಿದ್ದರು..
ದಯವಿಟ್ಟು ಈ ಲಿಂಕಿನ ಪ್ರತಿಕ್ರಿಯೆಯನ್ನು ಓದಿ...
ಸಂಶಯ ನಿವಾರಣೆಯಾಗುತ್ತದೆ..

ಪ್ರಕಾಶಣ್ಣ..

http://ittigecement.blogspot.com/2009/03/blog-post_26.html

ಮನಸಿನಮನೆಯವನು said...

'ಸಾಗರಿ' ಅವ್ರೆ..,

ಸೊಗಸಾದ ಕವನ...

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

ಸಾಗರಿ.. said...

ಪ್ರಕಾಶಣ್ಣ,
ತುಂಬಾ ಧನ್ಯವಾದಗಳು. ಉಗಾದಿ ಬಗ್ಗೆಯೂ ಓದಿ ತಿಳಿದುಕೊಂಡೆ.

ಸಾಗರಿ.. said...

ಗುರುದೆಸೆ ಅವರೇ,
ಪ್ರೀತಿಯ ಆಹ್ವಾನಕ್ಕೆ ಧನ್ಯವಾದಗಳು. ಖಂಡಿತ ಮನಸಿನ ಮನೆಗೆ ಶೀಘ್ರವೆ ಬರುವೆ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ನೆನಪುಗಳೇ ಹಾಗೆ
ಬೇಡವೆಂದರೂ ಬರುತ್ತವೆ....
ತುಂಬಾ ಚೆನ್ನಾಗಿದೆ ಕವನ